ವೇಷಾಧಾರಿ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ಪರ್ಮನೆಂಟಾದ ಸ್ಥಾನ ಪಡೆಯುವ ಕನಸು ಹೀರೋ ಆರ್ಯನ್ ಅವರದ್ದು. ಆರ್ಯನ್ ಈ ಚಿತ್ರದ ಬಗ್ಗೆ ಆರ್ಯನ್ ಏನು ಹೇಳುತ್ತಾರೆ? ಅವರ ಹಿನ್ನೆಲೆ ಏನು ಅನ್ನೋದರ ವಿವರ ಇಲ್ಲಿದೆ…
ನಿರೂಪಣೆ: ಸುಮ ಜಿ
ನಾನು ಹುಟ್ಟಿ ಬೆಳೆದದ್ದು ಪುತ್ತೂರಿನ ಸರ್ವೆ ಎಂಬ ಚಿಕ್ಕ ಹಳ್ಳಿಯಲ್ಲಿ. ಚಿಕ್ಕ ವಯಸ್ಸಿನಿಂದಲೂ ಒಬ್ಬ ಆಕ್ಟರ್ ಆಗ್ಬೇಕು ಅಂತ ಆಸೆ ಇತ್ತು. ಉಪೇಂದ್ರ ಹಾಗೂ ವಿಷ್ಣುವರ್ಧನ್ ಅವರ ಚಿತ್ರಗಳನ್ನು ಹೆಚ್ಚು ನೋಡುತ್ತಿದ್ದೆ. ಆದರೆ ಸರಿಯಾದ ದಾರಿ ತಿಳಿದಿರಲಿಲ್ಲ. ಶಾಲಾ ದಿನಗಳಲ್ಲಿ ಸಣ್ಣಪುಟ್ಟ ಡ್ಯಾನ್ಸ್, ಡ್ರಾಮಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಪಾಠಕ್ಕಿಂತ ಹೆಚ್ಚಾಗಿ ಉಪೇಂದ್ರ ಅವರ ಉದ್ದದ ಡೈಲಾಗ್ಗಳನ್ನ ಕ್ಲಾಸ್ನಲ್ಲಿ ಹೇಳುತ್ತಿದ್ದೆ. ನಾನೂ ಸಹ ಅವರಂತೆಯೇ ಆಗಬೇಕು ಅಂತ ಕನಸು ಕಾಣುತ್ತಿದ್ದೆ. ಡಿಗ್ರಿ ಮುಗಿದ ನಂತರ ಮೊದಲು ಬಂದದ್ದೇ ಬೆಂಗಳೂರಿನ ಗಾಂಧಿನಗರಕ್ಕೆ. ನನ್ನಂತ ಪ್ರತಿಭೆಗಳು ಹಲವು ಜನ ಗಾಂಧಿನಗರದಲ್ಲಿರುತ್ತಿದ್ದರು. ಅವರೊಂದಿಗೆ ನಾನು ಅಲ್ಲಿ ಅವರೊಂದಿಗೆ ಇರುತ್ತಿದ್ದೆ. ನಾನು ಮಧ್ಯಮವರ್ಗದ ಕುಟುಂಬದವನಾದ್ದರಿಂದ ಹೊಟ್ಟೆ ಪಾಡು ನೋಡಬೇಕಿತ್ತು. ಐಟಿ ಸೆಕ್ಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದೆ. ಹೀರೋ ಆಗೋ ಆಸೆ ಆಸಕ್ತಿ ಕಡಿಮೆಯಾಗಿರಲಿಲ್ಲ. ಸೃಷ್ಟಿ ದೃಶ್ಯಕಲಾ ಮಾಧ್ಯದಲ್ಲಿ ಆಕ್ಟಿಂಗ್ ಕೋರ್ಸ್ ಮಾಡಿಕೊಂಡೆ, ಕಲಾಗಂಗೋತ್ರಿ ನಾಟಕ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ಹೀಗೆ ನನ್ನನ್ನು ನಾನು ತಯಾರಿ ಮಾಡುತ್ತಾ ಹೋದೆ. ಇದರೊಂದಿಗೆ ಮಾಡಲಿಂಗ್ ಎಲಿಮೆಂಟ್ನ ರಾಧಿಕ ಶರ್ಮ ಎಂಬ ಸ್ನೇಹಿತರೊಬ್ಬರಿಂದ ಸಿನಿಮಾಕ್ಕೆ ಬರಲು ಸಹಾಯವಾಯಿತು. ಸುಮಾರು ೧೦-೧೧ ಚಿತ್ರದಲ್ಲಿ ಸಪೋರ್ಟಿಂಗ್ ರೋಲ್ ಮಾಡಿದ್ದೇನೆ. ಕೊನೆಗೆ ವೇಷಧಾರಿ ಸಿನಿಮಾದಲ್ಲಿ ನಾಯಕನಟನಾಗಿ ಅವಕಾಶ ಸಿಕ್ಕಿತು.
