ಯಾರೂ ನಂಬಲು ಸಾಧ್ಯವಿಲ್ಲದಂತಾ ವಿಚಾರವೊಂದು ಬರಸಿಡಿಲಿನಂತೆ ಬಂದೆರಗಿದೆ. ಇನ್ನೂ ಬದುಕಿ ಬಾಳಬೇಕಿದ್ದ ಜೀವವೊಂದು ಆರಂಭದಲ್ಲೇ ಉಸಿರು ಚೆಲ್ಲಿದೆ.
ಚಿರಂಜೀವಿ ಸರ್ಜಾ ಉಸಿರು ನಿಲ್ಲಿಸಿದ್ದಾರೆ. ಇಂದು ಮಧ್ಯಾಹ್ನ ಚಿರು ಎದೆನೋವು, ಉಸಿರಾಡಲು ಸಮಸ್ಯೆಯಾಗುತ್ತಿದೆ ಎಂದರಂತೆ. ತಕ್ಷಣ ಅಪೋಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಚಿರು ಚಿರನಿದ್ರೆಗೆ ಜಾರಿದ್ದಾರೆ. ಕೊರೋನಾ ವಕ್ಕರಿಸಿಕೊಂಡು ಲಾಕ್ ಡೌನ್ ಆದ ಸಂಯದಲ್ಲಿ ಬಿಡುಗಡೆಯಾದ ಕೊನೆಯ ಸಿನಿಮಾ ಶಿವಾರ್ಜುನ. ಅದೇನು ಹಣೇಬರಹವೋ ಗೊತ್ತಿಲ್ಲ ಈ ಸಿನಿಮಾದ ಬಗ್ಗೆ ವಿಪರೀತ ನಿರೀಕ್ಷೆಗಳಿದ್ದವು. ಸಿನಿಮಾ ತೆರೆಗೂ ಬಂದಿತು. ಅದಾಗಿ ಮೂರೇ ದಿನಕ್ಕೆ ಸಿನಿಮಾ ಪ್ರದರ್ಶನ ಸ್ತಗಿತಗೊಂಡಿತು.
ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡು ಬ್ಯುಸಿಯಾಗಿದ್ದ ಚಿರು ಒಂದರ ಹಿಂದೆ ಒಂದು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ರಣಮ್, ಜುಗಾರಿ ಕ್ರಾಸ್ ಮತ್ತು ಕ್ಷತ್ರಿಯ ಸದ್ಯ ಚಿರು ನಟಿಸುತ್ತಿರುವ ಚಿತ್ರಗಳು. ಬ್ಯಾಕ್ ಟು ಬ್ಯಾಕ್ ಕಾಲ್ ಶೀಟ್ ಗಳನ್ನು ಕೊಟ್ಟು ಒಂದು ದಿನ ಕೂಡಾ ಪುರುಸೊತ್ತಿಲ್ಲದೆ ಚಿರು ಸಿನಿಮಾ ಚಿತ್ರೀಕರಣಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಈಗಾಗಲೇ ಅನೌನ್ಸ್ ಆಗಿ ಚಿತ್ರೀಕರಣಗೊಳ್ಳುತ್ತಿರುವ ಸಿನಿಮಾಗಳೇ ಆರಕ್ಕಿಂತಾ ಹೆಚ್ಚಿವೆ. ಚಿರು ಇಷ್ಟೊಂದು ಸಿನಿಮಾಗಳನ್ನು ಒಟ್ಟೊಟ್ಟಿಗೇ ಒಪ್ಪಿಕೊಂಡು ಬ್ಯುಸಿಯಾಗಿರೋದರ ನಡುವೆಯೇ ತಮ್ಮ ಪತ್ನಿ ಮೇಘನಾರಾಜ್ ಜೊತೆ ಹತ್ತು ದಿನಗಳ ಕಾಲ ಕಳೆದ ವರ್ಷ ಸ್ವಿಡ್ಜರ್ ಲೆಂಡ್ ಟ್ರಿಪ್ಪಿಗೆ ಹೋಗಲು ಕೂಡಾ ಹೋಗಿಬಂದರು. ವರ್ಷಕ್ಕೆ ಒಂದೋ ಎರಡೋ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದ ಚಿರು ಕೈಲೀಗ ಮುಕ್ಕಾಲು ಡಜನ್ ಸಿನಿಮಾಗಳಿವೆ.
ಲಾಕ್ ಡೌನ್ ಸಂದರ್ಭದಲ್ಲಿ ಚಿರು ಆರಾಮಾಗೇ ಇದ್ದರು. ಪತ್ನಿ ಮೇಘನಾ ರಾಜ್ ಈಗ ಗರ್ಭಿಣಿ ಅನ್ನೋ ಮಾತಿದೆ. ಹೀಗಾಗಿ ರಜೆಯ ದಿನಗಳನ್ನು ಮೇಘನಾ ಜೊತೆ ಕಳೆಯುತ್ತಿದ್ದರು. ಈಗ ಇದ್ದಕ್ಕಿದ್ದಂತೆ ಚಿರು ಜೀವ ತೊರೆದಿದ್ದಾರೆ…
No Comment! Be the first one.