ಜ್ಞಾನಂ ವರದರಾಜ್ ನಿರ್ದೇಶನದಲ್ಲಿ ಮೂಡಿಬಂದ ಬುದ್ಧಿಮಾಂದ್ಯ ಮಗುವಿನ ಕತೆ. ಈ ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಈ ಸಿನಿಮಾ ಬರೋಬ್ಬರಿ ಹನ್ನೊಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಆರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ರಾಜ ಭಾರದ್ವಾಜ್ ಹಾಗೂ ವೇಣು ಭಾರದ್ವಾಜ್ ಸಹೋದರರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಧಿಕಾಶೆಟ್ಟಿ, ರೋಹಿತ್ ಸೋಯರ್ ಹಾಗೂ ನಿರ್ಮಾಪಕ ವೇಣು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಹಿರಿಯ ಕಲಾವಿದೆ ಶೈಲಶ್ರೀ ಕೂಡ ಈ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧ್ಯಾನ್ ಎಂಬ ಬಾಲಕ ಬುದ್ಧಿಮಾಂದ್ಯ ಮಗುವಿನ ಪಾತ್ರ ಮಾಡಿದ್ದು, ಲೋಹಿತ್ ಬುದ್ಧಿವಂತ ಮಗುವಿನ ಪಾತ್ರ ಮಾಡಿದ್ದಾರೆ. ತನ್ನ ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ವರದರಾಜ್, ನಮ್ಮ ಪಕ್ಕದ ಮನೆಯಲ್ಲಿದ್ದ ಒಂದು ವಿಶೇಷ ಮಗುವಿನ ನಡವಳಿಕೆಯನ್ನು ನೋಡಿ ಇಂಥ ಮಕ್ಕಳ ಮೇಲೆ ಒಂದು ಒಳ್ಳೆ ಕಥೆ ಮಾಡಬೇಕೆಂದು ನಿರ್ಧರಿಸಿದೆ. ಆಗ ಹೊಳೆದದ್ದೇ ಜ್ಞಾನಂ ಕಥೆ. ಒಂದೇ ದಿನ ಹುಟ್ಟುವಂಥ ಇಬ್ಬರು ಮಕ್ಕಳ ಕಥೆ ಈ ಚಿತ್ರದಲ್ಲಿದೆ. ಕಳೆದ ಜೂನ್ನಲ್ಲಿ ಈ ಚಿತ್ರವನ್ನು ಆರಂಭಿಸಿದ್ದೆವು.
ನನ್ನ ಟೀಮ್ ಸಪೋರ್ಟ್ ಚೆನ್ನಾಗಿತ್ತು. ಯು.ಎಸ್.ಎ, ಕೆನಡಾ ಸೇರಿ ಫಿಲಂ ಫೆಸ್ಟಿವಲ್ಗಳಲ್ಲಿ ಭಾಗವಹಿಸಿ 6 ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದು ಹೇಳಿದರು.
ನಿರ್ಮಾಪಕರಲ್ಲಿ ಒಬ್ಬರಾದ ವೇಣು ಮಾತನಾಡಿ, ನಮ್ಮ ಬ್ಯಾನರ್ನಲ್ಲಿ ಇದು ಫಸ್ಟ್ ಚಿತ್ರ. ನಿರ್ದೇಶಕ ಸಂಗೀತ ನಿರ್ದೇಶಕ ಸೇರಿ ಬಹುತೇಕರಿಗೆ ಇದು ಮೊದಲ ಪ್ರಯತ್ನ. ವಿದೇಶದ ಚಿತ್ರೋತ್ಸವಗಳಲ್ಲಿ ಹೋದಾಗ ಒಳ್ಳೆಯ ಪ್ರತಿಕ್ರಿಯೆ ಪಡೆಯಿತು. ನನ್ನ ಮಗನಾಗಿ ಧ್ಯಾನ ಅಭಿನಯಿಸಿದ್ದಾರೆ ಎಂದು ಹೇಳಿದರು.
ನಟಿ ರಾಧಿಕಾಶೆಟ್ಟಿ ಮಾತನಾಡಿ, ಈ ಥರದ ಪಾತ್ರ ಮಾಡಲು ಆಗುತ್ತಾ ಅಂದ್ಕೊಂಡಿದ್ದೆ. ನಿರ್ದೇಶಕರು ಹೇಳಿಕೊಟ್ಟಿದ್ದರಿಂದ ಇದು ಸಾಧ್ಯವಾಯಿತು ಎಂದು ಹೇಳಿದರು.
No Comment! Be the first one.