ಲಕ್ಷ್ಮಿ ದಿನೇಶ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿರುವ ವಿಷ್ಣು ಸರ್ಕಲ್ ಚಿತ್ರದ ಹಾಡುಗಳ ಧ್ವನಿಸುರುಳಿಯನ್ನು ಇತ್ತೀಚೆಗೆ ನಟ ಜಗ್ಗೇಶ್ ಅನಾವರಣಗೊಳಿಸಿದರು. ನಂತರ ಮಾತನಾಡುತ್ತಾ ನಾನು ವಿಷ್ಣು ಅವರನ್ನು ಮೊದಲ ಬಾರಿಗೆ ನೋಡಿದ್ದು ವಿಜಯ್ ವಿಕ್ರಂ ಚಿತ್ರದ ಶೂಟಿಂಗ್ ಸೆಟ್ನಲ್ಲಿ. ಆಗ ಅವರೊಂದಿಗೆ ಊಟ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಇಲ್ಲಿ ಚಿತ್ರದ ನಾಯಕ ವಿಷ್ಣು ಅಭಿಮಾನಿಯಾಗಿರುತ್ತಾನೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಾಯಕನ ತಂದೆಯಾಗಿ ನಾನು ಶುಭ ಹಾರೈಸಲು ಆಗಮಿಸಿದ್ದೇನೆ ಎಂದು ಹೇಳಿದರು.
ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ಗುರುರಾಜ್ ಮಾತನಾಡುತ್ತ ನಾನು ಮೇಕಪ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ, ಇಂದಿಗೆ 25 ವರ್ಷಗಳನ್ನು ಪೂರೈಸಿದ್ದೇನೆ. ಈವರೆಗೆ ಯಾರೂ ಮಾಡಿರದಂಥ ಕ್ಲೈಮಾಕ್ಸ್ ಈ ಚಿತ್ರದಲ್ಲಿದ್ದು, ಅದ್ಬುತವಾಗಿ ಮೂಡಿಬಂದಿದೆ ಎಂದು ಹೇಳಿದರು. ಚಿತ್ರದಲ್ಲಿ ಸಾಲ ವಸೂಲಾತಿ ಹುಡುಗನಾಗಿ ಗುರುರಾಜ್ ಕಾಣಿಸಿಕೊಂಡಿದ್ದಾರೆ. ವಿಷ್ಣು ಅವರ ಫ್ಯಾನ್ ಆಗಿಯೂ ಕಾಣಿಸಿಕೊಂಡಿದ್ದು, ವಿಷ್ಣು ಮೇಲಿನ ಅಭಿಮಾನವನ್ನು ಒಂದು ಹಾಡಿನ ತೋರಿಸಲಾಗಿದೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಅವರುಗಳಿಗೆ ಆಕೃತಿ, ಪ್ರಕೃತಿ ಮತ್ತು ಸಂಸ್ಕೃತಿ ಎಂದು ನಾಮಕರಣ ಮಾಡಲಾಗಿದೆ. ಎಂದು ನಿರ್ದೇಶಕ ಲಕ್ಷ್ಮೀ ದಿನೇಶ್ ಹೇಳಿದರು.
ಸಂಗೀತ ನಿರ್ದೇಶಕ ಶ್ರೀವತ್ಸ, ಚಿತ್ರಕ್ಕೆ ಆರ್ ಆರ್ ಮಾಡಿದ ಪ್ರದೀಪ್ ವರ್ಮಾ, ನಾಯಕಿಯರುಗಳಾದ ಸಂಹಿತಾ ವಿನ್ಯಾ, ಡಾ.ಜಾಹ್ನವಿ ಜ್ಯೋತಿ ಹಾಗೂ ದಿವ್ಯಾಗೌಡ ಮಾತನಾಡಿ ತಂತಮ್ಮ ಪಾತ್ರ ಹಾಗೂ ಕೆಲಸದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಡಾ.ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿಯಾಗಿರುವ ಆರ್.ಭಾಸ್ಕರ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.
No Comment! Be the first one.