ಕೆಲವರಿಗೆ ಇರುವ ಒಂದು ಜನುಮದಲ್ಲಿ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವ ಬಯಕೆ ಇರುತ್ತದೆ. ಒಂದು ವೃತ್ತಿ ಕೈ ಹಿಡಿದು ದೊಡ್ಡ ಎತ್ತರಕ್ಕೆ ಕರೆದುಕೊಂಡು ಹೋಗಿ ಕೂರಿಸಿರುತ್ತದೆ. ಆದರೂ ಅವರಿಗೆ ಮತ್ತೊಂದು ಕಡೆಗೆ ಜಿಗಿಯುವ ತವಕ. ಅಲ್ಲೂ ಗೆಲ್ಲುವ ಇರಾದೆ. ಸದ್ಯ ಜನಪ್ರಿಯತೆಯ ತುತ್ತತುದಿಯುಲ್ಲಿರುವಾಗಲೇ ನಿವೃತ್ತಿ ಘೋಷಿಸಿರುವ ಸ್ಟಾರ್ ವಿಜಯ್. ಸಿನಿಮಾ ರಂಗದಲ್ಲಿ ಅಗಣಿತ ಅಭಿಮಾನಿಗಳಿರುವ ವಿಜಯ್ ಕಳೆದ ವರ್ಷ ಏಕಾಏಕಿ ನಿವೃತ್ತಿ ಘೋಷಣೆ ಮಾಡಿದ್ದರು. ಸ್ವತಃ ವಿಜಯ್ ಪ್ರಕಾರ ಅವರ ನಟನೆಯ ಕೊನೆಯು ಸಿನಿಮಾ ಜನನಾಯಕನ್.

ಈಗ ವಿಜಯ್ ನಟನೆಯ ಕೊನೆಯ ಚಿತ್ರ ‘ಜನನಾಯಕನ್’ ಚಿತ್ರೀಕರಣ ಅಧಿಕೃತವಾಗಿ ಮುಗಿದಿದ್ದು, ಎಲ್ಲರ ದೃಷ್ಟಿ ಅವರ ಮುಂದಿನ ನಡೆಯಾದ ಪೂರ್ಣ ಪ್ರಮಾಣದ ರಾಜಕೀಯ ಪ್ರವೇಶದ ಮೇಲಿದೆ.ತಮಿಳುನಾಡಿನ ವೆಟ್ರಿ ಕೂಟಣಿ (ವೆಟ್ರಿ ಕಾಗಂ) ಪಕ್ಷದ ನಾಯಕ ವಿಜಯ್, ಆಗಸ್ಟ್ ಎರಡನೇ ವಾರದಿಂದ ಚೆನ್ನೈನಿಂದ ರಾಜ್ಯಾದ್ಯಂತ 42 ದಿನಗಳ ಸುದೀರ್ಘ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಈ ಪ್ರವಾಸವು ಗ್ರಾಮೀಣ ಪ್ರದೇಶಗಳ ಮೇಲೆ ಹೆಚ್ಚು ಗಮನಹರಿಸುವ ನಿರೀಕ್ಷೆಯಿದೆ, ಜನರೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ಮತ್ತು ಅವರ ಮೂಲಭೂತ ಕಾಳಜಿಗಳನ್ನು ಅರ್ಥಮಾಡಿಕೊಳ್ಳುವುದು ಈ ಪ್ರವಾಸದ ಪ್ರಧಾನ ಉದ್ದೇಶವಂತೆ. ಸಾಂಪ್ರದಾಯಿಕ ರಾಜಕೀಯ ರೋಡ್ಶೋಗಳ ರೀತಿ ಇರಬಾರದು ಎನ್ನುವ ಕಾರಣಕ್ಕೆ ಈ ರಾಜ್ಯವ್ಯಾಪಿ ಅಭಿಯಾನವನ್ನು ಎಚ್ಚರಿಕೆಯಿಂದ ಪ್ಲಾನ್ ಮಾಡುತ್ತಿದ್ದಾರೆ. ಏಕೆಂದರೆ ವಿಜಯ್ ಸಿನಿಮಾ ರಂಗದಿಂದ ರಾಜಕೀಯಕ್ಕೆ ತಮ್ಮ ಪರಿವರ್ತನೆಯನ್ನು ಎಂದಿಗಿಂತಲೂ ಹೆಚ್ಚು ಗಂಭೀರವಾಗಿ ಪರಿಗಣಿಸಿದ್ದಾರೆ.
ಸದ್ಯ ರಾಜಕೀಯ ವಿಶ್ಲೇಷಕರು ಮತ್ತು ಅಭಿಮಾನಿಗಳು ತಮಿಳುನಾಡಿನ ರಾಜಕೀಯದಲ್ಲಿ ದೊಡ್ಡ ಬದಲಾವಣೆಗೆ ಈ ಪ್ರವಾಸ ಕಾರಣವಾಗಬಹುದು ಎಂದು ನಂಬಿದ್ದಾರೆ. ವಿಜಯ್ ಅವರ ಈ ದಿಟ್ಟ ನಡೆ ರಾಜ್ಯ ರಾಜಕೀಯದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡುವುದೇ? ಇಲ್ಲವೇ ಎನ್ನುವುದನ್ನು ಕಾಲವೇ ಉತ್ತರಿಸಲಿದೆ.












































