“ಕೊಡೋ ಕಾಸು ಕೊಟ್ಟಮೇಲೂ, ಕೈ ಕಾಲು ಹಿಡಿದು ದಮ್ಮಯ್ಯಾ ಅಂತಾ ಬೇಡಿಕೊಂಡು ಕೆಲಸ ಮಾಡಿಸಿಕೊಳ್ಳಬೇಕು” ಇತ್ತೀಚೆಗೆ ಒಡೆಯ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಸಾಕ್ಷಾತ್ ಛಾಲೆಂಜಿಂಗ್ ಸ್ಟಾರ್ ದರ್ಶನ್ ನೊಂದು ನುಡಿದ ಮಾತಿದು!
– ದರ್ಶನ್ ಏನಾದರೂ ಮಾತಾಡುತ್ತಾರೆ ಅಂದರೆ ಅದರ ಹಿಂದೆ ಸ್ಪಷ್ಟ ಕಾರಣವೂ ಇದ್ದೇ ಇರುತ್ತದೆ. ತಮಗೆ ಅಥವಾ ತಮ್ಮ ಸಿನಿಮಾ ನಿರ್ಮಾಪಕರಿಗೆ ಏನಾದರೂ ತೊಡಕಾದಲ್ಲಿ ಅದನ್ನು ಡೈರೆಕ್ಟಾಗಿ ಅಲ್ಲದಿದ್ದರೂ, ಇನ್ ಡೈರೆಕ್ಟಾಗಿಯಾದರೂ ತಪುಪಬೇಕಿರುವವರ ಗಮನಕ್ಕೆ ದಾಟಿಸೋದು ದರ್ಶನ್ ರೀತಿ. ಹಾಗಿದ್ದಲ್ಲಿ ಈ ಬಾರಿ ಒಡೆಯ ಸಿನಿಮಾದ ಆಡಿಯೋ ಬಿಡುಗಡೆ ದಿನದಂದು ದರ್ಶನ್ ಯಾರನ್ನು ಗಮನದಲ್ಲಿಟ್ಟುಕೊಂಡು ಹಾಗಂದರು? ಆಡಿಯೋ ಬಿಡುಗಡೆ ದಿನ ಯಾಕೆ ದರ್ಶನ್ ಸೈಡಲ್ಲಿ ಕುಳಿತಿದ್ದರು? ಅಂದು ದರ್ಶನ್ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ್ದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕುರಿತಾ? ಅನ್ನೋ ಅನುಮಾನವೀಗ ಎಲ್ಲೆಡೆ ಹೊಗೆಯಾಡುತ್ತಿದೆ.
ಅರ್ಜುನ್ ಜನ್ಯಾ ಕನ್ನಡ ಚಿತ್ರರಂಗದ ಅತ್ಯದ್ಭುತ ಪ್ರತಿಭಾವಂತ ಅನ್ನೋದರಲ್ಲಿ ನೋ ಡೌಟ್. ತೀರಾ ಸೊನ್ನೆಯಿಂದ ಶುರು ಮಾಡಿ, ಸಾಕಷ್ಟು ಪ್ರಯತ್ನಗಳನ್ನು ಮಾಡಿ, ಹಂತ ಹಂತವಾಗಿ ಹೆಜ್ಜೆಯಿಟ್ಟು ಮ್ಯಾಜಿಕಲ್ ಕಂಪೋಸರ್ ಅನ್ನಿಸಿಕೊಂಡವರು ಅರ್ಜುನ್. ಆದರೆ ದುಡ್ಡು ಸೇರುತ್ತಿದ್ದಂತೇ ಜನ್ಯಾ ಮೈಮರೆತಿದ್ದಾರಾ? ರಿಯಾಲಿಟಿ ಶೋ, ಸಂಗೀತ ಸಂಜೆ, ಫಾರಿನ್ ಟೂರು ಅಂಥಾ ನೆಪ ಹೇಳಿ ಒಪ್ಪಿಕೊಂಡ ಸಿನಿಮಾಗಳ ಕಡೆ ಉದಾಸೀನ ಮಾಡುತ್ತಿದ್ದಾರಾ? ಹೌದು ಅನ್ನುತ್ತಿದೆ ಮೂಲ. ತಮ್ಮ ಸಹಾಯಕರು, ಅರೇಂಜ್ ಮೆಂಟ್ಸ್ ಮಾಡೋರಿಗೆ ಕೆಲಸ ಹಂಚಿ, ಟ್ಯೂನ್ ಕಂಪೋಸು, ಫೈನಲ್ ಮಿಕ್ಸಿಂಗಿಗೆ ಮಾತ್ರ ಜನ್ಯಾ ಕೂರುತ್ತಿದ್ದಾರೆ. ಕೆಲವೊಮ್ಮೆ ತಾವು ಕೊಟ್ಟಿದ್ದೇ ಫೈನಲ್ ಎನ್ನುವಂತಾಗಿಬಿಡುತ್ತದೆ. ಇದರಿಂದ ಅರ್ಜುನ್ ಜನ್ಯಾಗೆ ಕೆಲಸ ವಹಿಸಿದ ಸಾಕಷ್ಟು ಜನ ಬೇಸರಗೊಂಡಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.
ಸಮಯದ ಗಡುವು ನಿಗಧಿ ಮಾಡಿಕೊಂಡು ಕ್ರಿಯಾಶೀಲ ಕೆಲಸ ಮಾಡಲು ಸಾಧ್ಯವಿಲ್ಲ ನಿಜ. ಸೃಜನಶೀಲ ಐಡಿಯಾಗಳು ಯಾವ ಹೊತ್ತಿನಲ್ಲಾದರೂ ಹುಟ್ಟಿಕೊಳ್ಳಬಹುದು, ಏನೂ ತೋಚದೆ ಶೂನ್ಯವೂ ಆವರಿಸಬಹುದು. ಅರ್ಜುನ್ ಜನ್ಯಾರಂಥ ಸಂಗೀತ ಸಂಯೋಜಕರಿಗಾದರೂ ಅಷ್ಟೇ. ಸಮಯದ ವಿಚಾರದಲ್ಲಿ ಆಚೀಚೆ ಆಗೋದು ಸಹಜ. ಆದರೆ, ಇರೋ ಕೆಲಸವನ್ನು ಬಿಟ್ಟು ಯಾವುದೋ ಎಕ್ಸ್’ಟ್ರಾ ಸಂಪಾದನೆಯ ಕಡೆಗೇ ಹೆಚ್ಚು ಗಮನ ಕೊಡೋದು ಎಷ್ಟು ಸರಿ? ಲಕ್ಷಗಟ್ಟಲೆ ಪ್ಯಾಕೇಜು ಕೊಟ್ಟವರು ‘ನಾವೇನು ಕಲ್ಲು ಕೊಡ್ತೀವಾ?’ ಅಂತಾ ಪ್ರಶ್ನಿಸೋದರಲ್ಲೂ ನ್ಯಾಯವಿದೆ… ಅರ್ಥ ಮಾಡ್ಕೊಳ್ತೀರಾ ಜನ್ಯಾ?
No Comment! Be the first one.