ಕೋಡ್ಲು ರಾಮಕೃಷ್ಣ ನಿರ್ದೇಶನದಲ್ಲಿ ೧೯೯೦ರಲ್ಲಿ ಬಿಡುಗಡೆಯಾಗಿ ೨೫ವಾರ ಪ್ರದರ್ಶನ ಕಂಡು, ಸೂಪರ್ ಹಿಟ್ ಆಗಿದ್ದ ಉದ್ಭವ ಸಿನಿಮಾದ ಮುಂದುವರೆದ ಭಾಗ ಮತ್ತೆ ಉದ್ಭವ ಈಗ ಬಿಡುಗಡೆಯಾಗುತ್ತಿದೆ. ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರು ಎಲ್ಲೇ ಹೋದರೂ ಇದೇ ಚಿತ್ರದ ಕುರಿತಂತೆ ಕೇಳುತ್ತಿದ್ದರು. ಅದಕ್ಕಾಗಿಯೇ ಮತ್ತೊಮ್ಮೆ ಅದೇ ಸಿನಿಮಾದ ಮುಂದುವರೆದ ಭಾಗವನ್ನು ರೂಪಿಸಿದ್ದಾರೆ. ಅನಂತ್ನಾಗ್ ಡೇಟ್ ಹೊಂದಾಣಿಕೆಯಾಗದ ಕಾರಣದಿಂದ ಆ ಪಾತ್ರಕ್ಕೆ ರಂಗಾಯಣ ರಘು ಬಂದಿದ್ದಾರೆ. ಆ ಉದ್ಭವ ಕ್ಲಾಸ್ ಅಗಿತ್ತು. ಇದರಲ್ಲಿ ಡ್ಯಾನ್ಸ್, ಫೈಟು, ಕಾಮಿಡಿ ಇರುವುದರಿಂದ ಮಾಸ್ ಎನ್ನಬಹುದು. ಪಾತ್ರಗಳನ್ನು ಹಾಗೆಯೇ ಉಳಿಸಿಕೊಂಡು ಕಲಾವಿದರನ್ನು ಬದಲಾವಣೆ ಮಾಡಿಕೊಳ್ಳಲಾಗಿದೆ. ಮೊದಲ ಭಾಗದಲ್ಲಿ ದೇವರನ್ನು ತೋರಿಸಲಾಗಿ, ಎರಡನೆಯದರಲ್ಲಿ ದೇವರಿಗಿಂತ ದೊಡ್ಡದು ಉಧ್ಭವವಾಗುತ್ತೆ. ಅದು ಏನು ಎಂಬುದನ್ನು ಚಿತ್ರಮಂದಿರದಲ್ಲಿ ನೋಡಬೇಕು.
ಹಿರಿಯ ಮಗನ ಪಾತ್ರದಲ್ಲಿ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್, ಕಿರಿಯ ಮಗನಾಗಿ ಮಂಡ್ಯ ರವಿ ನಟಿಸಿದ್ದಾರೆ. ನಾಯಕಿಯಾಗಿ ಮಿಲನ ನಾಗರಾಜ್, ಶೃಂಗಾರ ಸ್ವಾಮೀಜಿಯಾಗಿ ಮೋಹನ್ ಬಣ್ಣ ಹಚ್ಚುವುದರ ಜತೆಗೆ ಸಂಭಾಷಣೆಯನ್ನು ಬರೆಯುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇವರ ಆಪ್ತ ಭಕ್ಷೆಯಾಗಿ ಶುಭರಕ್ಷಾ ನಟನೆ ಚಿತ್ರದಲ್ಲಿದೆ. ಉಳಿದಂತೆ ಸುಧಾ ಬೆಳವಾಡಿ, ಅವಿನಾಶ್, ಪಿ.ಡಿ.ಸತೀಶ್, ಗಿರೀಶ್ ಭಟ್, ಚೇತನ್ ಚಮನ್, ನರೇಶ್, ಶಂಕರ್ ಅಶ್ವಥ್, ನಿರಂಜನ್ ನಟಿಸುತ್ತಿದ್ದಾರೆ. ಜಯಂತ್ ಕಾಯ್ಕಣಿ-ಪ್ರಹ್ಲಾದ್ ಸಾಹಿತ್ಯದ ಮೂರು ಗೀತೆಗಳಿಗೆ ವಿ.ಮನೋಹರ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಮೋಹನ್, ಸಂಕಲನ ಕೆಂಪರಾಜು, ಸಾಹಸ ಥ್ರಿಲ್ಲರ್ ಮಂಜು, ನೃತ್ಯ ತ್ರಿಭುವನ್ ನಿರ್ವಹಿಸುತ್ತಿದ್ದಾರೆ. ನಟಿ ಅಪೇಕ್ಷಾ ಪುರೋಹಿತ್ ಮೊದಲ ಬಾರಿಗೆ ಮತ್ತೆ ಉದ್ಭವ ಮೂಲಕ ಕಾಸ್ಟ್ಯೂಮ್ ಡಿಸೈನರ್ ಆಗಿ ತೆರೆ ಹಿಂದೆ ಕೆಲಸ ಮಾಡಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಮತ್ತೆ ಉದ್ಭವ ಚಿತ್ರದ ಟ್ರೇಲರ್ ಜನರಿಗೆ ಅಪಾರವಾಗಿ ಇಷ್ಟವಾಗಿದೆ. ಕೋಡ್ಲು ರಾಮಕೃಷ್ಣ ಕನ್ನಡ ಚಿತ್ರರಂಗ ಕಂಡ ಅತ್ಯಂತ ಕ್ರಿಯಾಶೀಲ ನಿರ್ದೇಶಕ. ಯುವಕರಾಗಿದ್ದಾಗ ಇದ್ದ ಅದೇ ಹುರುಪು ಇನ್ನೂ ಉಳಿಸಿಕೊಂಡು ಬಂದಿದ್ದಾರೆ. ಕಾಲಕಾಲಕ್ಕೆ ಅಪ್ಡೇಟ್ ಆಗಿ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ಮತ್ತೆ ಉದ್ಭವ ಕೂಡಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಬಹುದು ಎನ್ನುವ ನಿರೀಕ್ಷೆ ಇದೆ…
No Comment! Be the first one.