ಗಿರೀಶ್ ಕಾರ್ನಾಡರನ್ನು ಹೇಗೆ ಗ್ರಹಿಸಬೇಕು ಎಂಬುದೇ ಕನ್ನಡ ವಿಮರ್ಶಕರಿಗೆ ಪ್ರಶ್ನೆಯಾಗಿದೆ. ಏಕೆಂದರೆ ಅವರು ಅರ್ಧ ಶತಮಾನದ ಕಾಲ ಕನ್ನಡ ರಂಗಭೂಮಿಯಲ್ಲಿ ವಿಜೃಂಭಿಸಿದ ಕೈಲಾಸಂ-ಶ್ರೀರಂಗರ ವಾಸ್ತವವಾದಿ ಸಂಪ್ರದಾಯಕ್ಕೂ ಅವರು ಸೇರಿಲ್ಲ. ಹಾಗೆಯೇ ಐವತ್ತರ ದಶಕದಲ್ಲಿ ಸಾಕಷ್ಟು ಯಶಸ್ಸು ಗಳಿಸಿ ಪ್ರಭಾವಿಯಾಗಿದ್ದ ‘ನವ್ಯ’ ಸಂಪ್ರದಾಯಕ್ಕೂ ಅವರು ಸೇರಿಲ್ಲ. ವಾಸ್ತವವಾದಿ ಪರಂಪರೆಯ ಕಾಲದಲ್ಲಿಯೂ ತನ್ನತನವನ್ನು ಹೇಗೋ ಉಳಿಸಿಕೊಂಡಿದ್ದ ವೃತ್ತಿಪರ(ಕಂಪನಿ) ನಾಟಕ ಪರಂಪರೆಗೂ ಅವರು ಹೊರತಾಗಿದ್ದಾರೆ. ಆದರೆ ಇವೆಲ್ಲಾ ಪರಂಪರೆಗಳ ಕೆಲವಂಶಗಳನ್ನು ಅವರ ನಾಟಕಕಗಳಲ್ಲಿ ನಾವು ಗುರುತಿಸಬಹುದು. ಬ್ರೆಕ್ಟ್ ಮತ್ತು ಆನ್ವಿ (Brecht-Anovilh) ಅವರ ಪ್ರಭಾವ ಅಲ್ಲಲ್ಲಿ ಕಂಡು ಬಂದರೂ ಬ್ರೆಕ್ಟ್ನ್ ಎಡಪಂಥೀಯ ಧೋರಣೆಗಳಾಗಲಿ ಆನ್ವಿಯ ನೈರಾಶ್ಯವಾಗಲಿ ಕಾರ್ನಾಡರಲ್ಲಿ ಇಲ್ಲ. ಹಾಗಾದರೆ ಕಾರ್ನಾಡರು ಎಂತಹ ನಾಟಕಕಾರರು.? ಅವರ ನಾಟಕಗಳ ಮೂಲ ಪ್ರೇರಣೆಗಳೇನು.? ಕಾರ್ನಾಡರ ಬೇರುಗಳು ಕನ್ನಡ ಸಾಂಸ್ಕೃತಿಕ ಪರಂಪರೆಯಲ್ಲಿ ಇಲ್ಲವೆಂದು ಆಗಿಂದಾಗ್ಗೆ ಕನ್ನಡ ವಿಮರ್ಶಕರು ಮಂಡಿಸುತ್ತಿದ್ದಾರೆ.
‘ಕಾರ್ನಾಡರದ್ದು ಕೊಂಕಣಿ ಮನೋಧರ್ಮ. ಅವರು ನಿಜವಾದ ಅರ್ಥದಲ್ಲಿ ಕನ್ನಡಿಗರಲ್ಲ ಎಂದು ಕೆಲವರು ಟೀಕಿಸಿದ್ದಾರೆ. ಕಾರ್ನಾಡರು ಆಲ್ ಇಂಡಿಯಾ ನಾಟಕಕಾರರೆಂದು ಅವರಲ್ಲಿ ‘ಕನ್ನಡತನ’ ಅಷ್ಟಾಗಿ ಇಲ್ಲವೆಂಬುದು ರಂಗ ನಿರ್ದೇಶಕರುಗಳಾದ ಪ್ರಸನ್ನ, ಅಕ್ಷರ ಹಾಗೂ ವಿಮರ್ಶಕರಾದ ಚಂಪಾ ಮುಂತಾದವರ ಅಭಿಪ್ರಾಯ. “ಗಿರೀಶರು…..