ತಮಿಳಿನಲ್ಲಿ ಕನ್ನಡತಿ ಶ್ರದ್ಧಾ ಶ್ರೀನಾಥ್ ಅವರು ಪೊಲೀಸ್ ಪಾತ್ರದ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ. 2018ರಲ್ಲಿ ಬಿಡುಗಡೆಗೊಂಡಿದ್ದ ವಿಶಾಲ್ ಅಭಿನಯದ ಇರುಂಬು ತಿರೈ ಸಿನಿಮಾದ ಸೀಕ್ವೆಲ್ ಇರುಂಬು ತಿರೈ 2 ಸಿನಿಮಾದಲ್ಲಿ ಶ್ರದ್ಧಾ ಪೊಲೀಸ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂಬ ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಪಿ.ಎಸ್. ಮಿತ್ರನ್ ಇರುಂಬು ತಿರೈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ವಿಶಾಲ್ ಜತೆ ಅರ್ಜುನ್ ಸರ್ಜಾ, ಸಮಂತಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಸೈಬರ್ ಲೋಕದ ವಂಚನಾ ಜಾಲದ ಕಥೆ ಹೊಂದಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಅಪರಾಧಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನವನ್ನು ಈ ಚಿತ್ರದ ಮೂಲಕ ನಿರ್ದೇಶಕರು ಮಾಡಿದ್ದರು. ವಿಶಾಲ್ ಸೇನಾಧಿಕಾರಿಯ ಪಾತ್ರದಲ್ಲಿ ಮಿಂಚಿದ್ದರು ಕೂಡ. ಸದ್ಯ ಇರುಂಬು ತಿರೈ ಭರ್ಜರಿ ಯಶಸ್ಸಿನಿಂದಾಗಿ ಇರುಂಬು ತಿರೈ 2 ಸಿನಿಮಾ ನಿರ್ಮಾಣವಾಗಲಿದ್ದು, ವಿಶಾಲ್ ಗೆ ಕನ್ನಡತಿ ಶ್ರದ್ಧಾ ಜತೆಯಾಗಲಿದ್ದಾರೆ.
ತಮ್ಮ ವಿಭಿನ್ನ ನಟನೆಯ ಮೂಲಕ ತಮಿಳು ಪ್ರೇಕ್ಷಕರ ಮನಗೆದ್ದಿರುವ ಅವರು, ವಿಜಯ್ ಸೇತುಪತಿ, ಮಾಧವನ್ ಮುಖ್ಯಭೂಮಿಕೆಯಲ್ಲಿದ್ದ ವಿಕ್ರಂ ವೇದಾ ಸಿನಿಮಾದಲ್ಲೂ ನಟಿಸಿದ್ದರು. ಈ ಚಿತ್ರದ ನಟನೆ ಶ್ರದ್ಧಾಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು. ಮಲಯಾಳಂ ಚಿತ್ರನಟ ನವೀನ್ ಪೌಲಿ ಅಭಿನಯದಲ್ಲಿ ಮೂಡಿಬಂದಿದ್ದ ರಿಕ್ಕಿ ತಮಿಳು ಸಿನಿಮಾದಲ್ಲೂ ಶ್ರದ್ಧಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಇದೀಗ ಪೊಲೀಸ್ ಪಾತ್ರದಲ್ಲಿ ಅವರ ಅಭಿನಯ ನೋಡಲು ಅಭಿಮಾನಿಗಳು ಕುತೂಹಲದಲ್ಲಿ ಕಾಯುತ್ತಿದ್ದಾರೆ.