ಮೀನು ಹಿಡಿಯುವ ಕಾಯಕ ನಡೆಸುವ ಬೆಸ್ತರ ಹುಡುಗನಿಗೆ ಮತ್ಸಕನ್ಯೆಯಂಥಾ ನಾಯಕಿಯ ಮೇಲೆ ಲವ್ವಾಗುತ್ತದೆ. ಆದರೆ ಆ ಪ್ರೀತಿಯನ್ನು ಅಷ್ಟೇನೂ ಸೀರಿಯಸ್ ಆಗಿ ತೆಗೆದುಕೊಳ್ಳದ ನಾಯಕಿ ನಾಯಕನ ಮೇಲೆ ಪ್ರೀತಿಯ ಅಸ್ತ್ರವನ್ನು ಬಳಸಿ ಬಕರಾ ಮಾಡುತ್ತಾಳೆ. ಅಷ್ಟರಲ್ಲಾಗಲೇ ಊರ ಗೌಡನ ಮಗನಿಗೆ ನಾಯಕಿಯ ಮೇಲೆ ಲವ್ವಾಗಿರುತ್ತದೆ. ಪ್ರೀತಿಗಾಗಿ ಮೀನು ಹಿಡಿಯುವ ನಾಯಕ ಮತ್ತು ಕಣ್ಣು ಹಾಕಿದ ಗೌಡನ ಮಗನ ನಡುವೆ ನಡೆಯುವ ಕಾಳಗದಲ್ಲಿ ಯಾರು ಗೆಲ್ಲುತ್ತಾರೆ? ಪವಿತ್ರವಾದ ಪ್ರೀತಿಗೆ ಆಗುಬಹುದಾದ ಅಡಚಣೆಗಳೇನು? ಅನ್ನೋದು ಉಡುಂಬಾ ಕಥೆ.
ಸಿನಿಮಾ ಮಧ್ಯದಲ್ಲಿ ಅಲ್ಲಲ್ಲಿ ಕಾಣ ಸಿಗುವ ಟ್ವಿಸ್ಟುಗಳು, ಟರ್ನುಗಳು, ನಾಯಕ ನಾಯಕಿಗಾಗಿ ಹೊಡೆಯುವ ರಗಡ್ ಅಂಡ್ ಮೀನಿಂಗ್ ಫುಲ್ ಡೈಲಾಗುಗಳು ಪ್ರೇಮಿಗಳ ಮೈ ಮನಸ್ಸಿನೊಳಗೆ ಪುಳಕವನ್ನುಂಟು ಮಾಡುತ್ತದೆ. ಬೆಸ್ತರ ಹುಡುಗನ ಪಾತ್ರದಲ್ಲಿ ನಟ ಪವನ್ ಶೌರ್ಯ ನಟನೆ ಚೆನ್ನಾಗಿದೆ. ಆ್ಯಕ್ಷನ್ ಸೀಕ್ವೆನ್ಸ್ ಗಳಲ್ಲಿ ಪವನ್ ಹುಂಬತನದಲ್ಲಿಯೇ ಮಿಂಚು ಹರಿಸಿದ್ದಾರೆ. ಇನ್ನು ನಾಯಕಿಯಾಗಿ ಹುಲಿರಾಯ ಖ್ಯಾತಿಯ ಚಿರಶ್ರೀ ಅಂಚನ್ ಮುದ್ದಾಗಿ ನಟಿಸಿದ್ದಾರೆ. ಊರಿನ ಗೌಡನಾಗಿರುವ ಶರತ್ ಲೋಹಿತಾಶ್ವ ಅವರ ಅಭಿನಯ ಉಡುಂಬಾ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಇನ್ನು ಕುಣಿಯಲು ಪೀಡಿಸಿ ಕಾಡಿಸಿದ್ದ ಸಂಜನಾ ಐಟಂ ಸಾಂಗಿನಲ್ಲಿ ಮೈ ಬಿಸಿ ಏರುವಂತೆ ಸಕ್ಕತ್ತಾಗಿಯೇ ಕುಣಿದಿದ್ದಾಳೆ. ಇನ್ನು ಈ ಚಿತ್ರದ ದೃಶ್ಯವೊಂದರಲ್ಲಿ ನಾಯಕಿಯನ್ನು ಬಗಲಲ್ಲಿ ನಿಲ್ಲಿಸಿಕೊಂಡ ನಾಯಕ ರೌಡಿಗಳ ಎದೆ ಅದುರುವಂತೆ ಉದುರಿಸುವ ಸುದೀರ್ಘ ಡೈಲಾಗು ಹೆಚ್ಚು ಮನಮುಟ್ಟುವಂತಿದೆ.
ಸರಾಗವಾಗಿ ಸಾಗುವ ಉಡುಂಬಾ ಕಥೆ ಸಾಕಷ್ಟು ಸನ್ನಿವೇಶಗಳಲ್ಲಿ ನೋಡುಗರಿಗೆ ಕನ್ ಫ್ಯೂಸ್ ಕ್ರಿಯೇಟ್ ಮಾಡೋದು ನಿಜ. ಮೊದಲಾರ್ಧವನ್ನು ಮುಲಾಜಿಲ್ಲದೇ ಮೆಚ್ಚಬಹುದು. ಇನ್ನೊಂಚೂರು ಶ್ರಮ ವಹಿಸಿದ್ದಿದ್ದರೆ ಸೆಕೆಂಡ್ ಹಾಫ್ ಇನ್ನೂ ಚೆನ್ನಾಗಿ ಬರುವ ಸಾಧ್ಯತೆಯಿತ್ತು. ಪ್ರೀತಿ, ಪ್ರೇಮ, ಫ್ಯಾಮಿಲಿ ಕಥೆ ಜತೆಗೊಂದು ಫಿಶ್ ಮಸಾಲೆಯ ಗಮಲನ್ನು ಸವಿಯಬೇಕೆಂದರೆ ಉಡುಂಬಾ ಸಿನಿಮಾವನ್ನು ಒಮ್ಮೆ ನೋಡಬಹುದು. ನಿರ್ದೇಶಕ ಶಿವರಾಜ್ ತಮ್ಮ ಅನುಭವವನ್ನು ತೆರೆಗೆ ತರುವಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ. ಅವರ ಪ್ರಯತ್ನಕ್ಕೆ ಸಾಥ್ ಕೊಟ್ಟ ನಿರ್ಮಾಪಕ ಹನುಮಂತರಾವ್ ಹಾಗೂ ವೆಂಕಟರೆಡ್ಡಿಯವರನ್ನು ಅಭಿನಂದಿಸಲೇಬೇಕು.