ಹಯವದನ ಪೂರ್ಣತ್ವದ ವಸ್ತುವನ್ನಿಟ್ಟುಕೊಂಡು ರಚಿತವಾಗಿರುವ ‘ಹಯವದನ’ ಪೂರ್ಣತ್ವದ ಹಂಬಲ ಮನುಷ್ಯ ಸಂಬಂಧಗಳಲ್ಲಿ ತರುವ ದುರಂತ ಪರಿಣಾಮಗಳನ್ನು ಚಿತ್ರಿಸುತ್ತದೆ. ಮನುಷ್ಯ ಎಷ್ಟೇ ಪ್ರಯತ್ನಿಸಿದರೂ ಪೂರ್ಣತ್ವ ಲಭಿಸದಿರುವುದು ಒಂದು ದುರಂತವಾದರೆ ಅದರ ಅರಸುವಿಕೆಯಲ್ಲಿ ತಲೆ ಮತ್ತು ದೇಹದ ನಡುವೆ ನಡೆಯುವ ಸಂಘರ್ಷ ನಾಟಕಕ್ಕೆ ಇನ್ನೊಂದು ಆಯಾಮವನ್ನು ಒದಗಿಸುತ್ತದೆ. ತಲೆ ಮತ್ತು ದೇಹದ ನಡುವೆ ನಡೆಯುವ ಸಂಘರ್ಷದಲ್ಲಿ ಯಾವಾಗಲೂ ತಲೆಯೇ ಗೆಲ್ಲುತ್ತಾ ಹೋಗುವುದು ನಾಟಕಕ್ಕೆ ಅನೇಕ ತಿರುವುಗಳನ್ನು ಕೊಡುತ್ತದೆ. ಹಾಗೂ ಪೂರ್ಣತ್ವವನ್ನು ಸಾಧಿಸಲು ತೊಡಕುಗಳಾಗಿ ಪರಿಣಮಿಸುತ್ತದೆ. ಎಂದಿನಂತೆ ಕಾರ್ನಾಡರು ತಮ್ಮ ಶೋಧನೆಯಲ್ಲಿ ತೊಡಗಿ ದೇಹ ಮತ್ತು ಮನಸ್ಸಿನ ಗುಣಗಳ ಅರಿವನ್ನು ವಿಸ್ತರಿಸಿಕೊಡುತ್ತಾರೆ. ಪೌರಾಣಿಕ ಕಥೆ, ಜಾನಪದ ರಂಗತಂತ್ರಗಳು, ಆಧುನಿಕ ವೈಚಾರಿಕತೆ ಈ ಮೂರರ ಸಂಯೋಗವೇ ಹಯವದನ ನಾಟಕದ ಯಶಸ್ವಿಗೂ, ಜನಪ್ರಿಯತೆಗೂ ಕಾರಣವಾಗಿದೆ. ನಮ್ಮ ಬೇತಾಳನ ಕಥೆಯೊಂದು ಜರ್ಮನ್ ಲೇಖಕ ಥಾಮಸ್ ಮಾನ್ನಿಂದ ಪರಿವರ್ತನೆಗೊಂಡ ರೂಪದಲ್ಲಿ ಕಾರ್ನಾಡರ ನಾಟಕದ ಮುಖ್ಯ ಕಥಾನಕವನ್ನು ಒದಗಿಸಿದೆ ಪದ್ಮಿನಿ, ದೇವದತ್ತ, ಕಪಿಲರ ಈ ಕಥೆಯನ್ನು ಒಳನಾಟಕವಾಗಿರಿಸಿಕೊಂಡು, ಇವಕ್ಕೆ ಆವರಣ ಕಲ್ಪಿಸುವ ಚೌಕಟ್ಟಿನಂತೆ ಹಯವದನದ ಕಥಾನಕವನ್ನು ನಾಟ್ಯೀಕರಿಸಲಾಗಿದೆ. ತಲೆ ಅದಲು ಬದಲಾದಾಗ ವ್ಯಕ್ತಿಗಳ ‘ಐಡೆಂಟಿಟಿ’ ಏನಾಗುತ್ತದೆ ಎನ್ನುವ ಒಗಟೇ ಬೇತಾಳನ ಕಥೆಯ ಸ್ವಾರಸ್ಯ ಕೇಂದ್ರವಾಗಿದೆ. ಕಾರ್ನಾಡರ ನಾಟಕದ ಮುಖ್ಯ ಕಾಳಜಿಯೆಂದರೆ ಪೂರ್ಣತ್ವದ ಹಂಬಲ ಹಾಗೂ ಅದಕ್ಕಾಗಿ ನಡೆಸುವ ಸುದೀರ್ಘ ಪ್ರಯತ್ನ. ಈ ಕೇಂದ್ರ ವಸ್ತುವಿನ ಅಂಗವೆಂಬಂತೆಯೇ ತಲೆಗಳು ಅದಲು ಬದಲಾಗುವ ಸಂದರ್ಭ ಪದ್ಮಿನಿಯ ಕಥೆಯಲ್ಲಿ ಹಾಗೂ ಹಯವದನದ ಕಥಾನಕದಲ್ಲಿ ಚಿತ್ರಿತವಾಗಿದೆ. ಪೂರ್ಣತ್ವದ ವಸ್ತು ಕೆಲವು ವಿಭಿನ್ನ ಸ್ತರಗಳಲ್ಲಿ ಹಯವದನ ನಾಟಕದಲ್ಲಿ ವಿಶ್ಲೇಷಿಸಲ್ಪಟ್ಟಿದೆ. ಸಂದರ್ಭಕ್ಕೆ ಅನುಗುಣವಾಗಿ ಪೂರ್ಣತ್ವದ ಅರ್ಥವ್ಯಾಪ್ತಿಯೂ ಬದಲಾಗುತ್ತ ಹೋಗಿದೆ. ನಾಟಕದ ಪ್ರಾರಂಭದಲ್ಲಿ ವಿಘ್ನ ನಿವಾರಕ ಗಣೇಶನನ್ನು ಸ್ತುತಿಸುತ್ತಿರುವಾಗಲೇ ಭಾಗವತನು “ಆ ವಿಘ್ನೇಶ್ವರನೇ ಇಂದಿನ ನಮ್ಮ ನಾಟಕಕ್ಕೆ ಯಶಸ್ಸು ನೀಡಲಿ. ಆತನ ಮಹಾತ್ಮವನ್ನಾದರೂ ವರ್ಣಿಸುವುದು ಹೇಗೆ? ಆನೆಯ ಮುಖ, ಮನುಷ್ಯನ ದೇಹ, ಮುಖದಲ್ಲಿ ಮುರುಕು ದಂತ, ದೇಹದಲ್ಲಿ ಬಿರುಕು ಬಿಟ್ಟ ಉದರ – ಹೇಗೆ ನೋಡಿದರೂ ಅಪೂರ್ಣತೆಗೆ ಸಾಕ್ಷಿಯಾಗಿರುವಂತೆ ಕಾಣುವ ಈ ವಕ್ರತುಂಡನೇ ವಿಘ್ನ ನಿವಾರಕನೂ ಆಗಿರಬೇಕು ಎಂಬುದರ ರಹಸ್ಯವನ್ನಾದರೂ ಹೇಗೆ ಬಿಡಿಸೋಣ? ಬಹುಶಃ ದೇವರ ಪೂರ್ಣತ್ವ ಮನುಷ್ಯ ಕಲ್ಪನೆಗೆ ಒಗ್ಗಲಾರದಂಥದ್ದು ಎಂಬುದನ್ನೇ ಆ ಮಂಗಳಮೂರ್ತಿಯ ರೂಪ ಸಂಕೇತಿಸುತ್ತಿರಬಹುದು” ಎನ್ನುತ್ತಾನೆ. ನಾಟಕದ ಮೊದಲಲ್ಲೆ ಹೀಗೆ ಪರಿಚಯವಾಗುವ ಪೂರ್ಣತೆಯ ಸಮಸ್ಯೆ ನಾಟಕದುದ್ದಕ್ಕೂ ವಿಭಿನ್ನ ವ್ಯಾಖ್ಯಾನಗಳೊಂದಿಗೆ ಮರುಕಳಿಸುತ್ತಲೇ ಹೋಗುತ್ತದೆ. ಕುದುರೆಯ ತಲೆ, ಮನುಷ್ಯನ ದೇಹ ಹಾಗೂ ಮನುಷ್ಯನ ವಾಣಿ ಹೊಂದಿರುವ ಹಯವದನ ಪೂರ್ಣಾಂಗನಾಗಲು ಹಂಬಲಿಸುವವನು. ಪೂರ್ಣ ಮನುಷ್ಯ ರೂಪ ಗಳಿಸಲೆಂದು ಹತ್ತು ಹಲವು ಪುಣ್ಯಕ್ಷೇತ್ರಗಳಿಗೆ ಹೋಗಿ, ಸಾಧು ಸಂತರನ್ನು ಆಶ್ರಯಿಸಿ, ಸಾರ್ವಜನಿಕ ಸೇವೆಯಲ್ಲಿ ತೊಡಗಿ ಫಲ ಕಾಣದೆ ಹತಾಶನಾದ ಹಯವದನ ಭಾಗವತನ ಸಲಹೆಯಂತೆ ಚಿತ್ರಕೂಟ ಪರ್ವತದ ಕಾಳಿಯ ದರ್ಶನ ಮಾಡುತ್ತಾನೆ. ಪ್ರಾರ್ಥಿಸುವಾಗಿನ ಅವನ ಅಸ್ಪಷ್ಟತೆಯಿಂದಲೋ, ದೇವಿಯ ಅನಾಸಕ್ತಿಯಿಂದಲೋ ಪೂರ್ಣ ಮನುಷ್ಯನಾಗುವ ಬದಲು ಪೂರ್ಣ ಕುದುರೆಯ ರೂಪ ಪಡೆಯುತ್ತಾನೆ. ಈ ರೂಪಕ್ಕೆ ಮನುಷ್ಯವಾಣಿ ತಗಲುಹಾಕಿಕೊಂಡದ್ದು ಮತ್ತೆ ಅವನನ್ನು ಕಾಡಿಸುತ್ತದೆ. ನಾಟಕದ ಕೊನೆಯಲ್ಲಿ ಪದ್ಮಿನಿಯ ಮಗನಿಂದಾಗಿ ಮನುಷ್ಯ ವಾಣಿ ಹೋಗಿ ಕುದುರೆಯ ಹೇಷಾರವ ಗಳಿಸಿ ಪೂರ್ಣ ಕುದುರೆಯಾದಾಗ ಅವನಿಗೆ ಪೂರ್ಣತ್ವದ ಸಮಾಧಾನ ಲಭಿಸುತ್ತದೆ. ಈ ಹಯವದನ ಅರಸಿ, ಗಳಿಸುವುದು ದೇಹ, ತಲೆ, ಧ್ವನಿಗಳಿಗೆ ಸಂಬಂಧಿಸಿದ ದೈಹಿಕ ಪೂರ್ಣತ್ವವನ್ನು ಮಾತ್ರ. ಕಪಿಲ-ದೇವದತ್ತ ಇವರಿಬ್ಬರ ವ್ಯಕ್ತಿತ್ವದಲ್ಲೂ ಅಂಗಗಳ ಅಸಮಾನತೆಯ ದೋಷವಿದೆ. ದೈಹಿಕ ಸೌಂದರ್ಯ, ಕ್ರಿಯಾಶೀಲತೆಗಳ ಪ್ರತೀಕದಂತಿರುವ ಕಪಿಲನಲ್ಲಿ ಅದಕ್ಕೆ ಸಮಾನವೆನ್ನುವ ಬುದ್ದಿ-ಪಾಂಡಿತ್ಯಗಳಿಲ್ಲ. ಉದ್ದಾಮ ಪಂಡಿತನೂ ಪ್ರತಿಭಾವಂತನೂ ಆದ ದೇವದತ್ತ ದೇಹ ಶಕ್ತಿಯಿಂದ ದುರ್ಬಲನಾದ ಸಪ್ಪೆ ಮನುಷ್ಯ. ಇವರಿಬ್ಬರೂ ನೇರವಾಗಿ ಪೂರ್ಣತೆಯನ್ನು ಹುಡುಕುವುದಿಲ್ಲವಾದರೂ, ಅವರಿಗೆ ತಮ್ಮ ಕೊರತೆಯ ಅರಿವಿರುವುದು ದೇಹ-ತಲೆ ಅದಲು ಬದಲಾದಾಗಿನ ಅವರ ಉನ್ಮಾದದಲ್ಲಿ ಸೂಚಿತವಾಗಿದೆ. ಕಥಾನಾಯಕಿ ಪದ್ಮಿನಿಯ ತೊಳಲಾಟ ಹಂಬಲಿಕೆ ದೇಹ- ಮನಸ್ಸುಗಳೆರಡರಲ್ಲೂ ಉತ್ತಮವಾದ ಪೂರ್ಣಾಂಗನಾದ ಜೊತೆಗಾರನಿಗಾಗಿ. ಪ್ರಕಾಂಡ ಪಂಡಿತ ದೇವದತ್ತನನ್ನು ವಿವಾಹವಾದ ಪದ್ಮಿನಿ ಕಪಿಲನ ಅಂಗಸೌಷ್ಠವ ಚುರುಕುತನಗಳಿಗೆ ಮಾರುಹೋಗಿ, ಅವಕಾಶ ಸಿಕ್ಕೊಡನೆ ದೇವದತ್ತನ ಜಾಣ ತಲೆಯನ್ನು ಕಪಿಲನ ಸದೃಡ ದೇಹಕ್ಕೆ ಜೋಡಿಸಿ ಆದರ್ಶ ಪುರುಷನೊಬ್ಬನನ್ನು ತನ್ನ ಸಂಗಾತಿಯಾಗಿರಲು ರೂಪಿಸಿಕೊಳ್ಳುವುದೇ ನಾಟಕದ ಕೇಂದ್ರ ಕ್ರಿಯೆಯಾಗಿದೆ. ದೇವದತ್ತನ ತಲೆಯ ಪ್ರಭಾವಕ್ಕೆ ಸಿಲುಕಿ, ಪದ್ಮಿನಿಯ ಸಂಗಾತಿ ಗಳಿಸಿದ್ದ ಕಪಿಲನ ದೇಹ ಮತ್ತೆ ದೇವದತ್ತನಿಗೊಪ್ಪುವ ನಾಜೂಕು, ದುರ್ಬಲ, ನಿಷ್ಕ್ರೀಯ ರೂಪವನ್ನು ತಳೆದು, ಪದ್ಮಿನಿಯ ಬಯಕೆ ಮರೀಚಿಕೆಯಾಗಿಯೇ ಉಳಿಯುತ್ತದೆ. ತನ್ನ ಮನ ಬಯಸಿದ್ದ ಆದರ್ಶ ಪುರುಷನೊಡನೆ ಕೆಲವು ಕಾಲ ಸುಖಪಟ್ಟು ಪದ್ಮಿನಿಗೆ ಈಗಿನ ಲೋಪ ಇನ್ನಷ್ಟು ಅಸಹನೀಯವಾಗುತ್ತದೆ ಪುನ: ಕಪಿಲನನ್ನರಸಿ ಅವಳು ಕಾಡಿಗೆ ಹೋಗುತ್ತಾಳಾದರೂ ಪದ್ಮಿನಿಯ ಹಂಬಲ ಪದ್ಮಿನಿ-ಕಪಿಲ ದೇವದತ್ತರ ಅಂತ್ಯದೊಂದಿಗೇ ಪರ್ಯವಸಾನಗೊಳ್ಳುವುದು ಅನಿವಾರ್ಯ. ಮನುಷ್ಯನ ಪೂರ್ಣತ್ವದ ಹಂಬಲ ಎಂದೂ ಫಲಿಸದ ಮರೀಚಿಕೆಯಷ್ಟೇ ಎನ್ನುವ ಅಸ್ತಿತ್ವವಾದಿ ನಿಲುವನ್ನೇ ನಾಟಕ ಬಿಂಬಿಸುತ್ತದೆ. ಪದ್ಮಿನಿಯ ಮಗ ಬಾಲಕ. ಅಜ್ಞಾತ ನೋವು-ಚಿಂತೆಗಳಿಂದಾಗಿ ವಯಸ್ಸಿಗೆ ಮೀರಿದ ಅಸಹಜ ಮೌನ-ಗಾಂಭೀರ್ಯಗಳ ಮೊರೆ ಹೊಕ್ಕವನು. ಈ ಬಾಲಕ ಹಾಗೂ ಹಯವದನ ಇಬ್ಬರೂ ಪರಸ್ಪರರ ಸಂಪರ್ಕದಿಂದಾಗಿ ತಮ್ಮ ತಮ್ಮ ಲೋಪಗಳನ್ನು ನೀಗಿಸಿಕೊಳ್ಳುತ್ತಾರೆ. ಧ್ವನಿ-ದೇಹಾಕೃತಿ ಎರಡರಲ್ಲೂ ಪೂರ್ಣಾಂಗನಾದ ಕುದುರೆಯ ರೂಪದ ಹಯವದನನ ಮೇಲೆ, ವಯಸ್ಸಿಗೆ ಸಹಜವಾಗಿ ಲವಲವಿಕೆಯಿಂದಿರಲು, ನಗಲು ಕಲಿತ ಬಾಲಕ ಸವಾರಿ ಮಾಡುತ್ತ ತೆರಳುತ್ತಾನೆ. ಕೈಗೆಟುಕುವ ವಿಷಯಗಳಿಗೆ ಸಂಬಂಧಿಸಿದ್ದರೆ ಮಾತ್ರ ಪೂರ್ಣತ್ವದ ಹಂಬಲ ಈಡೇರುತ್ತದೆಂದು ಇದನ್ನು ಅರ್ಥೈಸಬಹುದಾಗಿದೆ. ನಾಟಕ ರಚನೆಯಲ್ಲಿ ಕಾರ್ನಾಡರು ಜಾನಪದ ಕಥೆಗಳಿಂದ, ಜಾನಪದ ರಂಗಭೂಮಿಯಿಂದ ಸಿಗಬಹುದಾದ ಎಲ್ಲಾ ಸಾಮಾಗ್ರಿಗಳನ್ನು ತೆಗೆದುಕೊಂಡು ಬಳಸಿ ನಾಟಕವನ್ನು ಅತ್ಯಂತ ಶ್ರೀಮಂತಗೊಳಿಸಿದ್ದಾರೆ. ‘ಹಯವದನ’ ದಲ್ಲಿ ಕಾಳಿ ಮಾತನಾಡುತ್ತಾಳೆ. ಅಂತೆಯೇ ಗೊಂಬೆಗಳು ಮಾತನಾಡುತ್ತವೆ. ಈ ಮಾತುಗಳು ಬರಿಯ ಮಾತುಗಳಲ್ಲ. ಮನುಷ್ಯರ ಅಂತರಾಳದಲ್ಲಿ ನಡೆಯುವ ಮನೋವ್ಯಾಪಾರದ ಗುಟ್ಟನ್ನು ಪ್ರಕಟಪಡಿಸುವ ತಂತ್ರ. ಇಂತಹ ಅನೇಕ ತಂತ್ರಗಳಿಂದ ಈ ನಾಟಕದಲ್ಲಿ ಲೇಖಕರು ರಂಗಭಾಷೆಯನ್ನು ವಿಸ್ತರಿಸಿದ್ದಾರೆ. ಮತ್ತು ರಂಗ ಸಾಧ್ಯತೆಗಳನ್ನು ತೆರೆಸಿದ್ದಾರೆ. ವಸ್ತುವಿನ ದೃಷ್ಟಿಯಿಂದಲ್ಲದೆ ತಂತ್ರದ ದೃಷ್ಠಿಯಿಂದಲೂ ಬಹು ಅಧ್ಯಯನ ಶೀಲವಾದ ನಾಟಕ ‘ಹಯವದನ’ ಅನ್ನುವುದು ಗಮನಾರ್ಹ ವಿಷಯವಾಗಿದೆ. ನಾಟಕ ಕವಿತೆಗಳನ್ನು ಒಳಗೊಂಡಿದೆ. ನಾಟಕದಲ್ಲಿ ಬರುವ ಕವಿತೆಗಳು ಅರ್ಥಗರ್ಭಿತವಾಗಿವೆ. ನಾಟಕದ ಒಂದು ದೌರ್ಬಲ್ಯವೆಂದರೆ ಪೂರ್ಣತ್ವವನ್ನು ಹಂಬಲಿಸುವ, ಅರಸುವ ಪದ್ಮಿನಿ ಶರೀರಕ್ಕೆ ಕೊಡುವ ಮಹತ್ವವನ್ನು ‘ಶಿರ’ಕ್ಕೆ ಕೊಡದಿರುವುದು. ನಾಟಕದಲ್ಲಿ ಕಪಿಲನ ದೇಹದ ಗಂಧವನ್ನು ಅಘ್ರಾಣಿಸುವಂತೆ, ದೇವದತ್ತನ ಬುದ್ದಿಮತ್ತೆಯತ್ತ ಗಮನ ಸೆಳೆತ ಕಾಣಬರುವುದಿಲ್ಲ.
|
No Comment! Be the first one.