ಎಲ್ಲೋ ಕನ್ನಡದ ಜಾಯಮಾನದಿಂದ ಹೊರಗೆ ಉಳಿದುಬಿಡುತ್ತಾರೆ…ಇದು ಬರೀ ವ್ಯಕ್ತಿಯ ಸಮಸ್ಯೆ ಮಾತ್ರ ಅಲ್ಲ. ಇದು ಅವರ ಕೃತಿಯ ಸಮಸ್ಯೆಯೂ ಹೌದು” ಎಂದು ರಂಗ ನಿರ್ದೇಶಕ ಪ್ರಸನ್ನ ಅವರ ಅಭಿಮತವಾಗಿದೆ. ಅಂತೆಯೇ ಲಂಕೇಶರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ “…….ಈತ ಇದನ್ನೆಲ್ಲಾ ಮಂಗೋಲಿಯಾದಲ್ಲಿ ಮಾಡಿದ್ದರೂ ವ್ಯತ್ಯಾಸವಿರುತ್ತಿರಲಿಲ್ಲ; ಅಷ್ಟಿದೆ ಇವರ ಕನ್ನಡದ ಬೆಸುಗೆ” ಎಂದು ತೀರ್ಮಾನಿಸುತ್ತಾರೆ. ಕೆ.ವಿ. ಅಕ್ಷರ ಹಯವದನ ನಾಟಕ ಕುರಿತು ಮಾತನಾಡುವಾಗ “ಈ ನಾಟಕ ಎಲ್ಲ ಜಾನಪದ ಅಂಶಗಳನ್ನೂ ಆಯ್ಕೆಮಾಡಿ ಅಳವಡಿಸಿದ ದೃಷ್ಟಿ ಪಾಶ್ಚಾತ್ಯ ಧೋರಣೆಯುಳ್ಳದ್ದು….. ನಮ್ಮ ಸಾಂಪ್ರದಾಯಿಕ ರಂಗಭೂಮಿಯನ್ನು ಹೀಗೆ ಪಾಶ್ಚಾತ್ಯ ಕಣ್ಣುಗಳಿಂದ ನೋಡಿದ ಕಾರಣಕ್ಕಾಗಿಯೇ ಈ ಒಟ್ಟು ಕಟ್ಟಡಕ್ಕೆ ಒಂದು ‘ಫಾರಿನ್ ರಿಟರ್ನ್ಡ್ ಕಥೆಯೇ ಅಗತ್ಯವಾಗಿರಬೇಕು”. ಇಷ್ಟಲ್ಲದೆ ಚಂಪಾ ಸಂಕ್ರಮಣದ ಒಂದು ಸಂಚಿಕೆಯಲ್ಲಿ “ಕಾರ್ನಾಡರ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಬೇಕು” ಎಂದು ಗೇಲಿ ಮಾಡಿದ್ದನ್ನು ನೆನಪಿಸಬಹುದು. ಈ ಎಲ್ಲಾ ನಿಲುವುಗಳು ಸಮಾನವಾಗಿ ತೋರಿಸುವ ಒಂದು ಅಂಶವೆಂದರೆ ಕಾರ್ನಾಡರ ನಾಟಕಗಳ ಒಳಗೆ ಅವಿತಿರುವ ನಾವೀನ್ಯತೆ. ಇನ್ನು ‘ಪರಂಪರೆ’, ‘ಸಾತತ್ಯ’ ಇತ್ಯಾದಿ ಯಾವುವೂ ಸಿದ್ಧ ವಸ್ತುಗಳಲ್ಲ. ಅವುಗಳು ಆಯಾಯ ವಿಮರ್ಶಕನ ಮತ್ತು ಇತಿಹಾಸಕಾರನ ವೈಚಾರಿಕ ಪರಿಪ್ರೇಕ್ಷ್ಯವನ್ನು ಅನುಸರಿಸಿ ಬದಲಾಗುವ ಸಾಪೇಕ್ಷ ರಚನೆಗಳು. ಈ ಸಂದರ್ಭದಲ್ಲಿ ಗ್ರಹಿಸಬಹುದಾದ ಮತ್ತೊಂದು ಸತ್ಯ ಸಂಗತಿ ಎಂದರೆ ಮೇಲೆ ಹೆಸರಿಸಿದ ರಂಗ ನಿರ್ದೇಶಕರ ಹಾಗೂ ವಿಮರ್ಶಕರ ಅಭಿಪ್ರಾಯಗಳನ್ನು ಒಪ್ಪಬೇಕಾದ ವಿಚಾರ ಗಿರೀಶ್ ಕಾರ್ನಾಡರ ಮಾತಿನಿಂದಲೇ ಅರಿವಾಗುತ್ತದೆ.
“ನನ್ನ ತಲೆಮಾರಿನ ಅನಂತಮೂರ್ತಿ, ಲಂಕೇಶ ಅಥವಾ ತೇಜಸ್ವಿ ಕನ್ನಡ ಸಂಸ್ಕೃತಿಯೊಳಗೆ ಇನ್ವಾಲ್ವ್ ಆದ ಹಾಗೆ ನಾನು ಆಗಿಲ್ಲ. ಏಕೆ ಎಂದು ನನಗೆ ಗೊತ್ತಿಲ್ಲ ಆಗೋಕೆ ಸಾಧ್ಯವೂ ಆಗಿಲ್ಲ. ಪ್ರಾಯಶಃ ಅನಂತಮೂರ್ತಿ ಲಂಕೇಶ್ ಅವರೆಲ್ಲಾ ಯೂನಿವರ್ಸಿಟಿಗಳಲ್ಲಿ ಕಳೆದರು ಅನ್ನುವುದು ಕಾರಣವಿರಬಹುದು”. ಎಂದು ಅಭಿಪ್ರಾಯಿಸುತ್ತಾರೆ. ಒಟ್ಟಿನಲ್ಲಿ ನಾಟಕ ಕಟ್ಟುವ ಕ್ರಿಯೆಯನ್ನು ಕಟ್ಟಡ ಕಟ್ಟುವ ಕ್ರಿಯೆಗೆ ಹೋಲಿಸುವ ಗಿರೀಶ ಕಾರ್ನಾಡರು ಕನ್ನಡ ನಾಟಕ ಜಗತ್ತಿನಲ್ಲಿ ತಮ್ಮದೇ ನೆಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಆನೆ ನಡೆದದ್ದೇ ದಾರಿ ಅನ್ನುವ ಹಾಗೆ ನಾಟಕ ಕ್ಷೇತ್ರದಲ್ಲಿ ನಡೆದ ಅದ್ಬುತ ಪ್ರತಿಭಾವಂತ ಅನ್ನುವುದು ಮಾತ್ರ ಅತಿಶಯೋಕ್ತಿಯಲ್ಲ.
ತುಘಲಕ್
ತುಘಲಕ್ ನಾಟಕವು ಕಾರ್ನಾಡರ ನಾಟಕಗಳಲ್ಲಿಯೇ ಬಹು ಚರ್ಚಿತವಾದ ನಾಟಕ. ಈ ನಾಟಕವು ಅವರಿಗೆ ರಾಷ್ಟ್ರೀಯ ಸ್ಥಾನಮಾನಗಳನ್ನು ತಂದುಕೊಟ್ಟಿತು. ಪ್ರಾಯಶಃ ಈ ನಾಟಕದ ರಚನೆಯು ಭಾರತೀಯ ರಂಗಭೂಮಿಯ ದಿಕ್ಕನ್ನು ಬದಲಿಸಿತು ಎಂದರೆ ಅತಿಶಯೋಕ್ತಿ ಆಗಲಾರದು. ‘ತುಘಲಕ್’ ನಾಟಕವು ಹಲವಾರು ಭಾರತೀಯ ಮತ್ತು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಭಾಷಾಂತರಗೊಂಡಿದೆ ಮತ್ತು ಬಿ.ಬಿ.ಸಿಯಲ್ಲಿ ಸಹ ಬಿತ್ತರಗೊಂಡಿದೆ. ಈ ನಾಟಕದ ಇಂಗ್ಲೀಷ್ ಅನುವಾದಕ್ಕೆ ಮುನ್ನುಡಿ ಬರೆದ ಡಾ. ಯು.ಆರ್. ಅನಂತಮೂರ್ತಿಯವರು ಹೀಗೆ ಹೇಳುತ್ತಾರೆ “……………….