ಬಿ.ಎಂ. ಗಿರಿರಾಜ್ ನಿರ್ದೇಶನದ ನಾಲ್ಕು ಚಿತ್ರಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಮೂರಕ್ಕೆ ರಾಜ್ಯ ಪ್ರಶಸ್ತಿ ಬಂದಿದೆ! ನವಿಲಾದವರು ಅನ್ನೋ ಕಿರುಚಿತ್ರದ ಮೂಲಕ ಚಾಲ್ತಿಗೆ ಬಂದ ಗಿರಿರಾಜ್ ಅದಕ್ಕೂ ಮುನ್ನ ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದವರು. ತೀರಾ ಸಣ್ಣವಯಸ್ಸಗೇ ರಂಗಭೂಮಿಯ ಸಾವಾಸಕ್ಕೆ ಬಿದ್ದ ಕಾರಣದಿಂದಲೋ ಏನೋ ಗಿರಿರಾಜ್ ಯಾವುದೇ ಸಿನಿಮಾ ಮಾಡಿದರೂ ಅದರಲ್ಲಿ ಪವರ್ಫುಲ್ ಕಂಟೆಂಟ್ ಇದ್ದೇ ಇರುತ್ತದೆ.
ಅದ್ವೈತ, ಜಟ್ಟ, ಮೈತ್ರಿ, ಅಮರಾವತಿಯಂಥ ಸಿನಿಮಾಗಳನ್ನು ಕೊಟ್ಟಿರುವ ಗಿರಿರಾಜ್ ಈಗ ಏಕಾಏಕಿ ‘ತುಂಡ್ ಹೈಕ್ಳ ಸಾವಾಸ’ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ. ಈ ಸಿನಿಮಾದ ಟೈಟಲ್ ಕೇಳಿದ ಕೂಡಲೇ “ಗಿರಿರಾಜ್ ಈ ವರೆಗೂ ಮಾಡಿದ ಸಿನಿಮಾಗಳಿಗೂ, ಈ ಚಿತ್ರಕ್ಕೂ ಏನೋ ವ್ಯತ್ಯಾಸವಿದ್ದಂತೆ ಕಾಣುತ್ತಿದೆಯಲ್ಲಾ?” ಅನ್ನಿಸೋದು ಸಹಜ. ಈ ಸಿನಿಮಾದ ಟ್ರೇಲರ್ ನೋಡಿದರಂತೂ ‘ಗಿರಿ ಗ್ಯಾರೆಂಟಿ ಬದಲಾಗಿದ್ದಾರೆ’ ಅನ್ನೋ ತೀರ್ಮಾನಕ್ಕೆ ಬರುವಂತಿದೆ.
ಆದರೆ, ಗಿರಿರಾಜ್ ಅವರ ತಲೆಯೊಳಗಿನ ಸರಕು ಇವತ್ತಿಗೇ ಖಾಲಿಯಾಗುವಂತದಲ್ಲ. ಮತ್ತವರು ಬದಲಾಗುವುದೂ ಇಲ್ಲ. ಈ ಸಿನಿಮಾದ ನಿರೂಪಣೆಯ ಶೈಲಿಯನ್ನು ಒಂಚೂರು ಬದಲಾಯಿಸಿಕೊಂಡಿದ್ದಾರೆ ಅಷ್ಟೇ. ಜವಾಬ್ದಾರಿಯಿಲ್ಲದೇ ತಿರುಗಾಡಿಕೊಂಡಿರುವ ನಾಲ್ಕು ಜನ ಹುಡುಗರು. ಅವರ ಧೋರಣೆಗಳನ್ನು ಬದಲಿಸಲು ಗುರುವಿನಂತೆ ಬರುವ ಕಿಶೋರ್, ಸಮಾಜದ ಮೌಲ್ಯಗಳಿಗಾಗಿ ಹೋರಾಟ ನಡೆಸುವ ನಾಯಕಿ… ಇವೆಲ್ಲವನ್ನೂ ಕಾಮಿಡಿಯ ಮೂಲಕ ಹೇಳಹೊರಟಿದ್ದಾರೆ ಗಿರಿರಾಜ್. ಇದೇ ವಾರ ಅಂದರೆ, ಫೆಬ್ರವರಿ ೧೪ರಂದು ಸಿನಿಮಾ ತರೆಗೆ ಬರುತ್ತಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಕಿಶೋರ್, ಖಾದಿ ಗ್ರಾಮೋದ್ಯೋಗ ಸಂಘವನ್ನು ಉಳಿಸಿಕೊಳ್ಳಲು ಹೋರಾಡುವ ಪಾತ್ರದಲ್ಲಿ ವೈಶಾಲಿ ದೀಪಕ್, ಮತ್ತು ಅಭಯ್ ಸೂರ್ಯ, ಶಂಕರ್, ಕಿರಣ್ ನಾಯಕ್ ಮತ್ತು ಕಾಮಿಡಿ ನಟ ಗಿರೀಶ ಈ ಚಿತ್ರದ ತುಂಡ್ ಹೈಕ್ಳುಗಳಾಗಿ ಪಾತ್ರ ನಿರ್ವಹಿಸಿದ್ದಾರೆ.
No Comment! Be the first one.