ಅದೆಷ್ಟು ಜನ ಹೆಣ್ಣುಮಕ್ಕಳು ಕಣ್ಣೀರಿಟ್ಟಿದ್ದರೋ, ಯಾರೆಲ್ಲ ಅಯ್ಯೋ ಅಂದಿದ್ದರೋ, ಅವರೆಲ್ಲರ ಶಾಪ ಒಂದೇ ಏಟಿಗೆ ತಟ್ಟಿದೆ. ಮಾಡಬಾರದ್ದನ್ನೆಲ್ಲಾ ಮಾಡಿ ಧಿಮಾಕಿನಿಂದ ತಿರುಗುತ್ತಿದ್ದ ದವನ್ ಎನ್ನುವ ಬ್ಲೇಡ್ ಗಿರಾಕಿ ಈಗ ಬೇಸಿಗೆ ರಜೆ ಕಳೆಯಲು ಪರಪ್ಪನ ಅಗ್ರಹಾರಕ್ಕೆ ಹೋಗಿದ್ದಾನೆ!
ರಾಜಾಜಿನಗರದಲ್ಲಿ ʻಫ್ಲೆಮಿಂಗೋ ಸೆಲೆಬ್ರೆಟೀಸ್ ವರ್ಲ್ಡ್ʼ ಎನ್ನುವ ಕಾಸು ಗೆಬರುವ ಅಂಗಡಿ ಇದೆ. ಕಳೆದ ಹತ್ತು ವರ್ಷಗಳಿಂದ ದವನ್ ಸೋಹಾ ಎನ್ನುವ ಫೋರ್ ಟ್ವೆಂಟಿಯೊಬ್ಬ ಈ ಸಂಸ್ಥೆಯನ್ನು ನಡೆಸುತ್ತಿದ್ದಾನೆ. ಸಿನಿಮಾ ರಂಗದ ಎಲ್ಲ ವಿಭಾಗಗಳ ತರಬೇತಿ ಕೊಡುತ್ತೇನೆ ಅಂತಾ ಬೋರ್ಡು ಹಾಕಿಕೊಂಡು ಆಗಾಗ ಜಾಹೀರಾತು ಕೊಡುತ್ತಾನೆ. ಅದನ್ನು ನೋಡಿದದವರು ವಿಚಾರಿಸಲು ಹೋದಾಗ ʻಈಗ ಸಿನಿಮಾ ಇಂಡಸ್ಟ್ರಿಯಲ್ಲಿರುವ ಮುಕ್ಕಾಲು ಜನರಿಗೆ ನಾನೇ ಅವಕಾಶ ಕೊಡಿಸಿರೋದುʼ ಅಂತಾ ಸುಳ್ಳು ಸುಳ್ಳೇ ಹೇಳಿ ರೈಲು ಹತ್ತಿಸುತ್ತಾನೆ. ಸೆಲೆಬ್ರಿಟಿಗಳ ಜೊತೆಗೆ ತೆಗೆಸಿಕೊಂಡ ಸೆಲ್ಫೀ ಫೋಟೋಗಳನ್ನು ತೋರಿಸಿ ಹಳ್ಳಕ್ಕೆ ಬೀಳಿಸಿಕೊಳ್ಳುತ್ತಾನೆ. ಉತ್ತರ ಭಾರತ ಮೂಲದ ವಂಚಕ ದವನ್ ಸೋಹಾ ಇಷ್ಟೆಲ್ಲಾ ಮಾಡಿ ಯಾಮಾರಿಸೋದು ತೀರಾ ನಿರ್ಗತಿಕರು, ಬಣ್ಣದ ಬದುಕಿನ ಕನಸು ಕಾಣುವ ಮುಗ್ದರು ಮತ್ತು ಅಮಾಯಕರನ್ನು.
ʻಸಿನಿಮಾದಲ್ಲಿ ಮೇಕಪ್ ಆರ್ಟಿಸ್ಟ್ ಕೆಲಸ ಕೊಡಿಸ್ತೀನಿʼ ಅಂತಾ ಬಡ ಹೆಣ್ಣುಮಕ್ಕಳನ್ನು ಸೆಳೆಯುವ ದವನ್ ʻಬ್ಯೂಟಿಷಿಯನ್ ಕೋರ್ಸ್ʼ ಆರಂಭಿಸುತ್ತಾನೆ. ಸಿನಿಮಾ ರಂಗದ ಟಾಪ್ ಮೇಕಪ್ ಆರ್ಟಿಸ್ಟುಗಳು ಬಂದು ಪಾಠ ಹೇಳಿಕೊಡುತ್ತಾರೆ ಅಂತೆಲ್ಲಾ ಬೂಟಾಟಿಕೆಯ ಮಾತಾಡಿರುತ್ತಾನೆ. ಇವನ ಮಾತನ್ನು ನಂಬಿ ಕೊರಳಲ್ಲಿದ್ದ ತಾಳಿ, ಒಡವೆಗಳನ್ನೆಲ್ಲಾ ಅಡವಿಟ್ಟು ಹಣ ಹೊಂದಿಸಿಕೊಂಡು ಬಂದು ಇವನ ಎದೆ ಮೇಲೆ ಸುರಿಯುತ್ತಾರೆ. ಅಷ್ಟೇ…. ದವನ್ ಕಾಸು ಪೀಕಿದ ನಂತರ ಅಸಲೀ ವರಸೆ ಶುರು ಮಾಡುತ್ತಾನೆ. ಬೋರ್ಡಿಗಿಲ್ಲದವರನ್ನು ತಂದು ನಿಲ್ಲಿಸಿ ಪಾಠ ಶುರು ಮಾಡುತ್ತಾನೆ. ಪ್ರಶ್ನಿಸಿದವರನ್ನು ಬೆದರಿಸುತ್ತಾನೆ. ಎಲ್ಲಿಂದಲೋ ಹಣ ಹೊಂಚಿಕೊಂಡು ಬಂದು ಕೋರ್ಸು ಕಲಿಯಲು ಬಂದವರು ಹಿಡಿ ಶಾಪ ಹಾಕಿಕೊಂಡು ಸುಮ್ಮನಾಗುತ್ತಾರೆ.
