ತಮಿಳುನಾಡಿನಲ್ಲೊಂದು ಸಿನಿಮಾ ಸಮಾರಂಭ ನಡೆದಿತ್ತು. ಆ ಬೃಹತ್ ಕಾರ್ಯಕ್ರಮದಲ್ಲಿ ನಮ್ಮ ಸಾಲುಮರದ ತಿಮ್ಮಕ್ಕ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಿಮ್ಮಕ್ಕ ವೇದಿಕೆ ಮೇಲೆ ಮಾತಾಡಬೇಕಾಗಿತ್ತು. ಆದರೆ ತಿಮ್ಮಕ್ಕ ಮಾತಾಡುವ ಕನ್ನಡ ಅಲ್ಲಿನ ಜನಕ್ಕೆ ಹೇಗೆ ತಾನೆ ಅರ್ಥವಾಗಲು ಸಾಧ್ಯ? ವೇದಿಕೆಯಲ್ಲಿದ್ದ ನಿರೂಪಕಿ ‘ತಿಮ್ಮಕ್ಕ ಅವರ ಮಾತುಗಳನ್ನು ತಮಿಳಿಗೆ ತರ್ಜುಮೆ ಮಾಡಲು ಇಲ್ಲೇ ವೇದಿಕೆಯ ಮುಂಭಾಗದಲ್ಲಿ ನಗುನಗುತ್ತಾ ಕೂತಿರುವ ರಶ್ಮಿಕಾ ಮಂದಣ್ಣ ಅವರು ಬರಬೇಕು ಎಂದು ಆಹ್ವಾನಿಸಿದರು. ವಯ್ಯಾರದಿಂದ ಬಂದ ರಶ್ಮಿಕಾ ತಿಮ್ಮಕ್ಕ ಹೇಳಿದ್ದನ್ನು ಹೇಳಲು ತಿಣಿಕಾಡಿದಳು. ತಕ್ಷಣ ಅದೇ ಸ್ಟೇಜಿನಲ್ಲಿ ಇದ್ದ ಕಾಮಿಡಿ ನಟ ವಿವೇಕ್ ಮೈಕು ಇಸಿದುಕೊಂಡವರೇ ಮಾತು ಶುರು ಮಾಡುತ್ತಾರೆ. ತಿಮ್ಮಕ್ಕನ ಬಗ್ಗೆ ಸ್ವತಃ ಅವರೇ ಸುದೀರ್ಘವಾಗಿ ಪರಿಚಯಿಸುತ್ತಾ ಸಾಗುತ್ತಾರೆ…
“ಮದುವೆಯಾದ ನಂತರ ಮಕ್ಕಳಿಲ್ಲದ ಕಾರಣ ಆ ದುಃಖವನ್ನು ಪರಿಸರದೊಂದಿಗೆ ಒಪ್ಪಿಸಿದವರು. ನಾನು ನೆಟ್ಟು ಬೆಳೆಸುವ ಒಂದೊಂದು ಮರವೂ ಒಂದೊಂದು ಮಗುವಿದ್ದಂತೆ ಅಂತಾ ತೀರ್ಮಾನಿಸಿದವರು. ೧೯೧೦ರಲ್ಲಿ ಹುಟ್ಟಿದ ಅವರು ೧೦೭ ವರ್ಷ ಮುಗಿಸಿ ೧೦೮ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದಂರ್ಭದಲ್ಲಿ ಅವರು ಹಲವಾರು ಪ್ರಶಸ್ತಿಗಳನ್ನು ಪಡೆದಿರುವುದಲ್ಲದೆ ೨೦೧೯ರಲ್ಲಿ ಇಂಡಿಯಾದ ಅತಿ ಶ್ರೇಷ್ಠ ಬಿರುದಾದ ಪದ್ಮಶ್ರೀ ಬಿರುದನ್ನೂ ಸಹ ತನ್ನದಾಗಿಸಿಕೊಂಡಿದ್ದಾರೆ. ಸಾಲುಮರದ ತಿಮ್ಮಕ್ಕ ಎಂದೇ ಖ್ಯಾತರಾಗಿರುವ ಇವರು, ತಮ್ಮ ಪತಿ ಬದುಕಿದ್ದಾಗ ಅವರೊಡನೆ ಪ್ರತಿ ದಿನ ಸೈಕಲ್ನಲ್ಲಿ ನಾಲ್ಕು ಬಿಂದಿಗೆ ನೀರನ್ನು ತೆಗೆದುಕೊಂಡು ೫ ಕಿ.