ಸಾರಥಿ ಸಿನಿಮಾ ತೆರೆಗೆ ಬರಲು ಸಿದ್ದವಾಗಿತ್ತು. ಪರ್ಸನಲ್ ಆದ ಸಮಸ್ಯೆ ದರ್ಶನ್ ಅವರನ್ನು ಇನ್ನಿಲ್ಲದಂತೆ ಬಾಧಿಸಿತ್ತು. ಸಿನಿಮಾ ಬಿಡುಗಡೆ ದಿನ ಕೂಡಾ ದರ್ಶನ್ ಹೊರಗಿರಲಿಲ್ಲ. ಏನಾಗಲಿದೆ ಅನ್ನೋದರ ಸೂಚನೆಯೂ ಇಲ್ಲದಂತೆ ನಿರ್ದೇಶಕ ದಿನಕರ್ ಮಂಕಾಗಿ ಕೂತುಬಿಟ್ಟಿದ್ದರು.
ಆದೇ ಹೊತ್ತಿಗೆ ಕಿಚ್ಚನಿಂದ ದಿನಕರ್ ಮೊಬೈಲಿಗೆ ಕರೆ ಬರುತ್ತದೆ. ‘ಪರಿಸ್ಥಿತಿ ಏನು ಅಂತಾ ನನಗೆ ಗೊತ್ತು. ಇಡೀ ಚಿತ್ರರಂಗದವರು ನಿಮ್ಮಿಬ್ಬರ ನೆತ್ತಿಮೇಲೆ ಕಾಲಿಟ್ಟು ನಿಂತಿದ್ದಾರೆ. ಅದರ ಬಗ್ಗೆ ತಲೇನೇ ಕೆಡಿಸ್ಕೋಬೇಡಿ. ನೀವಿಬ್ಬರೂ ಮಾಡಬೇಕಿರೋದಿಷ್ಟೇ. ಧೈರ್ಯವಾಗಿ ಎದ್ದು ನಿಲ್ಲಬೇಕು. ಆಗ ಕಾಲಿಟ್ಟವರೆಲ್ಲಾ ದೊಪದೊಪನೆ ಕೆಳಕ್ಕೆ ಬೀಳ್ತಾರೆ” – ಹೀಗಂದಿದ್ದರು ಸುದೀಪ. ಕಿಚ್ಚನ ಮಾತು ಕೇಳಿದ ದಿನಕರ್ ಎದೆಯಲ್ಲಿ ನೂರಾನೆ ಬಲ ಮೂಡಿತ್ತು. ಯಾವ ಘಳಿಗೆಯಲ್ಲಿ ಕಿಚ್ಚ ಇಂಥ ಭವಿಷ್ಯ ನುಡಿದಿದ್ದರೋ? ಗೊತ್ತಿಲ್ಲ. ಅಕ್ಷರಶಃ ಅದು ಘಟಿಸಿತು. ದರ್ಶನ್ ಹೊರಬರುತ್ತಿದ್ದಂತೇ ಹೊಸ ಬದುಕು ಅವರಿಗಾಗಿ ಕಾದಿತ್ತು. ಸಾರಥಿ ಸೂಪರ್ ಡೂಪರ್ ಹಿಟ್ ಆಗಿತ್ತು. ಆವರೆಗಿದ್ದ ದರ್ಶನ್ ಕ್ರೇಜ಼ು ಎರಡು ಪಟ್ಟಿಗಿಂತಾ ಜಾಸ್ತಿಯಾಗಿತ್ತು. ದಿನಕರ್ ಅವರ ಕಾರ್ಯವೈಖರಿ ಬಗ್ಗೆ ದೇಶದೆಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬಂತು. ಬಾಕ್ಸಾಫೀಸಿನಲ್ಲಿ ಸಾರಥಿ ಅಮೋಘ ಜಯಭೇರಿ ಸಾಧಿಸಿತ್ತು.
ಇಷ್ಟೆಲ್ಲಾ ಪಾಸಿಟೀವ್ ಆಗಿದ್ದ ಸ್ನೇಹದಲ್ಲಿ ಸಣ್ಣ-ಪುಟ್ಟ ಬಿರುಕು, ಹುಸಿ ಮುನಿಸು ಈಗಿರಬಹುದು. ಆದರೆ ಇದೇ ಕೊನೆವರೆಗೂ ಮುಂದುವರೆಯಲಿದೆಯಾ? ಯಾವ ಘಳಿಗೆಯಲ್ಲಿ ಬೇಕಾದರೂ ಈ ಜೋಡಿ ಜೀವ ಒಂದಾಗಬಹುದು. ಇದೇ ಅಭಿಮಾನಿಗಳ ಮುಂದೆ ಕೈಬೀಸಿ ನಿಲ್ಲಬಹುದು. ಹೀಗಿರುವಾಗ ಮಧ್ಯದಲ್ಲಿರುವ ಅಭಿಮಾನಿಗಳು ಯಾಕೆ ನಿಷ್ಠುರರಾಗಬೇಕು. ಕನ್ನಡ ಚಿತ್ರರಂಗವನ್ನು ಬೇರೆ ಲೆವೆಲ್ಲಿಗೆ ಕೊಂಡೊಯ್ದ ಅಪರೂಪದ ನಟರಲ್ಲಿ ದರ್ಶನ್ ಮತ್ತು ಸುದೀಪ್ ಪ್ರಮುಖರು ಅನ್ನೋದರಲ್ಲಿ ಯಾವ ಡೌಟೂ ಇಲ್ಲ. ಇವರಿಬ್ಬರು, ಮತ್ತಿವರ ಅಭಿಮಾನಿಗಳು ಅನ್ಯೋನ್ಯವಾಗಿದ್ದರೆ ಕನ್ನಡ ಚಿತ್ರರಂಗ ಮತ್ತು ಕರ್ನಾಟಕಕ್ಕೆ ತಾನೆ ಶೋಭೆ, ಲಾಭ, ಎಲ್ಲಾ…? ಸ್ಟಾಪ್ ದಿ ವಾರ್!
No Comment! Be the first one.