”ಭಾವನೆಗಳ ಭಾಷೆಗೆ ಮೌನವೆಂಬ ಲಿಪಿಯೇ ಪ್ರೇಮಿ” ಎಂಬ ಆಶಯದೊಟ್ಟಿಗೆ ಪ್ರೀತಿ ಪ್ರೇಮಗಳೆಂಬ ಜಗತ್ತಿನ ಅತೀ ಶ್ರೇಷ್ಠವಾದ, ಎಲ್ಲರೊಳಗೂ ಹುಟ್ಟಿ ಸಾಯುವ ಭಾವಕೋಶಗಳಿಗೆ ಹೊಸಬಗೆಯ ರೂಪ ನೀಡಿ ನಿರೂಪಿಸಲು ಹೊರಟಿದ್ದಾರೆ ನಿರ್ದೇಶಕ ವಿಜಯಾಪ್ರಿಯ ಅವರು. ಕನ್ನಡ ಚಿತ್ರರಂಗದ ಭವಿಷ್ಯದ ಭರವಸೆಯ ತಮ್ಮ ‘ವಿಜಯದೀಪ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಚೊಚ್ಚಲ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೀಚಗೊಂಡನಹಳ್ಳಿ ಗ್ರಾಮ, ವಳಗೇರಳ್ಳಿ ಅಂಚೆ, ಬಾಗೂರು ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆಯ ಶ್ರೀ ಮಾರುತಿ ದೇವಸ್ಥಾನದಲ್ಲಿ ದಿನಾಂಕ 24-12-2023 ರಂದು ದೇವರ ಸಮ್ಮುಖದಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ಜರುಗಿತು.
ಪೋಷಕರು, ಗುರು-ಹಿರಿಯರು, ಹಿತೈಷಿಗಳು ಹಾಗೂ ಗ್ರಾಮಸ್ಥರ ಸಾನಿಧ್ಯದಲ್ಲಿ, ಎಲ್ಲರ ಆಶೀರ್ವಾದದೊಂದಿಗೆ ಸಂಭ್ರಮದಿಂದ ನೆರವೇರಿತು. ಬಹುಶಃ ಇದೊಂದು ಹೊಸದಾದ ಪ್ರಯೋಗವೆಂಬುದು ನಿರ್ದೇಶಕರ ಅಭಿಪ್ರಾಯ. ಕಳೆದ 5 ವರ್ಷಗಳಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿರ್ದೇಶನದಲ್ಲಿ ಅನುಭವವಿರುವ ವಿಜಯಪ್ರಿಯ ರವರು ಮೊದಲ ಬಾರಿಗೆ ಕಥೆ- ಚಿತ್ರಕಥೆ ಬರೆದು ನಿರ್ದೇಶಕರಾಗಿ ಆಕ್ಷನ್ ಕಟ್ ಹೇಳಲಿದ್ದಾರೆ. ತಮ್ಮ ಚಿತ್ರದ ಶೀರ್ಷಿಕೆ ಬಗ್ಗೆ ಮಾತನಾಡಿದ ಅವರು ನನ್ನ ಕಥೆ ಪ್ರತಿಯೊಬ್ಬರ ಜೀವನದಲ್ಲಿ ನಡೆಯುವಂತಹ ಭಾವನಾತ್ಮಕ ಕಥೆ. ಆದರೆ ಎಂದಿಗೂ ಸವಕಲಾಗದ ಒಲವನ್ನು ಬೆಳ್ಳಿ ತೆರೆಯ ಹಂಗಿನಲ್ಲಿ ಭಿನ್ನ ರೂಪದಲ್ಲಿ ಅಭಿವ್ಯಕ್ತಿಸಲಾಗುತ್ತಿದೆ ಎಂದು ಹೇಳಿದರು.
ಈ ಚಿತ್ರದಲ್ಲಿ ಜೊತೆ-ಜೊತೆಯಲಿ ಧಾರವಾಹಿ ಖ್ಯಾತಿಯ ಎಳೆಯ ವಯಸ್ಸಿನ ಹಾಗೂ ಮುದ್ದು ಮೊಗದ ಸುಘ್ರೀವ್ ರವರು ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಸಂಜಯ್ ಎಲ್ ಚನ್ನಪ್ಪ ಅವರ ಛಾಯಗ್ರಹಣ, ವೆಂಕಿ ಯುಡಿವಿ ಅವರ ಸಂಕಲನ, ಹಿತನ್ ಹಾಸನ್ ಅವರ ಸುಮಧುರವಾದ ಸಂಗೀತ ನಿರ್ದೇಶನ ಹಾಗೂ ವಿ.ಗೋಪಿನಾಥ್ ಅವರ ಸಂಭಾಷಣೆಯ ಒತ್ತಾಸೆ ಇಡೀ ಚಿತ್ರತಂಡಕ್ಕೆ ಭರವಸೆ ನೀಡಿದೆ. ಹೀಗೆ ಹೆಸರಾಂತ ಹಾಗೂ ಯುವ ಉತ್ಸಾಹಿ ತಂತ್ರಜ್ಞರನ್ನು ಒಳಗೊಂಡ ಈ ಚಿತ್ರವು ಹೆಚ್ಚು ನಿರೀಕ್ಷೆಗೆ ಹುಟ್ಟುಹಾಕಿದೆ. ಅಂದಹಾಗೆ ಚಲನ ಚಿತ್ರದ ಶೀರ್ಷಿಕೆ ‘ಕಾದಲ್’. ಕಾದಲ್ ಎಂದು ನಾಮಕರಿಸಲಾದ ಈ ಚಲನಚಿತ್ರಕ್ಕೆ ಯಶಸ್ಸು ದೊರಕಲಿ. ಕನ್ನಡ ಚಿತ್ರರಂಗದಲ್ಲಿ ಅನನ್ಯವಾಗಲಿ ಎಂದು ಹಾರೈಸೋಣ.
No Comment! Be the first one.