ಮೀ. ದೂರದವರೆಗೂ ನೆಟ್ಟಿದ್ದ ಮರಗಳಿಗೆ ನೀರು ಹಾಕಿ, ೩೮೫ ಆಲದ ಮರಗಳನ್ನು ಬೆಳೆಸಿದ್ದಾರೆ. ಬಿಬಿಸಿ ರೇಡಿಯೋ ನಡೆಸಿದ ದೇಶದ ಅತಿ ಮುಖ್ಯವಾದ ೧೦೦ ಸಾಧಕ ಮಹಿಳೆಯರ ಪಟ್ಟಿಯಲ್ಲಿ ನಮ್ಮ ತಾಯಿ ಸಾಲು ಮರದ ತಿಮ್ಮಕ್ಕ ಒಬ್ಬರೂ ಸಹ ಇದ್ದಾರೆ. ಅಮೆರಿಕಾದ ಕ್ಯಾಲಿಫೋರ್ನಿಯಾದ ಲಾಸ್ ಎಂಜಲೀಸ್ನಲ್ಲಿ ಪರಿಸರ ಅಧ್ಯಯನ ಕೇಂದ್ರಕ್ಕೆ ಸಾಲು ಮರದ ತಿಮ್ಮಕ್ಕ ಅವರ ಹೆಸರಿಟ್ಟಿದ್ದಾರೆ. ಕರ್ನಾಟಕ, ತಮಿಳು ನಾಡು ಮಾತ್ರವಲ್ಲದೆ ಇಂಡಿಯಾದ ಎಲ್ಲ ಜನತೆಗೂ ೧೦೭ನೇ ವಯಸ್ಸಿನಲ್ಲಿಯೂ ಮರ ನೆಡಲು ಆದರ್ಶವಾಗಿದ್ದಾರೆ. ೧೦೭ ವರ್ಷ ಅವರು ಬದುಕಿದ ಬದುಕಿಗೆ ಕಾರಣ ಅವರು ನೆಟ್ಟ ಸಾವಿರಾರು ಮರಗಳ ಆಶೀರ್ವಾದ ಎಂದು ಹೇಳಬಯಸುತ್ತೇನೆ.
ಹೀಗೆ ಸಾಲುಮರದ ತಿಮ್ಮಕ್ಕ ಎಂಬ ಕನ್ನಡದ ಕುಡಿಯ ಬಗ್ಗೆ ವಿವೇಕ್ ಮಾತಾಡುತ್ತಿದ್ದರೆ ಸಮಾರಂಭದಲ್ಲಿ ನೆರೆದಿದ್ದ ಜನ ಕೈ ತಟ್ಟುತ್ತಾ, ತಿಮ್ಮಕ್ಕ ಅವರನ್ನು ಗೌರವಿಸುತ್ತಾರೆ. ವಿವೇಕ್ ‘ನಮ್ಮೆಲ್ಲರ ತಾಯಿ ಸಾಲುಮರದ ತಿಮ್ಮಕ್ಕ ಎನ್ನುತ್ತಿದ್ದಂತೇ ಅಲ್ಲಿದ್ದವರ ಕಣ್ಣುಗಳಲ್ಲಿ ಆನಂದದ ಕಣ್ಣೀರು ಜಿನುಗುತ್ತದೆ. ಆದರೆ ನಮ್ಮ ನಾಡಿನ ಸಾಧಕಿಯ ಬಗ್ಗೆ ಏನೇನೂ ತಿಳಿದುಕೊಳ್ಳದೆ, ಬೆಬ್ಬೆಬ್ಬೆ ಅಂದಾ ರಶ್ಮಿಕಾ ಮಂಕುಮಂಕಾಗಿ ಕಣ್ಣರಳಿಸಿಕೊಂಡು ನಿಂತಿರುತ್ತಾಳೆ!
No Comment! Be the first one.