ರಕ್ಷಿತ್ ಶೆಟ್ಟಿ ನಟನೆಯಲ್ಲಿ ಬರುತ್ತಿರುವ ಅವನೇ ಶ್ರೀಮನ್ನಾರಾಯಣ ಸಿನಿಮಾದ ಕುರಿತಾಗಿ ಇಂಡಿಯಾದಲ್ಲಿ ಹಂತ ಹಂತವಾಗಿ ಕುತೂಹಲ ಮತ್ತು ನಿರೀಕ್ಷೆಗಳು ಹೆಚ್ಚುತ್ತಲೇ ಇವೆ. ತಮಿಳಿನ ಖ್ಯಾತ ಪತ್ರಕರ್ತರೊಬ್ಬರು ಹೇಳುವಂತೆ “ಕೆ.ಜಿ.ಎಫ್ ಸಿನಿಮಾ ಬರೋದಕ್ಕೆ ಮುಂಚೆ ಇದೇ ರೀತಿಯ ವಾತಾವರಣ ನಿರ್ಮಾಣವಾಗಿತ್ತು. ಆ ಚಿತ್ರದ ಟ್ರೇಲರ್ ನೋಡಿಯೇ ಒಂದು ಬಗೆಯ ಕುತೂಹಲ ಸೃಷ್ಟಿಯಾಗಿತ್ತು. ನಂತರ ಸಿನಿಮಾ ಕೂಡಾ ಅದೇ ಮಟ್ಟಿಗೆ ಸೌಂಡ್ ಮಾಡಿತ್ತು. ಇಲ್ಲಿನ ಸ್ಟಾರ್ ನಟರ ಸಿನಿಮಾ ಬಿಟ್ಟರೆ, ನಮ್ಮವರು ಹೆಚ್ಚು ಕಾದಿರುವುದು ಈಗ ಅವನೇ ಶ್ರೀಮನ್ನಾರಾಯಣ ಸಿನಿಮಾಗಾಗಿ. ಈ ಸಿನಿಮಾದ ಟ್ರೇಲರು ಎಲ್ಲರನ್ನೂ ಸೆಳೆದಿದೆ. ಈಗ ಬಿಡುಗಡೆಯಾಗಿರುವ ಹ್ಯಾಂಡ್ಸ್ ಅಪ್ ಹಾಡು ಕೂಡಾ ತೀರಾ ಭಿನ್ನವಾಗಿಯೂ, ಕ್ರಿಯಾಶೀಲವಾಗಿಯೂ ಮೂಡಿಬಂದಿದೆ ಅನ್ನೋದು.
ಕೇಳಿ ಕಾದಿರುವ ಬಾಂಧವರೆ, ಭುವಿಯಲ್ಲಿ ಅವನ ಅರಿತವರೆ, ಯಾರಿಲ್ಲ ಬಿಡಿ, ಮುನ್ನುಡಿ ಇದ್ದರದೊಂದು ದಂತ ಕಥೆ… ಹ್ಯಾಂಡ್ಸ್ ಅಪ್ ಅದು ಅನವರತ.. ಹ್ಯಾಂಡ್ಸ್ ಅಪ್ ನಾ ಅಜ್ಞಾತ… – ಇಂಥ ನವ್ಯ ಸಾಲುಗಳನ್ನು ಹೊಂದಿರುವ ಅವನೇ ಶ್ರೀಮನ್ನಾರಾಯಣನ ಹಾಡು ಅತ್ಯುತ್ತಮ ಗುಣಮಟ್ಟ ಹೊಂದಿದೆ. ಈ ಚಿತ್ರದಲ್ಲಿ ಇರಬಹುದಾದ ಕಂಟೆಂಟಿನ ಸಣ್ಣ ಸುಳಿವನ್ನೂ ಬಿಟ್ಟುಕೊಡುವಂತಿದೆ.
ಅಜನೀಶ್ ಲೋಕನಾಥ್ ಸಂಗೀತದ ಈ ಹಾಡಿಗೆ ನಾಗಾರ್ಜುನ ಶರ್ಮ ಸಾಹಿತ್ಯ ಬರೆದಿದ್ದಾರೆ. ವಿಜಯಪ್ರಕಾಶ್, ಶಶಾಂಕ್, ಪಂಚಮ್ ಜೀವ ಮತ್ತು ಚೇತನ್ ನಾಯಕ್ ದನಿ ನೀಡಿದ್ದಾರೆ. ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಸಾಹಸಮಯವಾಗಿದೆ. ಈ ಹಾಡಿನಲ್ಲಿ ಬಳಸಿರುವ ವಯೋಲಾ ವಾದ್ಯದಿಂದ ಹೊಮ್ಮಿರುವ ಸ್ವರದಲ್ಲಿಯೇ ಒಂಥರಾ ಸೆಳೆತವಿದೆ. ಅದರ ಜೊತೆಗೆ ವಿಜಯ ಪ್ರಕಾಶ್ ದನಿ ಕೂಡಾ ಸೇರಿಕೊಂಡು ಹಾಡಿನಲ್ಲಿ ಹೊಸ ಫ್ಲೇವರು ಸೃಷ್ಟಿಯಾಗಿದೆ!
ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಿಸಿರುವ ಅವನೇ ಶ್ರೀಮನ್ನಾರಾಯಣ ಸಿನಿಮಾಗೆ ಹೆಚ್.ಕೆ. ಪ್ರಕಾಶ್ ಕೂಡಾ ಕೈ ಜೋಡಿಸಿದ್ದಾರೆ. ತೆರೆಗೆ ಬರಲು ರೆಡಿಯಾಗುತ್ತಿರುವ ಶ್ರೀಮನ್ನಾರಾಯಣನ ಬಗೆಗೆ ದಿನೇ ದಿನೇ ಕುತೂಹಲ ಇಮ್ಮಡಿಯಾಗುತ್ತಿದೆ…
No Comment! Be the first one.