ಕೋರ್ಸ್ ಹೆಸರಲ್ಲಿ ಮಾತ್ರವಲ್ಲದೆ, ನಟನೆಯ ಛಾನ್ಸು ಕೊಡಿಸುತ್ತೀನಿ ಅಂತಲೂ ಯಾಮಾರಿಸುವ ದವನ್ ಮೇಲೆ ಈ ವರೆಗೆ ಅಫಿಷಿಯಲ್ಲಾಗಿ ಫೈಲ್ ಆಗಿರುವ ಕಂಪ್ಲೇಂಟುಗಳ ಸಂಖ್ಯೆ ಅರವತ್ತಕ್ಕೂ ಹೆಚ್ಚಿದೆ. ಇನ್ನು, ಇವನಿಂದ ವಂಚನೆಗೆ ಒಳಗಾಗಿ ಸುಮ್ಮನಾದವರು ಅದೆಷ್ಟು ಜನರಿದ್ದಾರೋ. ವರ್ಷಕ್ಕೊಮ್ಮೆ ಸೆಲೆಬ್ರಿಟಿ ಕ್ಯಾಲೆಂಡರ್ ಹೊರತರುವ ನೆಪದಲ್ಲಿ ಹೆಣ್ಣುಮಕ್ಕಳನ್ನು ಬಳಸಿಕೊಂಡ ಕೇಸೂ ಇವನ ಮೇಲಿದೆ. ಕಳೆದ ಹತ್ತು ವರ್ಷಗಳಲ್ಲಿ ದವನ್ ಸೋಹಾ ಮಾಡಿರುವ ಬಾನಗಡಿಗಳು ಬೇಕಾದಷ್ಟಿವೆ.
ಅವರಿವರಿಗೆ ಉಂಡೆ ನಾಮ ಇಕ್ಕೋದನ್ನೇ ಕಾಯಕವಾಗಿಸಿಕೊಂಡಿರುವ ಈತ ಇತ್ತೀಚೆಗೆ ʻದಶಕದ ಸಂಭ್ರಮʼ ಹೆಸರಿನಲ್ಲಿ ಅವಾರ್ಡ್ ಫಂಕ್ಷನ್ ಕೂಡಾ ಮಾಡಿದ್ದ. ಈ ನೆಪದಲ್ಲೂ ಸಾಕಷ್ಟು ಮಂದಿಯಿಂದ ಹಣ ವಸೂಲಿ ಮಾಡಿ ತಾರಾತಿಗಡಿ ಮಾಡಿಕೊಂಡಿದ್ದಾನೆ. ಧಗಾಕೋರ ದವನ್ ಎಂಥವನು ಅನ್ನೋದು ಗೊತ್ತಿರಲಿಲ್ಲವೋ ಏನೋ? ಸಾಕಷ್ಟು ಜನ ಅಮಾಯಕರಂತೆ ಹೋಗಿ ಅವನು ಕೊಟ್ಟ ಅವಾರ್ಡನ್ನು ಕಣ್ಣಿಗೊತ್ತಿಕೊಂಡು ಸ್ವೀಕರಿಸಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರೇ ಈ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದಿದ್ದು ದುರಂತ!
ಇಷ್ಟೆಲ್ಲಾ ಆಗುತ್ತಿದ್ದಂತೇ, ರಾಜಾಜಿನಗರ ಪೊಲೀಸರು ದವನ್ ಸೋಹಾನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ದವನ್ ತೋಡಿದ ಹಳ್ಳಕ್ಕೆ ಬಿದ್ದಿದ್ದ ಕೆಲವರು ಒಟ್ಟಾಗಿ ಸೇರಿ ಇವನ ವಿರುದ್ಧ ದೂರು ದಾಖಲಿಸಿದ್ದಾರೆ. ರಾಜಾಜಿನಗರ ಪೊಲೀಸರು ಯಾವುದೇ ಪ್ರಭಾವಕ್ಕೆ ಒಳಗಾಗದೆ ತನಿಖೆ ಮಾಡಿದ್ದೇ ಆದರೆ ದವನ್ ಸದ್ಯಕ್ಕೆ ಜೈಲಿಂದ ಹೊರಬರುವ ಛಾನ್ಸೇ ಇಲ್ಲ.
No Comment! Be the first one.