ನೈಜ ಕಥಾಹಂದರದ ಸಿನಿಮಾಗಳಿಗೆ ಬಿ ಟೌನ್ ಸಾಕಷ್ಟು ಒತ್ತು ನೀಡುತ್ತಿದ್ದು, ಬಯೋಪಿಕ್ ಆಧಾರಿತ ಸಿನಿಮಾಗಳತ್ತ ಬಾಲಿವುಡ್ ನ ಬಿಗ್ ಬಿಗ್ ನಿರ್ದೇಶಕರು ಒಲವು ತೋರಿಸುತ್ತಿದ್ದಾರೆ. ಈ ಹಿಂದೆ ಆದಿತ್ಯ ಧಾರ್ ನಿರ್ದೆಶನದಲ್ಲಿ ಮೂಡಿಬಂದ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ನೈಜ ಕಥಾಹಂದರದ ಸಿನಿಮಾ ಆಗಿತ್ತು. ಈ ಸಿನಿಮಾವು ಬಾಲಿವುಡ್ ನಲ್ಲಿ ದೊಡ್ಡ ಸೆನ್ಸೇಷನ್ನನ್ನೇ ಕ್ರಿಯೇಟ್ ಮಾಡಿತ್ತು. ನಾಯಕ ವಿಕಿ ಕೌಶಲ್ ಅಭಿನಯದಲ್ಲಿ ಮೂಡಿಬಂದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 342 ಕೋಟಿ ರೂಪಾಯಿ ಬಾಚಿಕೊಂಡು ದಾಖಲೆಯನ್ನು ನಿರ್ಮಿಸಿತ್ತು. ಇದೀಗ ನೈಜ ಕಥಾಹಂದರ ಹೊಂದಿರುವ ಸಿನಿಮಾವೊಂದು ತೆರೆಯ ಮೇಲೆ ಮೂಡಲು ಸಿದ್ಧವಾಗುತ್ತಿದೆ.
ಹೌದು.. ಉರಿ ಚಿತ್ರದಂತೆಯೇ, ನೈಜ ಕಥಾ ಹಂದರವನ್ನು ಹೊಂದಿದ್ದ ಬಾಲಾಕೋಟ್ ದಾಳಿಯ ಸಿನೆಮಾವನ್ನು ತೆರೆಗಪ್ಪಳಿಸಲು ಬಾಲಿವುಡ್ ತಯಾರಿ ನಡೆಸುತ್ತಿದೆ. ಈ ಕುರಿತಂತೆ ಬಾಲಿವುಡ್ ಟ್ರೇಡ್ ಅನಾಲಿಸ್ಟ್ ತರುಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ವಿವೇಕ್ ಒಬೆರಾಯ್ ಬಾಲಾಕೋಟ್ ಸಿನೆಮಾವನ್ನು ಕೈಗೆತ್ತಿಕೊಂಡಿದ್ದು, ಬಾಲಕೋಟ್: ದಿ ಟ್ರೂ ಸ್ಟೋರಿ ಎಂದು ಹೆಸರಿಡಲಾಗಿದೆ ಎಂದು ಹೇಳಿದ್ದಾರೆ. ಈ ಸಿನೆಮಾ ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ತೆರಕಾಣಲಿದೆ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ. ಇದೇ ವರ್ಷ ಬಾಲಾಕೋಟ್ ಸಿನಿಮಾ ಸೆಟ್ಟೇರಲಿದೆ. ವಿಶೇಷವೆಂದರೆ ಈ ಸಿನಿಮಾವನ್ನು ಜಮ್ಮು, ಕಾಶ್ಮೀರ, ದಿಲ್ಲಿ ಮತ್ತು ಆಗ್ರಾದಲ್ಲಿ ಚಿತ್ರೀಕರಣ ನಡೆಸುವ ಪ್ಲ್ಯಾನ್ ನಲ್ಲಿ ಚಿತ್ರತಂಡವಿದೆ.