ತಂತ್ರಜ್ಞಾನ ಅನ್ನೋದು ತೀರಾ ಜೀವಗಳನ್ನೇ ಕೊಂದು, ಮನುಷ್ಯತ್ವವನ್ನು ನಾಶ ಮಾಡುವ ಹಂತಕ್ಕೆ ಬೆಳೆಯಾರದಿತ್ತು. ಜೀವ ಉಳಿಸಬೇಕಿದ್ದ ವೈದ್ಯರೇ ಒಂದು ಕೊಲ್ಲಲು ನಿಂತಿರುವುದು ನಿಜಕ್ಕೂ ದುರಂತ. ಅದೂ ತಾಯಿಯ ಹೊಟ್ಟೆಯಲ್ಲಿ ಆಗಷ್ಟೇ ಉಸಿರು ಪಡೆಯುತ್ತಿರುವ ಕಂದಮ್ಮಗಳನ್ನು ಕೊಂದು ಹೊರ ತೆಗೆಯುತ್ತಾರೆಂದರೆ, ಅವರು ವೈದ್ಯರೋ ರಾಕ್ಷಸರೋಗೊತ್ತಾಗುವುದಿಲ್ಲ.
ಇತ್ತೀಚೆಗೆ ಮಂಡ್ಯದಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆಯ ಪ್ರಕರಣ ಬಯಲಿಗೆ ಬಂದಿತ್ತು. ವಾರಕ್ಕೆ ಮುಂಚೆಯಷ್ಟೇ ನೆಲಮಂಗಲದಲ್ಲಿ ಖಾಸಗೀ ಆಸ್ಪತ್ರೆಯಲ್ಲಿ ನಡೆಯುತ್ತಿದ ಭ್ರೂಣಗಳ ಮಾರಣ ಹೋಮದ ವಿಚಾರ ಕೂಡಾ ಬಯಲಾಗಿತ್ತು.
ಭ್ರೂಣಹತ್ಯೆ ವಿಚಾರದಲ್ಲಿ ವೈದ್ಯರು, ಸರ್ಕಾರಿ ಅಧಿಕಾರಿಗಳು ಮಾತ್ರವಲ್ಲ, ಸ್ವತಃ ಆ ಮಗುವಿಗೆ ಸಂಬಂಧಪಟ್ಟವರೇ ಭಾಗಿಯಾಗಿರುತ್ತಾರೆ. ಪ್ರಸ್ತುತ ನಡೆಯುತ್ತಿರುವ ಇಂಥಾ ನೈಜ ಘಟನೆಗಳನ್ನೇ ಆಧರಿಸಿ ಮನಸ್ಸಿಗೆ ಹತ್ತಿರವಾಗವ ಸಿನಿಮಾವೊಂದು ರೂಪುಗೊಂಡಿದೆ. ಇದೇ ವಾರ ತೆರೆಗೆ ಬಂದಿರುವ ಈ ಚಿತ್ರ ʻತಾರಿಣಿʼ
ಮಗುವೊಂದು ಗರ್ಭ ಕಟ್ಟಲು ಕಾರಣವಾದ ತಂದೆಯೇ ಅದು ಹೆಣ್ಣೋ ಗಂಡೋ ಅಂತಾ ಸ್ಕ್ಯಾನ್ ಮಾಡಿಸಿ ತಿಳಿದುಕೊಳ್ಳುತ್ತಾನೆ. ಅದು ಹೆಣ್ಣು ಅಂತಾ ಗೊತ್ತಾದ ಕೂಡಲೇ ಅದನ್ನು ತೆಗೆಸುವ ಪ್ರಯತ್ನಕ್ಕೆ ಮುಂದಾಗುತ್ತಾನೆ. ಇದನ್ನು ಸ್ವತಃ ಗರ್ಭಿಣಿ ಹೆಣ್ಣುಮಗಳು ವಿರೋಧಿಸುತ್ತಾಳೆ. ಇದು ಮುಂದೆ ಯಾವೆಲ್ಲಾ ಹಂತ ತಲುಪುತ್ತದೆ? ಕಡೆಗೆ ಆಕೆ ತನ್ನ ಹೊಟ್ಟೆಯೊಳಗಿನ ಕೂಸನ್ನು ಉಳಿಸಿಕೊಳ್ಳುತ್ತಾಳಾ ಇಲ್ಲವಾ? ಅನ್ನೋದನ್ನೆಲ್ಲಾ ತೀರಾ ಕೌತುಕ ಮತ್ತು ಕಾಡುವಂತೆ ಕಟ್ಟಿಕೊಟ್ಟಿದ್ದಾರೆ.
ಇಡೀ ಸಿನಿಮಾದ ಉದ್ದಕ್ಕೂ ‘ತಾರಿಣಿ’ಯನ್ನು ಗರ್ಭದಲ್ಲಿ ಹೊತ್ತಿರುವ ಮಮತಾ ರಾಹುತ್ ನಟನೆ ಎಂಥವರ ಮನಸ್ಸನ್ನೂ ತೇವಗೊಳಿಸುತ್ತದೆ. ಮಮತಾ ರಾಹುತ್ ಕಳೆದ ಹದಿನೈದಕ್ಕೂ ಹೆಚ್ಚು ವರ್ಷಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೇರೆಲ್ಲ ನಟಿಯರಿಗೆ ಹೋಲಿಸಿದರೆ ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಆದರೆ ತಾರಿಣಿ ಮಮತಾ ಅವರ ಚಿತ್ರಜೀವನದಲ್ಲೇ ಬಹುಮುಖ್ಯ ಸಿನಿಮಾವಾಗಿ ಹೊರಬಂದಿದೆ. ಅದಕ್ಕೆ ಕಾರಣವಾಗಿರುವುದು ಸಿದ್ಧು ಪೂರ್ಣಚಂದ್ರ ಅವರ ಸಮರ್ಥ ನಿರ್ದೇಶನ. ರೋಹಿತ್ ರಂಗಸ್ವಾಮಿ, ಸುಧಾ ಪ್ರಸನ್ನ, ಭವಾನಿ ಪ್ರಕಾಶ್, ಡಾ. ಸುರೇಶ್ ಕೋಟ್ಯಾನ್, ಬೇಬಿ ನಿಶಿತಾ, ವಿಜಯಲಕ್ಷ್ಮೀ, ಸುಧಾ ಪ್ರಸನ್ನ, ಪ್ರಮೀಳಾ ಸುಬ್ರಹ್ಮಣ್ಯಂ ಮುಂತಾದವರನ್ನು ಕೂಡಾ ಇಲ್ಲಿ ಪಾತ್ರಕ್ಕೆ ಬೇಕಾದಂತೆ ಬಳಸಿಕೊಳ್ಳಲಾಗಿದೆ. ಸಹಜ ಸಂಭಾಷಣೆಯ ಜೊತೆಗೆ ನೋಡುಗರನ್ನು ಭಾವತೀವ್ರತೆಗೆ ಒಳಪಡಿಸುವ ಗುಣ ತಾರಿಣಿಗಿದೆ. ಯಾವ ಆಡಂಬರ, ಕೃತಕತೆಗಳಿಲ್ಲದ ಇಂಥ ಸಿನಿಮಾವನ್ನು ಮಿಸ್ ಮಾಡದೇ ನೋಡಿ…
No Comment! Be the first one.