ಕನ್ನಡತಿ ಲಕ್ಷ್ಮಿ ರಾಯ್ ನಟನೆಯ ಹೊಸ ಸಾಹಸಮಯ ಚಿತ್ರ ‘ಝಾನ್ಸಿ’. ಇತ್ತೀಚಿಗೆ ಮುಂಬೈನಲ್ಲಿ ಅದ್ಬುತ ಥ್ರಿಲ್ಲರ್ ಸನ್ನಿವೇಶವೊಂದನ್ನು ಈ ಚಿತ್ರಕ್ಕಾಗಿ ಚಿತ್ರೀಕರಿಸಿಕೊಳ್ಳಲಾಗಿದೆ. ಸ್ವಿಮ್ಮಿಂಗ್ ಪೂಲ್ ಆವರಣವೊಂದರಲ್ಲಿ ಮುಂಬೈ ಡಾನ್ ರವಿ ಕಾಳೆ ಅವರನ್ನು ಕಾಳಿಂಗ ಎಂಬ ವ್ಯಕ್ತಿ ಕೊಲ್ಲಲು ಸ್ಕೆಚ್ ಹಾಕಿರುತ್ತಾನೆ. ಎರಡು ದಿಕ್ಕುಗಳಿಂದ ಶೂಟ್ ಮಾಡಿ ಮುಗಿಸುವ ಸಂಚು ನಡೆದಿರುತ್ತದೆ. ಆ ಸಮಯಕ್ಕೆ ಆ ಸ್ಥಳಕ್ಕೆ ಝಾನ್ಸಿ ಪಾತ್ರಧಾರಿಯ ಎಂಟ್ರಿಯಾಗುತ್ತದೆ. ಇಲ್ಲಿ ಶೂಟ್ ಔಟ್ ನಡೆಯಲಿದೆ ಎನ್ನುವ ವಿಚಾರ ಈಕೆಯ ಗಮನಕ್ಕೆ ಬರುತ್ತಿದ್ದಂತೇ ಕೊಲ್ಲಲು ಬಂದ ಇಬ್ಬರನ್ನೂ ಗುಂಡಿಕ್ಕಿ ಕೊಲ್ಲುತ್ತಾಳೆ. ಈ ಮೂಲಕ ರವಿ ಕಾಳೆಯನ್ನು ಬಚಾವ್ ಮಾಡಿ ಸ್ವಿಮ್ಮಿಂಗ್ ಪೂಲ್ನ ಆಳಕ್ಕೆ ಜಿಗಿಯುತ್ತಾಳೆ. ಖಳ ನಟರ ತಂಡ ಝಾನ್ಸಿ ನೀರಿನಲ್ಲಿ ಅಡಗಿರುವುದನ್ನು ಕಂಡು ವಾಪಸ್ಸಾಗುತ್ತಾರೆ. ಅಸಲಿಗೆ, ಡಾನ್ ರವಿ ಕಾಳೆಯನ್ನು ಝಾನ್ಸಿ ರಕ್ಷಿಸಿದ್ದಾದರೂ ಯಾಕೆ ಅನ್ನೋದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕಿದೆ.
ಮರ್ಯಾದೆ ರಾಮಣ್ಣ ಸಿನಿಮಾ ನಿರ್ದೇಶಿಸಿದ್ದ ಗುರುಪ್ರಸಾದ್ ಝಾನ್ಸಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೇ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯೂ ಅವರದ್ದೇ. ಡ್ರಗ್ಸ್, ಲ್ಯಾಂಡ್ ಮಾಫಿಯಾ ಹಾಗೂ ಇನ್ನಿತರ ವಿಚಾರಗಳನ್ನು ಒಳಗೊಂಡ ‘ಝಾನ್ಸಿ’ ಮಾಸ್ ಹಾಗೂ ಕುಟುಂಬ ಸಮೇತ ನೋಡುವಂತಹ ಚಿತ್ರ ಎನ್ನುವುದು ನಿರ್ದೇಶಕರ ಅಭಿಪ್ರಾಯ. ಭವಾನಿ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಮುಂಬಯಿ ಮೂಲದ ರಾಜೇಶ್ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
No Comment! Be the first one.