ಒಂದು ಕಾಲದಲ್ಲಿ ನಿರ್ದೇಶಕ ದುನಿಯಾ ಸೂರಿಯ ಕಾರ್ ಡ್ರೈವರಾಗಿದ್ದ ಹುಡುಗ ವಿಕ್ಕಿ. ಬೇರೊಬ್ಬ ನಟನನ್ನು ಮನಸ್ಸಿನಲ್ಲಿಟ್ಟುಕೊಂಡು ಸೂರಿ ಕೆಂಡಸಂಪಿಗೆ ಸ್ಕ್ರಿಪ್ಟ್ ಬರೆದಿದ್ದರು. ಕಡೇ ಘಳಿಗೆಯಲ್ಲಿ ಅದೇನೇನು ಘಟನೆಗಳು ಸಂಭವಿಸಿದವೋ ಗೊತ್ತಿಲ್ಲ. ಸೂರಿ ಏಕಾಏಕಿ ಎದ್ದುನಿಂತವರೇ ‘ನಮ್ಮ ಹುಡುಗ ವಿಕ್ಕಿ’ ಈ ಪಿಚ್ಚರ್ರಿಗೆ ಹೀರೋ ಅಂತಾ ಅನೌನ್ಸು ಮಾಡಿಬಿಟ್ಟರು!
‘ಸೂರಿ ಕಾಗೆಯನ್ನು ಮುಟ್ಟಿದರೂ ಅದು ಬಂಗಾರವಾಗಿಬಿಡುತ್ತೆ’ ಅನ್ನೋ ಗಾಂಧಿನಗರದ ಗಾದೆಯಿದೆಯಲ್ಲಾ? ಹಾಗೇ ಕೆಂಡಸಂಪಿಗೆಯ ಸೊಂಪಾದ ಗೆಲುವು ವಿಕ್ಕಿಯ ಶರ್ಟಿನ ಕಾಲರನ್ನು ಮೇಲೆತ್ತಿ ನಿಲ್ಲಿಸಿತ್ತು. ಹಿಂದೆಯೇ ಸಂತು ನಿರ್ದೇಶನದ ‘ಕಾಲೇಜ್ ಕುಮಾರ’ ಕೂಡಾ ಒಂದು ಮಟ್ಟಿಗೆ ಹೆಸರು ಮಾಡಿತು. ಅಲ್ಲಿಗೆ ವಿಕ್ಕಿ ಕುಂತರೂ ನಿಂತರೂ ಯಡ್ಯೂರಪ್ಪನವರ ಥರಾ ವಿಕ್ಟರಿ ಸಿಂಬಲ್ಲು ತೋರಿಸಿಕೊಂಡು ತಿರುಗಾಡಿದ. ಇದಾದಮೇಲೆ ಒಂದೆರಡು ಸಿನಿಮಾಗಳು ಅನೌನ್ಸಾದವು. ಆದರೆ, ವಿಕ್ಕಿಯ ಕಾರಣಕ್ಕೇ ಆ ಸಿನಿಮಾಗಳೆಲ್ಲಾ ನಿಂತಿವೆ ಎನ್ನುವ ಸುದ್ದಿ ಗಾಳಿಯಲ್ಲಿ ತೇಲುತ್ತಿವೆ. ಇನ್ನು ಯಾರೇ ಹೋಗಿ ಕಥೆ ಹೇಳಿದರೂ ‘ಇದು ಬ್ಯಾಡ ಅದು ಬ್ಯಾಡ’ಅಂತಾ ರಾಗ ಎಳೀತಾನಂತೆ ಹುಡುಗ. ಹೀಗಾಗಿ ವಿಕ್ಕಿ ಬಳಿ ಹೋಗಿ ಕಥೆ ಹೇಳಿ ವಾಪಾಸು ಬಂದವರ ಸಂಖ್ಯೆ ದಿನೇ ದಿನೇ ವ್ಯಾಪಕವಾಗಿ ಹೆಚ್ಚುತ್ತಿದೆ. ಈ ಹಿಂದೆ ಆ ದಿನಗಳು ಚಿತ್ರದ ನಟ ಚೇತನ್ ಕೂಡಾ ಕಥೆ ಹೇಳಲು ಹೋದವರ ತಲೆ ತಿಂದು ಕಳಿಸುತ್ತಿದ್ದ. ಕಡೆಗೆ ಜನ ಅವನ ಬಳಿ ಸುಳಿದಾಡೋದನ್ನೇ ಬಿಟ್ಟರು. ಈಗ ಆತ ಅದೇನೋ ಹೋರಾಟ ಚೀರಾಟ ಅಂತೆಲ್ಲಾ ವೇಷ ಹಾಕ್ಕೊಂಡು ಓಡಾಡ್ತಿದ್ದಾನೆ. ಇನ್ನು ವಿಕ್ಕಿ ಏನು ಮಾಡುತ್ತಾನೋ ಕಾದು ನೋಡ್ಲೇಬೇಕು.
No Comment! Be the first one.