ನೀರ್ ದೋಸೆ ಸಿನಿಮಾದ ನಂತರ ವಿಜಯ್ ಪ್ರಸಾದ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ ತೋತಾಪುರಿ. ಈಗಾಗಲೇ ಟೈಟಲ್ ಮೂಲಕವೇ ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ಈ ಚಿತ್ರವೂ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇತ್ತೀಚಿಗೆ ತೋತಾಪುರಿಯ ಕುರಿತಾಗಿ ಹೊಸ ಸುದ್ದಿ ಹೊರಬಿದ್ದಿದ್ದು, ಈ ಚಿತ್ರವು ಎರಡು ಭಾಗಗಳಲ್ಲಿ ತಯಾರಾಗಲಿದೆಯಂತೆ. ಹೌದು ಮೊದಲ ಭಾಗದ ಕೊನೆಯಲ್ಲಿ ಎರಡನೆ ಭಾಗದಲ್ಲಿ ಏನಾಗಲಿದೆ ಎನ್ನುವ ಸುಳಿವು ನೀಡಲಿದ್ದಾರಂತೆ ವಿಜಯ್ ಪ್ರಸಾದ್. ತೋತಾಪುರಿ ಒಟ್ಟಾರೆ ಒಂದೂವರೆ ಗಂಟೆಯ ಚಿತ್ರವಾಗಿದ್ದು, ಸಂಪೂರ್ಣ ಸಿನಿಮಾವನ್ನು ಒಮ್ಮೆಗೆ ತೋರಿಸಲು ಸಾಧ್ಯವಾಗದ ಕಾರಣ ಎರಡು ಭಾಗಗಳಾಗಿ ಡಿವೈಡ್ ಮಾಡಲಾಗಿದೆಯಂತೆ. ಎರಡು ಭಾಗಗಳಿಗೂ ಒಂದೇ ಟೈಟಲ್ ಕ್ಯಾರಿಯಾಗಲಿದ್ದು, ಟ್ಯಾಗ್ ಲೈನ್ ಮಾತ್ರವೇ ಬದಲಾವಣೆಯಾಗಲಿದೆ. ಮೊದಲ ಭಾಗದಲ್ಲಿ ತೋತಾಪುರಿ ‘ತೊಟ್ಟು ಕೀಳ್ಬೇಕು’ ಅಂತ ಇದ್ರೆ, ಎರಡನೆ ಭಾಗದಲ್ಲಿ ‘ತೊಟ್ಟು ಕಿತ್ತಾಯ್ತು’ ಎಂದು ಟ್ಯಾಗ್ ಲೈನ್ ಇಡಲಾಗಿದೆಯಂತೆ.
ಭಾರಿ ಕುತೂಹಲ ಮೂಡಿಸಿರುವ ‘ತೋತಾಪುರಿ’ ದಸರಾ ಹಬ್ಬಕ್ಕೆ ಅಥವಾ ಕ್ರಿಸ್ ಮಸ್ ಗೆ ಮೊದಲ ಪಾರ್ಟ್ ರಿಲೀಸ್ ಮಾಡುವ ಪ್ಲ್ಯಾನ್ ನಲ್ಲಿ ಚಿತ್ರತಂಡವಿದೆ. ಮೊದಲ ಭಾಗಕ್ಕೆ ಸಿಗುವ ಪ್ರತಿಕ್ರಿಯೆಯ ಆಧಾರದ ಮೇಲೆ ಎರಡನೇ ಪಾರ್ಟ್ ಬಿಡುಗಡೆ ದಿನಾಂಕ ನಿಗದಿ ಮಾಡಲಿದ್ದಾರಂತೆ. ಈಗಾಗಲೇ 90 ದಿನಗಳ ಚಿತ್ರೀಕರಣ ಮುಕ್ತಾಯವಾಗಿದ್ದು, 60 ದಿನಗಳ ಚಿತ್ರೀಕರಣವೂ ಬಾಕಿ ಇದೆ. ಇನ್ನು ಚಿತ್ರದ ಎರಡು ಭಾಗದಲ್ಲಿ ತಲಾ ಎರಡೆರಡು ಹಾಡುಗಳು ಮಾತ್ರ ಇರಲಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು ನೀರ್ ದೋಸೆ ಕಾಂಬಿನೇಷನ್ನಿನ ಜಗ್ಗೇಶ್, ಸುಮನ್ ರಂಗನಾಥ್ ತೋತಾಪುರಿಯಲ್ಲಿಯೂ ಮುಂದುವರೆಯಲಿದ್ದು, ಇವರಿಗೆ ಅದಿತ್ ಪ್ರಭುದೇವ, ಡಾಲಿ ಧನಂಜಯ್ ಸಾಥ್ ನೀಡಲಿದ್ದಾರೆ. ಇನ್ನು ತೋತಾಪುರಿಗೆ ಕೆ.ಎ. ಸುರೇಶ್ ಬಂಡವಾಳ ಹೂಡುತ್ತಿದ್ದಾರೆ.
No Comment! Be the first one.