ಚಿಕ್ಕಂದಿನಲ್ಲಿಯೇ ಕಾರ್ನಾಡರಿಗೆ ಸಾಹಿತ್ಯವೆಂದರೆ ಹೆಚ್ಚಿನ ಒಲವು. ಈ ಸಾಹಿತ್ಯ ಪ್ರೀತಿ ಅವರ ಬದುಕಿಗೆ ಅಂಟಿಕೊಂಡೇ ಬಂದ ನಂಟು. ಕಾರ್ನಾಡರು ಪರಿಚಯಿಸಿಕೊಂಡ ಸಾಹಿತ್ಯದ ವಿಸ್ತಾರ, ಹರವುಗಳೆಷ್ಟು ಹೆಚ್ಚೋ ಅವರ ಅಧ್ಯಯನದ ಗಂಭೀರತೆ ಆಳಗಳೂ ಅದಕ್ಕೆ ತಕ್ಕುದಾದವೇ.
ಭಾರತೀಯ ಹಾಗೂ ಪಾಶ್ಚಾತ್ಯ ಸಾಹಿತ್ಯದ, ಅತಿ ಪ್ರಾಚೀನ ಹಾಗೂ ಅತ್ಯಾಧುನಿಕ ಸಾಹಿತ್ಯದಲ್ಲಿ ಶ್ರೇಷ್ಠವಾದದ್ದೆಲ್ಲಾ ಕಾರ್ನಾಡರ ಮುಂದಿನ ನಾಟಕ ರಚನೆಗೆ ಸುಭದ್ರ ಬುನಾದಿ ಹಾಕಿತು. ಕಾರ್ನಾಡರು ತಮ್ಮ ಔಪಚಾರಿಕ ಶಿಕ್ಷಣದ ಪಠ್ಯದಲ್ಲಿ ಸಾಹಿತ್ಯಾಭ್ಯಾಸ ಮಾಡದಿದ್ದರೂ, ತಮ್ಮ ಸ್ವಾಭಾವಿಕ ಸಂವೇದನಾಶೀಲತೆ ಹಾಗೂ ಜಾಗತಿಕ ಸಾಹಿತ್ಯದ ಅಧ್ಯಯನದಿಂದಾಗಿ ಯಾವುದೇ ಸಾಹಿತ್ಯದ ಅತಿ ಮುಖ್ಯ ಕಾಳಜಿಗಳನ್ನು, ಲಕ್ಷಣಗಳನ್ನು ಗುರುತಿಸುವ ಸಾಮರ್ಥ್ಯ ಅವರಲ್ಲಿದೆ.
ಕಾರ್ನಾಡರ ಹಿಂದೆ ಕೈಲಾಸಂ, ಶ್ರೀರಂಗ ಹಾಗೂ ಸಂಸರಂತಹ ಪ್ರತಿಭಾವಂತ ನಾಟಕಕಾರರಿದ್ದರೂ ಅವರಿಂದ ಕಾರ್ನಾಡರು ಪಡೆದದ್ದು ಬಹಳಷ್ಟಿಲ್ಲ. ಇದು ನಿಜವಾಗಿಯೂ ಆಶ್ಚರ್ಯಕರ ಸಂಗತಿ. ಯಾಕೆಂದರೆ ಕಾರ್ನಾಡರಂತೆ ಕೈಲಾಸಂ ಹಾಗೂ ಶ್ರೀರಂಗರು ಹಲವಾರು ವರ್ಷ ಇಂಗ್ಲೆಂಡಿನಲ್ಲಿದ್ದು ಕಥೆಗಳನ್ನು ಆಧುನಿಕ ಸಂವೇಧನೆಗೆ ಅಳವಡಿಸಿಕೊಂಡವರು. ಶ್ರೇಷ್ಠ ಸಂಸ್ಕೃತ ವಿದ್ವಾಂಸರಾಗಿದ್ದ ಶ್ರೀರಂಗರು ಭರತನ ನಾಟ್ಯಶಾಸ್ತ್ರವನ್ನು, ಸಂಸ್ಕೃತ ನಾಟಕಗಳನ್ನು ಆಳವಾಗಿ ಅಭ್ಯಸಿಸಿದವರು. ರಂಗಭೂಮಿಯ ಅಭಿವೃದ್ಧಿಗಾಗಿ ದುಡಿದವರು. ಆದರೆ ಕಾರ್ನಾಡರು ಈ ಪರಂಪರೆಯೊಡನೆ ಗಾಢವಾದ ಸಂಬಂಧ ಬಯಸಲಿಲ್ಲ.
ಅದರೊಡನೆ ಪ್ರತ್ಯಕ್ಷ ಸಂಘರ್ಷಕ್ಕೂ ಇಳಿಯಲಿಲ್ಲ. ‘ಶ್ರೀರಂಗರ ಹರಿಜನ್ವಾರದ ಗಿರೀಶ್ ಕಾರ್ನಾಡರು ಮತ್ತು ಅವರ ಸಾಹಿತ್ಯ ಗಿರೀಶ್ ಕಾರ್ನಾಡರು ಮತ್ತು ಅವರ ಸಾಹಿತ್ಯ ಅಧ್ಯಯನ’ ಎಂಬ ಲೇಖನವನ್ನು ಬಿಟ್ಟರೆ ಅವರು ಶ್ರೀರಂಗರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದೇ ಅಪರೂಪ. ಐತಿಹಾಸಿಕ ನಾಟಕವನ್ನೇ ತಮ್ಮ ಮಾಧ್ಯಮವನ್ನಾಗಿರಿಸಿಕೊಂಡಿದ್ದ ‘ಸಂಸ’ರೂ ಅವರಿಗೆ ಪ್ರಸ್ತುತರೆನಿಸಲಿಲ್ಲ. ಅವರು ಮೆಚ್ಚಿಕೊಂಡ ಒಂದೇ ಒಂದು ಐತಿಹಾಸಿಕ ನಾಟಕವೆಂದರೆ ಮಾಸ್ತಿಯವರ ‘ಕಾಕನಕೋಟೆ’. ಈ ನಾಟಕದ ಬಗ್ಗೆ ಅವರು ಒಳ್ಳೆಯ ಒಳನೋಟಗಳನ್ನು ಕೊಟ್ಟಿದ್ದಾರೆ. ಆದರೆ ಅವರ ಈ ಎರಡೂ ಲೇಖನಗಳು ಮಹತ್ವದ್ದಾಗಿದೆ. ನಾಟಕದ ಸಂದರ್ಭದಲ್ಲಿ ಸಮಕಾಲೀನತೆಯನ್ನು ಅವರು ಯಾವ ರೀತಿ ಗ್ರಹಿಸಿದ್ದರೂ ಹಾಗೂ ಐತಿಹಾಸಿಕ ನಾಟಕಗಳ ಬಗ್ಗೆ ಅವರ ಅಪೇಕ್ಷೆಗಳೇನಿದ್ದವು ಎನ್ನುವುದು ಈ ಲೇಖನಗಳಿಂದ ನಮಗೆ ಗೊತ್ತಾಗುತ್ತದೆ.
ಕಾರ್ನಾಡರು ಹವ್ಯಾಸಿ ರಂಗಭೂಮಿಯ ಒಳ್ಳೆಯ ನಟರೆಂದೂ, ನಾಟಕ ಲೇಖಕರೆಂದೂ ಹೆಸರುಗಳಿಸಿದ್ದಾರೆ. ಇವರು 1960ರಲ್ಲಿ ಪ್ರಕಟಿಸಿದ ‘ಯಯಾತಿ’ ನಾಟಕ ಅನೇಕ ಭಾರಿ ರಂಗಭೂಮಿಯ ಮೇಲೆ ಪ್ರದರ್ಶಿತವಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಪುರಾಣದ ‘ಯಯಾತಿ’ ಯನ್ನು ಆಧುನಿಕ ದೃಷ್ಟಿಕೋನದಿಂದ ಪರೀಕ್ಷಿಸಿ ಅವನ ಬಾಳಿನ ದುರಂತತೆಯನ್ನು ಎತ್ತಿ ತೋರುವ ಯಯಾತಿಯ ತಂತ್ರ ಅತ್ಯಂತ ಯಶಸ್ವಿಯಾಗಿದೆ.
ಭಾರತೀಯ ಇತಿಹಾಸದ ವಾದಗ್ರಸ್ತ ಸುಲ್ತಾನನೊಬ್ಬನ ಬಾಳಿನ ಸುತ್ತ ಹೆಣೆದಿರುವ ‘ತುಘಲಕ್'(1964) ನಾಟಕವೂ ನವೀನ ತಂತ್ರದಿಂದ ಕೂಡಿ, ಅವನ ಬಾಳಿನ ಕಥೆಗೆ ಹೊಸ ಆಯಾಮವೊಂದನ್ನು ನೀಡುತ್ತದೆ. ಅದು ಕನ್ನಡದಲ್ಲಿ ಮಾತ್ರವಲ್ಲದೆ ಇಂಗ್ಲೀಷ್, ಹಿಂದಿ ಮತ್ತು ಮರಾಠಿಯಲ್ಲೂ ರಂಗಪ್ರಯೋಗಗೊಂಡು ಆ ಭಾಷೆಗಳ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಮಾ ನಿಷಾದ (1964), ಹಯವದನ (1971), ಅಂಜು ಮಲ್ಲಿಗೆ (1977), ಹಿಟ್ಟಿನ ಹುಂಜ (1980), ನಾಗಮಂಡಲ (1989), ತಲೆದಂಡ(1991), ಅಗ್ನಿ ಮತ್ತು ಮಳೆ (1994), ಟಿಪ್ಪು ಸುಲ್ತಾನ ಕಂಡ ಕನಸು (2000), ಬಿಂಬ ಮತ್ತು ಇತರ ನಾಟಕಗಳು (2004), ಒಡಕಲು ಬಿಂಬ (2006), ಮದುವೆಯ ಆಲ್ಬಂ (2006) ಇತ್ಯಾದಿ ನಾಟಕ ಕೃತಿಗಳನ್ನು ಬರೆದಿದ್ದಾರೆ. ಕಾರ್ನಾಡರು ನಾಟಕಗಳಿಗೆ ಆಯ್ದುಕೊಳ್ಳುವ ವಸ್ತು ಪುರಾಣ, ಇತಿಹಾಸ, ಜಾನಪದಗಳಾದರೂ ಅವರ ಕೃತಿಗಳಲ್ಲಿ ಸಮಕಾಲೀನ ಸಮಸ್ಯೆ ಮತ್ತು ಸಂವೇದನೆಗಳನ್ನು ಅರ್ಥೈಸುವ ಪ್ರಾಮಾಣಿಕ ಪ್ರಯತ್ನ ಗಮನಾರ್ಹ. ಇಷ್ಟಲ್ಲದೆ ಇತ್ತೀಚೆಗೆ ಪ್ರಕಟಗೊಂಡ ಅವರ ಆತ್ಮಚರಿತ್ರೆ ‘ಆಡಾಡತ ಆಯುಷ್ಯ’ ಇಡೀ ಕನ್ನಡ ಸಾಹಿತ್ಯ ಚರಿತ್ರೆಯ ಸಂದರ್ಭಗಳಲ್ಲಿ ವಿಶಿಷ್ಟವೆನಿಸಿದೆ. ಅಷ್ಟಲ್ಲದೆ ಸಾಂಸ್ಕøತಿಕ ಹಿನ್ನೆಲೆಯನ್ನು ಒಳಗೊಂಡದ್ದು ಎಂಬುದು ಗಮನಾರ್ಹವಾದುದು.
ಸಿನಿಬಜ್ ಮುಖ್ಯಸ್ಥರ ಅನುಮತಿ ಇಲ್ಲದೇ ಯಾವುದೇ ಜಾಲಾತಾಣಗಳು ಗಿರೀಶ್ ಕಾರ್ನಾಡರ ಲೇಖನಗಳನ್ನು ಬಳಸಿಕೊಳ್ಳುವಂತಿಲ್ಲ. ಹಾಗೇನಾದರೂ ಕಂಡು ಬಂದಲ್ಲಿ ಸೂಕ್ತ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.
– ಸಂ
No Comment! Be the first one.