ಪ್ರಾಯಃ ಆಳ ಹಾಗೂ ವಿಸ್ತಾರದ ನೆಲೆಯಲ್ಲಿ ಅದಕ್ಕೆ ಹೋಲಿಸಬಹುದಾದ ಮತ್ತೊಂದು ನಾಟಕ ಕನ್ನಡದಲ್ಲಿ ಇಲ್ಲ. ಕನ್ನಡ ಸಾಹಿತ್ಯದ ಮೇರು ಕೃತಿಗಳಲ್ಲಿ ಇದೊಂದು ಎಂಬುದರಲ್ಲಿ ಸಂದೇಹವೇ ಇಲ್ಲ”. ಈ ಮಾತಿನಲ್ಲಿ ಅದರ ಯೋಗ್ಯತೆಯನ್ನು ಗುರುತಿಸಬಹುದು. 1964ರಲ್ಲಿ ಹೊರಬಂದ ಈ ನಾಟಕದ ಹಿಂದಿದ್ದ ಪ್ರೇರಣೆಯನ್ನು ಕುರ್ತುಕೋಟಿಯವರ ಹೇಳಿಕೆಯೊಂದರಲ್ಲಿ ಸ್ವತಃ ಕಾರ್ನಾಡರೇ ಗುರುತಿಸುತ್ತಾರೆ. ‘ನಡೆದು ಬಂದ ದಾರಿ’ಯ ಪ್ರತಿ ಸಂಪುಟಕ್ಕೂ ಬರೆದ ದೀರ್ಘ ಸಮೀಕ್ಷೆಗಳಲ್ಲಿ ಕನ್ನಡದ ಐತಿಹಾಸಿಕ ನಾಟಕಗಳ ಬಗ್ಗೆ ಕುರ್ತುಕೋಟಿಯವರು ಹೀಗೆ ಬರೆದಿದ್ದರು. “ಆದರೆ ಐತಿಹಾಸಿಕ ವಿಷಯವನ್ನು ಉಪಯೋಗಿಸಿಕೊಂಡು ಅದರ ಮುಖಾಂತರ ಸತ್ಯದ ಹೊಸ ಪದರುಗಳನ್ನು ಹುಡುಕಿ ತೆಗೆಯುವ ಪ್ರಯತ್ನವನ್ನು ಯಾರೂ ಮಾಡಿಲ್ಲ… ಹಳೆಯದನ್ನು ಪುನರುಜ್ಜೀವಿಸುವುದರ ಜೊತೆಗೆ, ಹಳೆಯದನ್ನು ಹೊಸತಾಗಿ ನೋಡುವ ದೃಷ್ಟಿಯೊಂದು ನಮ್ಮಲ್ಲಿ ಬರಬೇಕು. ಇತಿಹಾಸದ ಕಚ್ಚಾ ಮಾಲನ್ನು ಉಪಯೋಗಿಸಿಕೊಂಡು ಹೊಸ ಕಲಾಕೃತಿಗಳು ಹುಟ್ಟಬೇಕಾಗಿದೆ.”10 ಕೀರ್ತಿನಾಥ ಕುರ್ತಕೋಟಿಯವರ ಇಂತಹ ಮೌಲ್ಯಯುತ ಮಾತುಗಳು ಕಾರ್ನಾಡರಿಗೆ ಹೊಸ ಆಲೋಚನೆಗೆ ದಾರಿ ಮಾಡಿಕೊಟ್ಟಿತು ಎಂದರೆ ತಪ್ಪಾಗುವುದಿಲ್ಲ. ಈ ಸಮಯದಲ್ಲಿ ಕಾರ್ನಾಡರು ಲಂಡನ್ನಿನಲ್ಲಿದ್ದರು. ಕೀರ್ತಿನಾಥ ಕುರ್ತುಕೋಟಿಯವರ ಆಲೋಚನೆಗಳನ್ನು ಗ್ರಹಿಕೆಯಲ್ಲಿಟ್ಟುಗೊಂಡರು. ಹಾಗೆಯೇ ‘ಯಯಾತಿ’ ನಾಟಕ ಪ್ರಕಟವಾದ ಮೇಲೆ ಮನೋಹರ ಗ್ರಂಥಮಾಲೆಯ ಜಿ.ಬಿ ಜೋಶಿಯವರು ಇನ್ನೊಂದು ನಾಟಕ ಬರೆಯಲು ಒತ್ತಡ ಹಾಕಿದರು. ಈ ಸಂದರ್ಭವನ್ನು ಕಾರ್ನಾಡರು ಹೀಗೆ ನೆನಪಿಸಿಕೊಂಡಿದ್ದಾರೆ. “ನಾನು ಲೈಬ್ರರಿಗೆ ಹೋದೆ. ಒಂದು ಸುಲಭೀಕೃತ ಭಾರತದ ಇತಿಹಾಸದ ಪಠ್ಯಪುಸ್ತಕವನ್ನು ತೆಗೆದುಕೊಂಡೆ. ಮೆಹಂಜೊದಾರೋದಿಂದ ಪಠ್ಯ ಆರಂಭಿಸಿದೆ. ಓದುತ್ತೋದುತ್ತ ಮೌರ್ಯರು, ಯವನರು, ಹೂಣರು, ಗುಪ್ತರು, ಪಲ್ಲವರು, ಚೋಳರು ಇವರನ್ನೆಲ್ಲ ಅರಗಿಸುತ್ತ ನನ್ನ ಓದು ಹದಿನಾಲ್ಕನೆಯ ಶತಮಾನದಲ್ಲಿ ಮಹಮ್ಮದ್ ತುಘಲಕನ ಆಳ್ವಿಕೆಯನ್ನು ತಲುಪಿತು. ನಾನು ಹುಡುಕುತ್ತಿದ್ದ ಸಾಮಾಗ್ರಿ ಅಲ್ಲಿ ನನಗಾಗಿಯೇ ಕಾಯ್ದುಕೊಂಡು ಕೂತಂತಿತ್ತು: ಮಹಮ್ಮದ್ ತುಘಲಕನ ‘ಹುಚ್ಚ’ ಕಾರಭಾರ” ಹೀಗೆ ತುಘಲಕನ ಬಗ್ಗೆ ನಾಟಕ ಬರೆಯಲು ನಿರ್ಧರಿಸಿ, ಅನಂತರ ಸುಮಾರು ಎರಡು ವರ್ಷಗಳ ಕಾಲ ತುಘಲಕ್ ಬಗ್ಗೆ ಮತ್ತು ಅವನ ಕಾಲದ ಬಗ್ಗೆ ಲಭ್ಯವಿದ್ದ ಎಲ್ಲಾ ದಾಖಲೆಗಳನ್ನು ಅಧ್ಯಯನ ಮಾಡಿದರು. ಇಂಗ್ಲೆಂಡಿನಲ್ಲಿ ಇವರು ವಿದ್ಯಾಭ್ಯಾಸ ಮಾಡುತ್ತಿದ್ದಾಗ ಆ ತಲೆಮಾರಿನ ವಿದ್ಯಾರ್ಥಿಗಳಲ್ಲಿ ಅಸ್ತಿತ್ವವಾದ ( Existentialism) ತುಂಬಾ ಲೋಕಪ್ರಿಯವಾದ ತತ್ವಪ್ರಣಾಲಿಯಾಗಿತ್ತು. ಅದು ಸಾತ್ರ, ಕಮೂ ಮೊದಲಾದ ಫ್ರೆಂಚ್ ಲೇಖಕರ ಪ್ರಭಾವದಿಂದಾಗಿ ಅಂತಾರಾಷ್ಟ್ರೀಯ ಚರ್ಚೆಯ ವಿಷಯವಾಗಿತ್ತು. ಆದರೆ ಆಕ್ಸ್ ಫರ್ಡ್ನಲ್ಲಿ ‘ಐರಿಸ್ ಮರ್ಡಾಕ್’ ಒಬ್ಬರನ್ನು ಬಿಟ್ಟರೆ ಉಳಿದ ತತ್ವಜ್ಞರಿಗೆ ಅಸ್ತಿತ್ವವಾದದಲ್ಲಿ ಆಸಕ್ತಿ ಇರಲಿಲ್ಲ. ಅಸ್ತಿತ್ವವಾದದಲ್ಲಿ ದೇವರೂ ಒಂದು ಪಾತ್ರ. ಮನುಷ್ಯನಿಗೂ ದೇವರಿಗೂ ಇರುವ ಸಂಬಂಧ ಅದು ಅನ್ವೇಷಿಸುವ ಸಮಸ್ಯೆಗಳಲ್ಲಿ ಪ್ರಮುಖವಾದದ್ದು. ಮಹಮ್ಮದ್ ತುಘಲಕನ ಬಗ್ಗೆ ಓದುವಾಗ ಅವನ ಜೀವನದ ಎರಡು ಅಂಶÀಗಳು ಕಾರ್ನಾಡರನ್ನು ಒಮ್ಮೆಲೆ ಆಕರ್ಷಿಸಿಕೊಂಡವು. ಮೊದಲನೆಯದಾಗಿ ಅವನು ದಿಲ್ಲಿಯಲ್ಲಿ ಪಟ್ಟಕ್ಕೆ ಬಂದ ಸುಲ್ತಾನರಲ್ಲೇ ಅತ್ಯಂತ ಪ್ರತಿಭಾವಂತರಾಗಿದ್ದರೂ ಕೊನೆಗೂ ತನ್ನ ಸಮಕಾಲೀನ ಕಣ್ಣಲ್ಲಿ ಭವಿಷ್ಯದ ಎಣಿಕೆಯಲ್ಲಿ ‘ಹುಚ್ಚ’ ಎಂದೇ ಸಾಬೀತಾದ. ಎರಡನೆಯದಾಗಿ ಅವನು ತನ್ನ ಆಳ್ವಿಕೆಯಲ್ಲಿ ಸುಮಾರು ಐದು ವರುಷ ಸಾರ್ವಜನಿಕ ಪ್ರಾರ್ಥನೆಯನ್ನೇ ನಿಲ್ಲಿಸಿ ಬಿಟ್ಟಿದ್ದ. ಇದನ್ನೋದಿದ ಗಳಿಗೆಗೆ ಕಾರ್ನಾಡರಿಗೆ ರೋಮಾಂಚಿತವಾಯಿತು. ಆಗ ಇವನು ನಾಸ್ತಿಕ ಎಂದು ಭಾವಿಸಿದ್ದರು. ತುಘಲಕ್ನ ಈ ದಂಗು ಬಡಿಸುವ ಯೋಜನೆ ಕೂಡ ಅವನ ನಾಸ್ತಿಕತ್ವದಿಂದಲೇ ಬಂದದ್ದು ಎಂದು ನಂಬಿದ್ದರು. ಆದರೆ ಅವನ ಬಗ್ಗೆ ಓದುತ್ತ ಹೋದಂತೆ ಅವನ ಧಾರ್ಮಿಕ ತುಮುಲದಿಂದಲೇ ಈ ನಿರ್ಣಯ ಹುಟ್ಟಿದ್ದೆಂದು ಅವರಿಗೆ ಮನವರಿಕೆಯಾಯಿತು. ದೇವರಲ್ಲಿ ನಂಬಿಕೆ ಇಡುವುದು ಸುಲಭದ ಮಾತಾಗಿರಲಿಲ್ಲ. ಅದೊಂದು ಕಠಿಣ ತಪಸ್ಸೆ ಆಗಿತ್ತು. ಹೀಗಾಗಿ ಕಾರ್ನಾಡರಿಗೆ ‘ಯಯಾತಿ’ ಬರೆದಷ್ಟು ಸುಲಭವಾಗಿ ತುಘಲಕ್ ಬರೆಯಲು ಸಾಧ್ಯವಾಗಲಿಲ್ಲ. 14ನೆಯ ಶತಮಾನದಲ್ಲಿ ದಿಲ್ಲಿಯನ್ನಾಳಿದ ಮೊಹಮ್ಮದನ ಚರಿತ್ರೆ ಕಾರ್ನಾಡರಿಗೆ ‘ಐತಿಹಾಸಿಕ ನಾಟಕಕ್ಕೆ ಅದ್ಭುತ ವಿಷಯ’ ಎಂದು ಆಯ್ಕೆಮಾಡಿಕೊಂಡಿದ್ದಾರೆ. ಈ ನಾಟಕವನ್ನು ಸಾಮಾನ್ಯವಾಗಿ ಕೆಲ ವಿಮರ್ಶಕರು ‘ನೆಹರೂ ಯುಗ’ದ ನಾಟಕವೆಂದು ಕರೆದಿದ್ದಾರೆ. ಇದಕ್ಕೆ ಕಾರಣವೆಂದರೆ ನೆಹರೂ ಕಂಡ ಕನಸುಗಳು ಮತ್ತು ಅವುಗಳು ಕಂಡ ವಿಫಲತೆ ಇವೆರಡೂ ‘ತುಘಲಕ್’ ನಾಟಕದಲ್ಲಿ ಪ್ರತಿಫಲಿತವಾದಂತೆ ಕಾಣುವುದರಿಂದ. ಆದರೆ ಈ ಕುರಿತು ವಿಮರ್ಶಾ ವಲಯದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ‘ತುಘಲಕ್ ನಾಟಕವು ತುಘಲಕ್ ದೊರೆಯ ಕನಸುಗಳನ್ನು ಕುರಿತಾಗಿದೆ ಎಂಬುದು ನಿಜ. ಆದರೆ ನಾಟಕವು ಆತನ ಆದರ್ಶಗಳನ್ನು ಹೆಚ್ಚಾಗಿ ಕೇಂದ್ರದಲ್ಲಿಟ್ಟುಕೊಂಡು ಬೆಳೆಯುತ್ತದೆ. ಮಿದುಳಿನ ಕೆಲಸ ಪ್ರಖರವಾಗಿರುವ, ಆದರ್ಶವನ್ನು