ಥ್ರಿಲ್ಲರ್ ಜಾನರಿನ ಸಿನಿಮಾಗಳ ಸಾಲಿಗೆ ಸುನೀಲ್ ಕುಮಾರ್ ದೇಸಾಯಿಯವರ ಕೊಡುಗೆ ಸಾಮಾನ್ಯವಚಾದದ್ದೇನಲ್ಲ. ಎಂಭತ್ತರ ದಶಕದಲ್ಲಿ ಈ ವೆರೈಟಿಯ ಸಿನಿಮಾ ಮೂಲಕ ಸದ್ದು ಮಾಡಿದ್ದ ದೇಸಾಯಿಯವರು ಈಗ ನಿರ್ದೇಶನ ಮಾಡಿರೋ ಉದ್ಘರ್ಷ ಚಿತ್ರವೂ ಹೊಸಾ ಆವೆಗದೊಂದಿಗೆ ಬಿಡುಗಡೆಗೆ ತಯಾರಾಗಿದೆ. ಈ ಹಂತದಲ್ಲಿಯೂ ಈ ಸಿನಿಮಾ ಕಡೆಯಿಂದ ಶುಭ ವಾರ್ತೆಗಳು ಅಡಿಗಡಿಗೆ ಹೊರ ಬೀಳುತ್ತಲೇ ಇವೆ. ಹೊಸಾ ವಿಚಾರವೆಂದರೆ, ಉದ್ಘರ್ಷ ಮಲೆಯಾಳಂ ಭಾಷೆಗೂ ಡಬ್ ಆಗುತ್ತಿದೆ!
ಸುನೀಲ್ ಕುಮಾರ್ ದೇಸಾಯಿ ಉದ್ಘರ್ಷ ಚಿತ್ರವನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕ ಕಾಲದಲ್ಲಿಯೇ ನಿರ್ದೇಶನ ಮಾಡಿದ್ದಾರೆ. ಇದು ಈಗಾಗಲೇ ಉಚ್ಚಕಟ್ಟಕಂ ಎಂಬ ಹೆಸರಿನಲ್ಲಿ ತಮಿಳಿಗೂ ಡಬ್ ಆಗಿದೆ. ಇದೇ ಹೊತ್ತಲ್ಲಿ ಬೇರೆ ಬೇರೆ ಭಾಷೆಗಳಲ್ಲಿಯೂ ಈ ಸಿನಿಮಾದ ಡಬ್ಬಿಂಗ್ ರೈಟ್ಸ್ ಗಾಗಿ ಬೇಡಿಕೆಗಳು ಬರುತ್ತಿವೆ. ಉದ್ಘರ್ಷ ಮಲೆಯಾಳಂಗೆ ಡಬ್ ಆಗೋದು ಪಕ್ಕಾ ಆಗಿದೆ.
ದೇಸಾಯಿ ಚಿತ್ರಗಳಿಗೆ ಮಲೆಯಾಳಂ ಭಾಷೆಯಲ್ಲಿ ಮಾರುಕಟ್ಟೆಯಿದೆ. ಅವರ ಸಿನಿಮಾಗಳನ್ನು ಎಂಜಾಯ್ ಮಾಡೋ ಪ್ರೇಕ್ಷಕ ವರ್ಗವೂ ಅಲ್ಲಿದೆ. ಯಾಕೆಂದ್ರೆ ಈ ಹಿಂದೆಯೂ ದೇಸಾಯಿಯವರ ಒಂದಷ್ಟು ಸಿನಿಮಾಗಳು ಮಲೆಯಾಳಂಗೆ ಡಬ್ ಆಗಿದ್ದವು. ತರ್ಕ, ನಿಷ್ಕರ್ಷ, ಮರ್ಮ ಚಿತ್ರಗಳು ಮಲೆಯಾಳ ಪ್ರೇಕ್ಷಕರ ಮನ ಗೆದ್ದಿದ್ದವು. ಈ ಬಾರಿ ಉದ್ಘರ್ಷವೂ ಮಲೆಯಾಳಂಗೆ ಡಬ್ ಆಗಿ ಯಶ ಕಾಣೋದರಲ್ಲಿ ಸಂದೇಹವೇನಿಲ್ಲ.
ಪರಭಾಷೆಗಳಲ್ಲಿಯೂ ಉದ್ಘರ್ಷಕ್ಕಾಗಿ ಈ ಪಾಟಿ ಬೇಡಿಕೆ ಬಂದಿರೋದಕ್ಕೆ ಕಾರಣ ಈ ಸಿನಿಮಾ ತಯಾರಾದ ರೀತಿ ಮತ್ತು ಅದ್ಭುತ ಥ್ರಿಲ್ಲರ್ ಕಥಾನಕ. ಈ ಚಿತ್ರದ ಮೂಲಕ ದಕ್ಷಿಣ ಭಾರತದ ಖ್ಯಾತ ಖಳನಟ ಠಾಕೂರ್ ಅನೂಪ್ ಸಿಂಗ್ ನಾಯಕನಾಗಿ ಹೊರ ಹೊಮ್ಮಿದ್ದಾರೆ. ತಮಿಳಿನ ಕಬಾಲಿ ಖ್ಯಾತಿಯ ಧನ್ಸಿಕಾ ಹಾಗೂ ನವ ನಟಿ ತಾನ್ಯಾ ಹೋಪ್ ನಾಯಕಿಯರಾಗಿ ಅಭಿನಯಿಸಿದ್ದಾರೆ.
ಬಾಲಿವುಡ್ ವಿಲನ್ ಕಬೀರ್ ಸಿಂಗ್ ದುಹಾನ್, ತೆಲುಗಿನ ಬಾಹುಬಲಿ ಖ್ಯಾತಿಯ ಪ್ರಭಾಕರ್, ಶ್ರವಣ್ ರಾಘವೇಂದ್ರ, ವಂಶಿ ಕೃಷ್ಣ, ಶ್ರದ್ಧಾ ದಾಸ್ ಮುಂತಾದವರು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಹುಭಾಷಾ ತಾರೆ, ಕನ್ನಡಿಗ ಕಿಶೋರ್ ಮತ್ತೊಂದು ಪ್ರಮುಖ ಹಾಗೂ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದರೆ, ಹರ್ಷಿಕಾ ಪೂಣಚ್ಚ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪಿ. ರಾಜನ್ ಹಾಗೂ ದಿವಂಗತ ವಿಷ್ಣುವರ್ಧನ್ ಅವರು ಕ್ಯಾಮರಾ ವರ್ಕ್ ಮಾಡಿದ್ದರೆ, ಹಿಂದಿಯ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಸಂಜೋಯ್ ಚೌಧುರಿ ಸಂಗೀತ ನೀಡಿದ್ದಾರೆ. ಇನ್ನು ಚಿತ್ರಕ್ಕೆ ನಿರ್ದೇಶಕ ದೇಸಾಯಿ ಅವರ ಸ್ನೇಹಿತ ಆರ್. ದೇವರಾಜ್ ಹಣ ಹೂಡಿದ್ದು, ರಾಜೇಂದ್ರ ಹಾಗೂ ಡಿ. ಮಂಜುನಾಥ್ ಸಹ ನಿರ್ಮಾಪಕರಾಗಿದ್ದಾರೆ. ಡಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಮೂಡಿ ಬಂದಿದೆ.
#
No Comment! Be the first one.