ಜ಼ೀ ವಾಹಿನಿಯಲ್ಲಿ ‘ಮಹಾನಾಯಕ ಅಂಬೇಡ್ಕರ್’ ಹೆಸರಿನ ಧಾರಾವಾಹಿ ಪ್ರಸಾರವಾಗುತ್ತಿದೆ. ದಾದಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕನ್ನು ಪುಸ್ತಕಗಳ ಮೂಲಕ ತಿಳಿದುಕೊಳ್ಳಬೇಕಿತ್ತು. ಇವರ ಕುರಿತ ಕೆಲವಾರು ಸಿನಿಮಾಗಳು ಬಂದಿವೆಯಾದರೂ ಅಂಬೇಡ್ಕರರ ಬದುಕಿನ ಎಲ್ಲ ವಿವರಗಳನ್ನು ಆ ಸಿನಿಮಾಗಳು ಒಳಗೊಂಡಿಲ್ಲ. ಈ ನಿಟ್ಟಿನಲ್ಲಿ ಈ ಮೇರು ವ್ಯಕ್ತಿಯ ಲೈಫ್ ಸ್ಟೋರಿಯನ್ನು ದೃಶ್ಯರೂಪದಲ್ಲಿ ಕಾಣುವುದು ಯಾರಿಗಾದರೂ ಕುತೂಹಲದ ವಿಚಾರವೇ. ಇದೀಗ ಹಿಂದಿಯಿಂದ ಡಬ್ ಆಗಿ ಕನ್ನಡಲ್ಲೂ ಟೆಲಿಕಾಸ್ಟ್ ಆಗುತ್ತಿರುವ ‘ಮಹಾನಾಯಕ ಅಂಬೇಡ್ಕರ್’ ಧಾರಾವಾಹಿಯ ಕುರಿತಾಗಿ ಸಾಕಷ್ಟು ಅಭಿಪ್ರಾಯಗಳು ಕೇಳಿಬರುತ್ತಿವೆ. ಪ್ರಗತಿಪರ ಬರಹಗಾರ ಕೆ.ಎಲ್. ಚಂದ್ರಶೇಖರ್ ಐಜೂರ್ ಅವರು ಇಲ್ಲಿ ತಮ್ಮ ಅನಿಸಿಕೆಗಳನ್ನು ದಾಖಲಿಸಿದ್ದಾರೆ…
ಈ ಕಾಲದ ಕಮರ್ಷಿಯಲ್ ಅಬ್ಬರ ಮತ್ತು TRP ಎದುರು ಪೈಪೋಟಿಗಿಳಿದಂತೆ ‘ಮಹಾನಾಯಕ ಅಂಬೇಡ್ಕರ್’ ಧಾರಾವಾಹಿ ಕಾಣುತ್ತಿದೆ. ಅನೇಕ ಕಡೆ ಸಂಭಾಷಣೆ ತೀರಾ ಕೃತಕ ಮತ್ತು ಪೇಲವ ಅನ್ನಿಸುತ್ತಿದೆ. ಬಹುಶಃ ಇದಕ್ಕೆ ಡಬ್ಬಿಂಗೂ ಕಾರಣವಿರಬಹುದು. ಹಾಗೆ ನೋಡಿದರೆ ಅಂಬೇಡ್ಕರರು ಬದುಕಿದ್ದಾಗಲೇ ಪ್ರಕಟಗೊಂಡಿರುವ ಧನಂಜಯ್ ಕೀರ್ ಬರೆದಿರುವ ‘Dr. Ambedkar: Life and Mission’ ಈ ಧಾರಾವಾಹಿಯ ಮೂಲಪಠ್ಯ.
ಇದೇ ಕೃತಿಯನ್ನು ಜಬ್ಬಾರ್ ಪಟೇಲ್ ತರಹದ ನಿರ್ದೇಶಕರ ಕೈಗೆ ಕೊಟ್ಟು ಧಾರಾವಾಹಿ ಚಿತ್ರೀಕರಿಸಿದಿದ್ದರೆ ಅಂಬೇಡ್ಕರ್ ಆತ್ಮಕಥನಕ್ಕೆ ಮುಡಿಪು ಅರ್ಪಿಸುವ ರೀತಿಯಲ್ಲಿ ನ್ಯಾಯ ಸಲ್ಲಿಸಬಹುದಿತ್ತು. ಜಬ್ಬಾರ್ ಪಟೇಲ್ ನಿರ್ದೇಶನದ ಅಂಬೇಡ್ಕರ್ ಸಿನಿಮಾ ಇವತ್ತಿಗೂ ಕ್ಲಾಸಿಕ್ ಅನ್ನಿಸಲು ಮುಖ್ಯ ಕಾರಣ, ಅಂಬೇಡ್ಕರ್ ಬದುಕಿನ ಬಹುಮುಖ್ಯ ಘಟನೆಗಳನ್ನು ಎರಡು ಮುಕ್ಕಾಲು ಗಂಟೆಗಳ ಸಿನಿಮಾದಲ್ಲಿ ಎಲ್ಲಿಯೂ ಮುಕ್ಕಾಗದಂತೆ ಕಡೆದಿರುವುದು. ಅನುಭವಿ ಕಲಾವಿದರ ಆಯ್ಕೆ, ಸಂಗೀತ, ಹೊರಾಂಗಣ ಚಿತ್ರೀಕರಣ ಈ ಸಿನಿಮಾದ ಹೆಚ್ಚುಗಾರಿಕೆಗಳು.
ಕನ್ನಡದ ಲೇಖಕರೊಬ್ಬರ ಹದಿಮೂರರ ಹರೆಯದ ಮಗ 36 ಪುಸ್ತಕಗಳನ್ನು ಬರೆದ ರೀತಿಯಲ್ಲಿ ಅಂಬೇಡ್ಕರರನ್ನು ಕಿರುತೆರೆಯಲ್ಲಿ ಕಟ್ಟಿಕೊಡುವುದು ಅಷ್ಟು ಸರಿಯಲ್ಲವೆಂದು ಕಾಣುತ್ತದೆ. ಜಬ್ಬಾರ್ ಪಟೇಲ್ ನಿರ್ದೇಶನದ ‘ಬಾಬಾಸಾಹೇಬ್ ಅಂಬೇಡ್ಕರ್’ ಇಂಡಿಯಾದ ದಿ ಬೆಸ್ಟ್ ಸಿನಿಮಾಗಳಲ್ಲೊಂದು. ಆ ಸಿನಿಮಾ ಯೂಟ್ಯೂಬ್’ನಲ್ಲಿದೆ, ಇನ್ನೂ ನೋಡದವರು ಇಂದೇ ದಯವಿಟ್ಟು ನೋಡಿ.
No Comment! Be the first one.