ಯುವ ನಿರ್ದೇಶಕ ಸುರೇಶ್ ರಾಜ್ ಯಾರ್ ಮಗ ಚಿತ್ರದ ಮೂಲಕ ಭೂಗತ ಲೋಕದ ಹಿನ್ನೆಲೆಯಲ್ಲಿ ತಾಯಿ ಮಗನ ನಡುವಿನ ಸೆಂಟಿಮೆಂಟ್ ಕಥೆಯನ್ನು ಹೇಳಹೊರಟಿದ್ದಾರೆ. ಚಿತ್ರೀಕರಣಕ್ಕೆ ಸಿದ್ದವಾಗಿರುವ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಮೊನ್ನೆ ನೆರವೇರಿತು. ಇದೇ ಸಂದರ್ಭದಲ್ಲಿ ಚಿತ್ರದ ಇತರೆ ಪಾತ್ರಗಳಿಗಾಗಿ ಆಡಿಷನ್ ಕೂಡ ನಡೆಯಿತು. ಕನ್ನಡ ಹೋರಾಟಗಾರ ಬಸವರಾಜ ಪಡುಕೋಟೆ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಇವರ ಪುತ್ರ ರಘು ಪಡುಕೋಟೆ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಚಿತ್ರದ ಕಥೆ ಕೂಡ ಇವರೇ ರಚಿಸಿದ್ದಾರೆ.
ಈ ಸಮಾರಂಭದಲ್ಲಿ ಮಂಜುನಾಥ ಸ್ವಾಮೀಜಿ, ಕರವೇ ಅಧ್ಯಕ್ಷ ನಾರಾಯಣ ಗೌಡ್ರು, ಗುರುರಾಜ ಹೊಸಕೋಟೆ, ಅಶ್ವಿನಿ ಗೌಡ, ದಯಾನಂದ್ ಇತರರು ಪಾಲ್ಗೊಂಡಿದ್ದರು. ನಿರ್ಮಾಪಕ ಬಸವರಾಜ ಪಡುಕೋಟೆ ಮಾತನಾಡಿ ನನ್ನ ಮಗನಿಗೆ ಮೊದಲಿನಿಂದಲೂ ಸಿನಿಮಾ ಬಗ್ಗೆ ತುಂಬಾ ಆಸಕ್ತಿ. ಅದಕ್ಕೆ ನಾನು ಈ ಚಿತ್ರ ನಿರ್ಮಾಣಕ್ಕೆ ಮುಂದಾದೆ. ಮುಂದಿನ ತಿಂಗಳು ಶೂಟಿಂಗ್ ಪ್ರಾರಂಭಿಸುವ ಪ್ಲ್ಯಾನ್ ಇದೆ. ಇವತ್ತು ನನ್ನ ಮಗನ ಹುಟ್ಟುಹಬ್ಬ, ಆ ಕಾರಣದಿಂದ ಚಿತ್ರದ ಟೀಸರ್ ಬಿಡುಗಡೆ ಹಾಗೂ ಕೆಲ ಪಾತ್ರಗಳಿಗೆ ಆಡಿಷನ್ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿವೆ ಎಂದು ಹೇಳಿದರು. ನಿರ್ದೇಶಕ ಸುರೇಶ್ ರಾಜ್ ಮಾತನಾಡಿ 9೦ರ ದಶಕದಲ್ಲಿ ನಡೆಯುವ ಅಂಡರ್ವರ್ಲ್ಡ್ ಕಥೆ, ರೆಟ್ರೋ ಸ್ಟೈಲ್ನಲ್ಲಿ ಚಿತ್ರವನ್ನು ನಿರೂಪಿಸುತ್ತಿವೆ. ತಾಯಿ ಮಗನ ನಡುವಿನ ಬಾಂಧವ್ಯವನ್ನು ಇಲ್ಲಿ ಹೇಳಹೊರಟಿವೆ. ನಾಯಕಿಯಾಗಿ ವಿದ್ಯಾ ಪ್ರಭು ಅಭಿನಯಿಸುತ್ತಿದ್ದಾರೆ ಎಂದು ಹೇಳಿದರು. ನಾಯಕ ರಘು ಪಡುಕೋಟೆ ಮಾತನಾಡುತ್ತ ಒಬ್ಬ ಮಗ, ತನ್ನ ತಾಯಿಯನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳಬಹುದು ಅಂತ ನಿರೂಪಿಸಲಾಗುತ್ತಿದೆ ತಾಯಿ ಕೂಡ ತನ್ನ ಮಗನ ಮೇಲೆ ಎಷ್ಟು ಕಾಳಜಿ ವಹಿಸುತ್ತಾಳೆ ಎನ್ನುವುದು ಚಿತ್ರದಲ್ಲಿದೆ. ಆಗಸ್ಟ್ನಲ್ಲಿ ಆರಂಭಿಸಿ ಮಂಗಳೂರು, ಬೆಂಗಳೂರು, ಹಾಗೂ ಮುಂಬೈನಲ್ಲಿ ಶೂಟಿಂಗ್ ನಡೆಸುವ ಪ್ಲ್ಯಾನ್ ಹಾಕಿಕೊಂಡಿವೆ ಎಂದು ಹೇಳಿದರು.
No Comment! Be the first one.