ಕಿರು ಹಾಗೂ ಮಿನ್ಕಣಜ ಎಂಬ ಪದವನ್ನು ಸೇರಿಸಿದಾಗ ಕಿರುಮಿನ್ಕಣಜ ಆಗುತ್ತದೆ. ಈಗ ಇದೇ ಹೆಸರಿನಲ್ಲಿ ತಯಾರಾಗಿರುವ ಕನ್ನಡ ಚಿತ್ರವೊಂದು ಸದ್ದಿಲ್ಲದೆ ತನ್ನ ಚಿತ್ರೀಕರಣ ಮುಗಿಸಿಕೊಂಡು ಈಗ ಬಿಡುಗಡೆಯ ಹಂತ ತಲುಪಿದೆ. ಸದ್ಯ ತನ್ನ ಪ್ರಚಾರ ಕಾರ್ಯ ಆರಂಭಿಸಿದ್ದು ಮೊನ್ನೆ ಈ ಚಿತ್ರದ ಹಾಡೊಂದನ್ನು ರಿಲೀಸ್ ಮಾಡಲಾಯಿತು. ಚಿತ್ರದ ಪ್ರತಿ ಹಾಡನ್ನು ವಾರಕ್ಕೊಂದರಂತೆ ಬಿಡುಗಡೆ ಮಾಡಿ ಚಿತ್ರದ ಮೇಲೆ ಕುತೂಹಲ ಹೆಚ್ಚಾಗುವಂತೆ ಮಾಡುವ ಪ್ರಯತ್ನ ಚಿತ್ರತಂಡದಿಂದ ನಡೆದಿದೆ. ಮಿನ್ಕಣಜ ಇಂಗ್ಲಿಷ್ನಲ್ಲಿ ಅರ್ಥ ಕೊಡುವ ಉಚ್ಚಾರಣೆಯಂತೆ. ಈ ಚಿತ್ರದ ನಿರ್ದೇಶಕ ಮಂಜು. ಇವರು ಈಗಾಗಲೇ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ನಿರ್ದೇಶನದ ಅನುಭವವೂ ಇದೆ, ಆ ಅನುಭವದ ಮೇಲೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಇತ್ತೀಚೆಗೆ ನಡೆದ ಈ ಚಿತ್ರದ ಹಾಡಿನ ಬಿಡುಗಡೆ ಸಮಯದಲ್ಲಿ ಚಿತ್ರದ ಕುರಿತು ಹೇಳಿಕೊಂಡ ನಿರ್ದೇಶಕ ಮಂಜು, ಚಿತ್ರದ ಕಥೆಯ ಬಗ್ಗೆ ಗುಟ್ಟನ್ನು ಬಿಟ್ಟುಕೊಡಲಿಲ್ಲ. ಇದು ಒಂದು ಎಳೆಯಲ್ಲಿ ನಡೆಯುವ ಕಥೆ, ಅದನ್ನು ಈಗಲೇ ಬಹಿರಂಗ ಮಾಡಿದರೆ ಯಾವುದೇ ಕುತೂಹಲ ಉಳಿಯುದಿಲ್ಲ ಎಂದು ಹೇಳಿಕೊಂಡರು. ಚಿತ್ರದಲ್ಲಿ ಲಕುಮಿ ಖ್ಯಾತಿಯ ರವಿಚಂದ್ರ, ವರ್ಷಿಕಾ ನಾಗರಾಜ್, ಜೀವನ್ ನೀನಾಸಂ, ಶ್ರೀಧರ ನಾಯಕ್, ಶೃತಿ ನಾಯಕ್, ಗೋಪಾಲ್ ಮಹರಾಜ, ಹರೀಶ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ನಿರ್ಮಾಪಕರು ಜನಾರ್ಧನ್ ಆರ್.(ದಸೂಡಿ) ಈ ಚಿತ್ರಕ್ಕೆ ದ್ರುವರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಡುಗಳಿಗೆ ವಿಜಯಪ್ರಕಾಶ್, ಅನುರಾಧ ಭಟ್ ದನಿಯಾಗಿದ್ದಾರೆ. ಕಿರು ಮಿನ್ಕಣಜ ಚಿತ್ರದ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಮಾಜಿ ಶಾಸಕ ಟಿ.ಬಿ.ಜಯಚಂದ್ರ, ನಿರ್ದೇಶಕರ ಸಂಘದ ಅಧ್ಯಕ್ಷರೂ ಆಗಿರುವ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್, ಕರಿಸುಬ್ಬು ಹಾಗೂ ಇತರರು ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
No Comment! Be the first one.