ನಿರ್ದೇಶಕ ಶಿವಾನಂದ್ ಭೂಷಿ ಅವರು ನನ್ನಂತಹ ಹಲವು ಪ್ರತಿಭೆಗಳಿಗೆ ಈ ಚಿತ್ರದಲ್ಲಿ ಪಾತ್ರ ನೀಡಿದ್ದಾರೆ. ಅವರೇ ಬರೆದಿರುವಂತಹ ಕಾದಂಬರಿಯನ್ನು ಈ ಚಿತ್ರದ ಮೂಲಕ ಜನರಿಗೆ ಹೇಳಲಿದ್ದಾರೆ.
ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಕೃಷ್ಣ. ಬಹಳ ಸೋಮಾರಿ ಯುವಕನ ಪಾತ್ರ. ನಮ್ಮ ಸುತ್ತ-ಮುತ್ತಲಿನ ಜನರಾಗಲೀ ಅಥವಾ ನಾವೇ ಆಗಲೀ ನಮ್ಮ ದೈನಂದಿನ ಜೀವನದಲ್ಲಿ ಒಳ್ಳೆಯದಾಗಿರಬಹುದು, ಕೆಟ್ಟದಾಗಿರಬಹುದು ಒಂದೊಂದು ದಿನ ಒಂದೊಂದು ವೇಷಗಳನ್ನ ಹಾಕಿಕೊಂಡು ಅವರವರ ಸ್ವಾರ್ಥಕ್ಕೆ ಬದುಕುತ್ತಾ ಹೋಗ್ತೀವಿ. ಇನ್ನೊಬ್ಬರನ್ನ ಮೆಚ್ಚಿಸುವುದಕ್ಕೋಸ್ಕರ ನಮ್ಮತನವನ್ನ ಕಳೆದುಕೊಂಡಿರ್ತೀವಿ. ಅವರು ನಮ್ಮನ್ನ ಇಷ್ಟಪಡ್ತಾರೋ ಇಲ್ವೋ, ಅವರು ನಮ್ಮ ಬಗ್ಗೆ ಏನು ಅನ್ಕೋತಾರೋ ಏನೋ ಅಂತ ಇನ್ನೊಬ್ಬರ ಬಗ್ಗೆ ಹೆಚ್ಚು ಚಿಂತೆ ಮಾಡ್ತೀವಿ. ಇದನ್ನೆಲ್ಲ ಈ ಚಿತ್ರದಲ್ಲಿ ಬಹಳ ಅಚ್ಚುಕಟ್ಟಾಗಿ ತೋರಿಸಿದ್ದಾರೆ ನಿರ್ದೇಶಕರು. ಕನ್ನಡ ಜನತೆ ಈ ಚಿತ್ರವನ್ನ ನೋಡಿ ನಮ್ಮನ್ನ ಆಶೀರ್ವಾದ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.
No Comment! Be the first one.