ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ, ನಮ್ಮ ಕರಾವಳಿ ಹುಡುಗಿ ಅನುಷ್ಕಾ. ಒಂದು ಕಾಲದಲ್ಲಿ ಕನ್ನಡದ ಧಾರಾವಾಹಿಯ ಮೂಲಕ ನಟನೆಗಿಳಿದು, ಇಲ್ಲಿ ಅವಕಾಶಗಳು ಸಿಗದೆ, ತೆಲುಗು, ತಮಿಳು ನೆಲದಲ್ಲಿ ಛಾನ್ಸು ಪಡೆದವಳು!
ಅದಾದ ಮೇಲೆ ರಜಿನಿಕಾಂತ್, ಚಿರಂಜೀವಿ, ಮಹೇಶ್ ಬಾಬು, ವಿಜಯ್, ಅಜಿತ್, ಸೂರ್ಯ, ಪ್ರಭಾಸ್, ವಿಕ್ರಂ, ಕಾರ್ತಿ – ಹೀಗೆ ತಮಿಳು ತೆಲುಗಿನ ಪ್ರಮುಖ ಹೀರೋಗಳೊಟ್ಟಿಗೆ ಅನುಷ್ಕಾ ತೆರೆ ಹಂಚಿಕೊಂಡಿದ್ದಾಳೆ. ಎಲ್ಲ ನಾಯಕಿಯರ ಸುತ್ತ ಮದುವೆಯ ಗಾಸಿಪ್ಪು ಸುತ್ತಿಕೊಳ್ಳುವಂತೆ, ಒಂದಾದ ಮೇಲೊಂದು ಸಿನಿಮಾಗಳಲ್ಲಿ ನಟಿಸುತ್ತಲೇ ಬಂದಿರುವ ಅನುಷ್ಕಾಳನ್ನೂ ಈ ರೂಮರುಗಳು ಆವರಿಸಿಕೊಳ್ಳುತ್ತಲೇ ಇರುತ್ತದೆ. ನಾಗಾರ್ಜುನನ ಮಗ ನಾಗಚೈತನ್ಯನಿಗೂ ಅನುಷ್ಕಾಗೂ ಮದುವೆ ಆಗೇಹೋಯ್ತು ಅಂತಾ ಸುದ್ದಿ ಹಬ್ಬಿತ್ತು. ಆಮೇಲೆ ಪ್ರಭಾಸ್ ಜೊತೆಗೂ ಈಕೆಯ ಹೆಸರು ತಳುಕು ಹಾಕಿಕೊಂಡಿತು. ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಅಂತಾ ಆಂಧ್ರ ಮೀಡಿಯಾ ಬರೆದೂ ಬರೆದೂ ಸುಸ್ತಾಯಿತು. ಇದು ಸಾಕು ಎನಿಸಿದಾಗ ಅದ್ಯಾರೋ ಕ್ರಿಕೆಟಿಗನ ಜೊತೆ ಅನುಷ್ಕಾ ಮದುವೆ ಫಿಕ್ಸು ಅಂತಾ ಬ್ರೇಕಿಂಗ್ ನ್ಯೂಸೂ ಬಂತು. ಈಗ ಆ ಲಿಸ್ಟಿಗೆ ಮತ್ತೊಬ್ಬ ಸೇರಿಕೊಂಡಿದ್ದಾನೆ!
ಅವನು ತೆಲುಗಿನ ಖ್ಯಾತ ನಿರ್ದೇಕ ಕೆ. ರಾಘವೇಂದ್ರ ರಾವ್ ಪುತ್ರ. ಹೆಸರು ಕೋವೆಲಮುಡಿ ಪ್ರಕಾಶ್. ಈ ಹಿಂದೆ ಇದೇ ಅನುಷ್ಕಾ ನಟಿಸಿದ್ದ ಜೀರೋ ಸೈಜ಼್ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಇದೇ ಪ್ರಕಾಶ್. ಬರಹಗಾರ್ತಿ ಕನ್ನಿಕಾ ಧಿಲ್ಲೊನ್ ಜೊತೆ ಪ್ರಕಾಶ್ ೨೦೧೪ರಲ್ಲಿ ಮದುವೆಯಾಗಿದ್ದ. ೨೦೧೭ರಲ್ಲಿ ಡಿವೋರ್ಸ್ ಕೊಡುವ ಮೂಲಕ ಸಂಬಂಧದಿಂದ ಕಳಚಿಕೊಂಡಿದ್ದ. ಈಗ ಪ್ರಕಾಶ್ ಅನುಷ್ಕಾಳೊಟ್ಟಿಗೆ ಮದುವೆಯಾಗುತ್ತಾನೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಅನುಷ್ಕಾ ಯಾವತ್ತೂ ಇಂಥಾ ಗಾಳಿ ಸುದ್ದಿಗಳಿಗೆ ತಲೆಕಡಿಸಿಕೊಂಡವಳೇ ಅಲ್ಲ. ಯಾವಾಗ ಇಂಥ ರೂಮರ್ ಹಬ್ಬಿದರೂ, ಮೀಡಿಯಾದವರು, ಅಭಿಮಾನಿಗಳು ಪ್ರಶ್ನೆ ಕೇಳಿದಾಗಲೂ ಆಕೆ ಹೇಳೋದು ಒಂದೇ- ‘ಕಾಲವೇ ಉತ್ತರಿಸುತ್ತದೆ’. ನಿಜ… ಸಿನಿಮಾ ಕಲಾವಿದರೆಂದಮೇಲೆ ಅವರ ಸುತ್ತ ಬಣ್ಣ ಬಣ್ಣದ ಸುದ್ದಿಗಳು ರೆಕ್ಕೆ ಪುಕ್ಕಗಳ ಸಮೇತ ಸುಳಿದಾಡುವುದು ಸಹಜ. ಹಾಗಂತ ಅದರ ಬಗ್ಗೆ ಮಾತಾಡುತ್ತಾ ಕೂತರೆ ನಟನೆ ಕಡೆ ಗಮನ ಕೊಡಲು ಸಾಧ್ಯವೇ ಆಗುವುದಿಲ್ಲ. ಒಂದು ವೇಳೆ ಇಂಥಾ ವಿಚಾರಕ್ಕೆಲ್ಲಾ ಉತ್ತರ ನೀಡುತ್ತಾ ಕೂತಿದ್ದರೆ ಅನುಷ್ಕಾ ಈ ಮಟ್ಟಕ್ಕೆ ಬೆಳೆಯಲು ತಾನೆ ಹೇಗೆ ಸಾಧ್ಯವಾಗುತ್ತಿತ್ತು?
No Comment! Be the first one.