ಹೊಂದಿರುವ, ಹಿಂಸೆಯತ್ತ ವಾಲುವ ತುಘಲಕ್ನು ನಾಟಕದ ವಿಮರ್ಶೆ ಮಾಡುವಾಗ ಪ್ರಮುಖ ವ್ಯಕ್ತಿಯಾಗಿ ಕಾಣುತ್ತಾನೆ. ಕಾರ್ನಾಡರು ಚಿತ್ರಿಸಿದಂತೆ ಮಹಮ್ಮದ ಒಬ್ಬ ಅಪರೂಪದ ಕನಸುಗಾರ, ಆದರ್ಶವಾದಿ. “ಇತಿಹಾಸ ನಮ್ಮದು! ನಾವು ಬೆಳಕಾಗಿ ಬಾಳನ್ನು ಚಿಗುರಿಸೋಣ” ಎಂಬ ಕರೆ. “ಈ ಹೊತ್ತಿನಲ್ಲಿ ಹುಗಿದು ಹೋದವರಿಗೆ ನಾಳಿನ ಬುದ್ಧಿ ಹೇಗೆ ಬಂದೀತು?” ಎಂಬ ಎಚ್ಚರ. “ನನಗೆ ರಾಜ್ಯದಲ್ಲಿ ಸಮತೆ ಬೇಕು, ತರ್ಕ ಶುದ್ಧ ನ್ಯಾಯ ಬೇಕು. ಶಾಂತಿಯಿದ್ದರೆ ಸಾಕಾಗಲಿಲ್ಲ, ಜೀವ ಕಳೆ ಬೇಕು” ಎಂಬ ಹಂಬಲ ಅವರ ಆದರ್ಶವಾದಿತ್ವವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಆದರೆ ಈ ಶ್ರೇಷ್ಠ ನೈತಿಕ ಮೌಲ್ಯಗಳಿಗೂ ಅವನು ರಾಜನೀತಿಯಲ್ಲಿ ಅನುಸರಿಸುವ ಕುಟಿಲ ಕ್ರಮಗಳಿಗೂ ಪರಿಹರಿಸಲಾರದ ವಿರೋಧವಿದೆ. ತನ್ನ ಆಳ್ವಿಕೆಯನ್ನು ಟೀಕಿಸಿದ ಧರ್ಮಗುರು ಶೇಖ ಇಮಾಮುದ್ದೀನನ ನಾಶ. ತನ್ನ ವಿರುದ್ಧ ಒಳಸಂಚು ನಡೆಸಿದ ಅಮೀರರ ಕೊಲೆ. ತನ್ನಲ್ಲಿ ಅಪಾರ ವಿಶ್ವಾಸವಿದ್ದ ಮಲತಾಯಿಗೆ ಕೊಡುವ ಶಿಕ್ಷೆ – ಇಂಥ ಕ್ರಮಗಳು ಅಧಿಕಾರವನ್ನು ಉಳಿಸಿಕೊಳ್ಳಲು ಅವನು ಕೈಗೊಳ್ಳುವ ಕ್ರೂರ ಕೃತ್ಯಗಳ ಉಪಾಯಗಳು. ಅವನು ಅರಸನಾಗುವುದೇ ಮೋಸದಿಂದ. ತಂದೆ, ತಮ್ಮಂದಿರನ್ನು ಕೊಲ್ಲುವುದರ ಮೂಲಕ. ಮಹ್ಮದನ ಚರಿತ್ರೆಯ ವ್ಯಂಗ್ಯವೆಂದರೆ ಅವನ ಆದರ್ಶವಾದವೇ ಅವನ ರಾಜನೀತಿಯ ಸೋಲನ್ನು ನಿರ್ಧರಿಸುವುದು. ಹಿಂದೂಗಳ ಬಗ್ಗೆ ಅವನು ತೋರುವ ನಿಷ್ಪಕ್ಷಪಾತ ಅವನಲ್ಲಿ ವಿಶ್ವಾಸವನ್ನು ಹುಟ್ಟಿಸುವುದರ ಬದಲು ಸಂಶಯಕ್ಕೆ ಕಾರಣವಾಗುತ್ತದೆ. ಮುಸಲ್ಮಾನರನ್ನು ಎದುರು ಹಾಕಿಕೊಳ್ಳುತ್ತದೆ. ತನ್ನ ರಾಜಧಾನಿಯನ್ನು ದಿಲ್ಲಿಯಿಂದ ರಾಜ್ಯದ ಮಧ್ಯವರ್ತಿ ದೌಲತಾಬಾದಿಗೆ ವರ್ಗಾಯಿಸುವ ಅವನ ತರ್ಕಬದ್ಧ ನಿರ್ಣಯ ಅಮೀರರ ಶತ್ರುತ್ವಕ್ಕೆ ಕಾರಣವಾಗುತ್ತದೆಯಲ್ಲದೆ, ಜನರಿಗೆ ಅಪಾರ ಕಷ್ಟ ನೋವುಗಳನ್ನು ತರುತ್ತದೆ. ಹೊಸ ನಾಣ್ಯ ಪದ್ಧತಿಯನ್ನು ರೂಢಿಗೆ ತರಬೇಕೆನ್ನುವ ಅವನ ದೂರದರ್ಶಿ ಯೋಜನೆ ರಾಜ್ಯದ ಅರ್ಥವ್ಯವಸ್ಥೆ ಕುಸಿದು ಬೀಳುವುದಕ್ಕೆ ಕಾರಣವಾಗುತ್ತದೆ. ಆದರ್ಶ ರಾಜ್ಯವನ್ನು ಕಟ್ಟಬೇಕೆನ್ನುವ ಅವನ ಕನಸು ಅರಾಜಕತೆ, ರಕ್ತಪಾತಗಳಲ್ಲಿ ಕೊನೆಗೊಳ್ಳುತ್ತದೆ. ಪ್ರಜೆಗಳಿಗೆ ಹತ್ತಿರವಾಗಲು ಪ್ರಯತ್ನಿಸಿದಷ್ಟು ಅವನು ಅವರಿಂದ ದೂರವಾಗುತ್ತ ಹೋಗುತ್ತಾನೆ. “ನೂರಾರು ಕಾಯಿಲೆಗಳ ಹುತ್ತವಾಗಿದೆ ನನ್ನ ರಾಜ್ಯ” ಎಂದು ಮಹಮ್ಮದನೇ ಈ ಸತ್ಯವನ್ನು ಗುರುತಿಸುತ್ತಾನೆ. ರಾಜಕಾರಣದಲ್ಲಿ ದೇವರ ಅಗತ್ಯವಿಲ್ಲ ಎಂದು ಸಾರಿ ತಾನೇ ದೇವರಾಗುವ ಹಟತೊಟ್ಟ ಮಹತ್ವಾಕಾಂಕ್ಷಿ ಹುಚ್ಚನೆಂದು ಇತಿಹಾಸದಲ್ಲಿ ದಾಖಲಾಗುತ್ತಾನೆ. ಈ ದುರಂತಕ್ಕೆ ಮುಖ್ಯ ಕಾರಣ ಮಹಮ್ಮದನ ವ್ಯಕ್ತಿತ್ವದ ಮೂಲಭೂತ ಅಸಂಗತತೆ. ಆದರ್ಶ-ಅಧಿಕಾರದಾಹ, ಧರ್ಮ- ರಾಜಕಾರಣ, ದೇವರು-ಮನುಷ್ಯ, ಬುದ್ಧಿ-ರಕ್ತ, ತರ್ಕ-ಭಾವನೆ ಇಂಥ ದ್ವಂದ್ವಗಳಲ್ಲಿಯೂ ಪರಿಹಾರವಿಲ್ಲದ ವಿರೋಧ ಅಂತರ್ಗತವಾಗಿದೆ. ಈ ದ್ವಂದ್ವಗಳ ನಿಯಂತ್ರಣದಲ್ಲಿ ಮನುಷ್ಯ ತನ್ನ ಸುಖ-ಶಾಂತಿಗಳನ್ನು ಕಂಡುಕೊಳ್ಳಬೇಕಾಗಿದೆ. |
ಸಿನಿಬಜ್ ಮುಖ್ಯಸ್ಥರ ಅನುಮತಿ ಇಲ್ಲದೇ ಯಾವುದೇ ಜಾಲಾತಾಣಗಳು ಗಿರೀಶ್ ಕಾರ್ನಾಡರ ಲೇಖನಗಳನ್ನು ಬಳಸಿಕೊಳ್ಳುವಂತಿಲ್ಲ. ಹಾಗೇನಾದರೂ ಕಂಡು ಬಂದಲ್ಲಿ ಸೂಕ್ತ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. |
No Comment! Be the first one.