ರಾಮರತ್ನ ಪ್ರೊಡಕ್ಷನ್ಸ್ ಮೂಲಕ ಕುಮಾರ ಕಂಠೀರವ ಅವರು ನಿರ್ಮಿಸಿರುವ ‘ಕನ್ನಡ್ ಗೊತ್ತಿಲ್ಲ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆರ್ ಜೆ ಮಯೂರ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಕನ್ನಡ್ ಗೊತ್ತಿಲ್ಲ ಕನ್ನಡ ಭಾಷಾ ಪ್ರೇಮವನ್ನು ಸಾರುವ ಚಿತ್ರವಾಗಿದೆ. ಈ ಚಿತ್ರ ನವಂಬರ್ನಲ್ಲೇ ತೆರೆಗೆ ಬರುತ್ತಿರುವುದು ವಿಶೇಷ.
ಹೊರ ರಾಜ್ಯಗಳಿಂದ ಬರುವ ಅನ್ಯಭಾಷಿಗರು ಹಲವಾರು ವರ್ಷಗಳಿಂದಲೂ ಕರ್ನಾಟಕದಲ್ಲೇ ನೆಲೆಸಿದ್ದರೂ ಕನ್ನಡ ಭಾಷೆಯನ್ನು ಕಲಿತಿರುವುದಿಲ್ಲ. ಅವರನ್ನು ಕನ್ನಡದಲ್ಲಿ ಮಾತನಾಡಿಸಲು ಪ್ರಯತ್ನಿಸಿದರೂ ಕೂಡ ‘ಸಾರಿ, ನಮಗೆ ಕನ್ನಡ್ ಗೊತ್ತಿಲ್ಲ ಎಂದು ಬಹಳ ಸುಲಭವಾಗಿ ಹೇಳಿಬಿಡುತ್ತಾರೆ. ಇಂಥದೇ ವಿಷಯವನ್ನು ಪ್ರಮುಖವಾಗಿಟ್ಟುಕೊಂಡು ನಿರ್ಮಿಸಿರುವ ‘ಕನ್ನಡ್ ಗೊತ್ತಿಲ್ಲ ಒಂದು ಥ್ರಿಲ್ಲರ್ ಚಿತ್ರವಾಗಿದೆ. ಈ ಚಿತ್ರದಲ್ಲಿ ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸುಧಾರಾಣಿ, ಪವನ್ ಕುಮಾರ್, ಧರ್ಮಣ್ಣ, ಸಂತೋಷ್ ಕರ್ಕಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಗಿರಿಧರ್ ದಿವಾನ್ ಅವರ ಛಾಯಾಗ್ರಹಣ ಹಾಗೂ ಸಂಕಲನವಿದೆ. ನಕುಲ್ ಅಭಯಂಕರ ಅವರ ಸಂಗೀತ ಸಂಯೋಜನೆಯಿದೆ.
ಈ ಸಿನಿಮಾ ಬಿಡುಗಡೆಯಾದ ನಂತರ ಎಲ್ಲೆಲ್ಲಿಂದಲೋ ಬಂದು ಇಲ್ಲಿ ನೆಲೆಸಿ, ಬೇಕಾಬಿಟ್ಟಿ ವರ್ತಿಸುವ ಮಂದಿ ನಿಜಕ್ಕೂ ಬದಲಾಗುತ್ತಾರೆ. ಅಂಥದ್ದೊಂದು ಕಂಟೆಂಟ್ ಈ ಚಿತ್ರದಲ್ಲಿದೆ ಎನ್ನುವ ಮಾತಿದೆ. ಕನ್ನಡದ ಬಗ್ಗೆ ಕ್ರಾಂತಿ ಮಾಡುವಂತಾ ಒಂದು ಪ್ರಮುಖ ಅಂಶ ಈ ಚಿತ್ರದಲ್ಲಿದ್ದು ಅದೇನು ಅನ್ನೋ ನಾಳೆ ತೆರೆಗೆ ಬರಲಿರುವ ಸಿನಿಮಾದಲ್ಲಿ ತಿಳಿಯಲಿದೆ.
ನಿಜ. ನಮ್ಮ ನೆಲದಲ್ಲಿ ನಾವೇ ಪರಕೀಯರಾಗುವಂಥಾ ಸಂದರ್ಭವಿದೆ. ಬಂದವರಿಗೆ ಕನ್ನಡ ಕಲಿಸೋ ಬದಲು ಸಾಕಷ್ಟು ಬಾರಿ ನಮ್ಮವರೇ ಅವರ ಭಾಷೆಗೆ ಒಗ್ಗಿಕೊಂಡು ಬಿಡುತ್ತಾರೆ. ಇಂಥ ಸಂಕಟಗಳಿಗೆ ದನಿಯಾಗುವಂಥಾ ಸಿನಿಮಾವೊಂದು ಬೇಕಿತ್ತು. ಅದು ಕನ್ನಡ್ ಗೊತ್ತಿಲ್ಲದ ಮೂಲಕ ಈಡೇರುತ್ತಿದೆ!
No Comment! Be the first one.