ಈ ದುರಂತದಲ್ಲಿ ನಿರ್ದೇಶಕ ಶಂಕರ್ ಕಾಲಿಗೂ ಪೆಟ್ಟಾಗಿದೆ ಎಂಬ ಸುದ್ದಿಗಳು ಹರಡಿವೆಯಾದರೂ ಅದನ್ನು ಸ್ವತಃ ಚಿತ್ರತಂಡ ಅಲ್ಲಗಳೆದಿದೆ. ಕಾಜಲ್ ಅಗರವಾಲ್ ಮತ್ತು ಕಮಲ್ ಹಾಸನ್ ಕೂಡಾ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಮಲಹಾಸನ್ ನಟನೆಯ, ಶಂಕರ್ ನಿರ್ದೇಶಿಸುತ್ತಿರುವ ಇಂಡಿಯನ್ -೨ ಚಿತ್ರದ ಸೆಟ್’ನಲ್ಲಿ ಮೂರು ಮಂದಿ ಬಡಪಾಯಿಗಳು ಪ್ರಾಣ ಬಿಟ್ಟಿದ್ದಾರೆ. ತಮಿಳಿನ ಹೈ ಬಜೆಟ್ ಸಿನಿಮಾಗಳನ್ನು ನಿರ್ಮಿಸುವ ಲೈಕಾ ಪ್ರೊಕ್ಷನ್ ನಿರ್ಮಾಣದ ಇಂಡಿಯನ್ -೨ ಚಿತ್ರದ ಚಿತ್ರೀಕರಣಕ್ಕಾಗಿ ನಜರತ್ ಪೇಟೆಯ ಪೂನಮಲ್ಲಿ ಬಳಿಯ ಇಪಿವಿ ಫಿಲಂ ಸಿಟಿಯಲ್ಲಿ ಬೃಹತ್ ಸೆಟ್’ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಕ್ರೇನ್’ವೊಂದಕ್ಕೆ ಹೆವಿ ಡ್ಯೂಟಿ ಲೈಟುಗಳನ್ನು ಫಿಕ್ಸ್ ಮಾಡಿದ್ದರು. ಏಕಾ ಏಕಿ ಆ ಲೈಟು ಕಳಚಿಕೊಂಡು, ಕ್ರೇನಿನ ಸಮೇತ ಬಿದ್ದ ಪರಿಣಾಮವಾಗಿ ಮೂವರು ಸ್ಥಳದಲ್ಲೀ ಜೀವ ಕಳೆದುಕೊಂಡಿದ್ದಾರೆ. ಒಂಭತ್ತು ಮಂದಿಗೆ ತೀವ್ರ ಪೆಟ್ಟಾಗಿದೆ.
ಸಾಮಾನ್ಯಕ್ಕೆ ತಮಿಳು ಚಿತ್ರರಂಗದವರು ಚಿತ್ರೀಕರಣದ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರದಿಂದಿರುತ್ತಾರೆ. ಸಾಕಷ್ಟು ಮುಂಜಾಗ್ರತೆಯನ್ನೂ ವಹಿಸುತ್ತಾರೆ. ಇಷ್ಟೆಲ್ಲದರ ನಡುವೆಯೂ ನಡೆಯಬಾರದ ಅನಾಹುತವೊಂದು ಘಟಿಸಿದೆ. ಅಸಿಸ್ಟೆಂಟ್ ಡೈರೆಕ್ಟರ್ ಕೃಷ್ಣ, ಸಹಾಯಕ ಕಲಾ ನಿರ್ದೇಶಕ ಚಂದ್ರನ್ ಮತ್ತು ಪ್ರೊಡಕ್ಷನ್ ಸಹಾಯಕ ಮಧು ಎಂಬ ಮೂವರು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಕಮಲ್ ಉಳಿದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವಲ್ಲಿ ನೆರವಾಗಿದ್ದಾರೆ. ಈ ಘಟನೆಯಿಂದ ತಮಿಳು ಚಿತ್ರರಂಗದಲ್ಲಿ ಇಂದು ಸೂತಕದ ಛಾಯೆ ಆವರಿಸಿದೆ.
ಈ ದುರಂತದಲ್ಲಿ ನಿರ್ದೇಶಕ ಶಂಕರ್ ಕಾಲಿಗೂ ಪೆಟ್ಟಾಗಿದೆ ಎಂಬ ಸುದ್ದಿಗಳು ಹರಡಿವೆಯಾದರೂ ಅದನ್ನು ಸ್ವತಃ ಚಿತ್ರತಂಡ ಅಲ್ಲಗಳೆದಿದೆ. ಕಾಜಲ್ ಅಗರವಾಲ್ ಮತ್ತು ಕಮಲ್ ಹಾಸನ್ ಕೂಡಾ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಾಣ ಕಳೆದುಕೊಂಡ ಮೂವರೂ ಮಂದಿ ತಳ ಸಮುದಾಯದಿಂದ ಬಂದಿದ್ದವರು. ಆರ್ಥಿಕವಾಗಿ ತೀರಾ ಹಿಂದುಳಿದವರು. ಅರವತ್ತು ವರ್ಷದ ಚಂದ್ರನ್ ಇಡೀ ಜೀವನವನ್ನು ಸಿನಿಮಾಗಾಗಿ ಮುಡಿಪಾಗಿಟ್ಟಿದ್ದರು. ಸಾಕಷ್ಟು ಸಿನಿಮಾಗಳಿಗೆ ಸಹಾಯಕ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಕೃಷ್ಣ ಮತ್ತು ಮಧು ತಮ್ಮ ಕುಟುಂಬಗಳಿಗೆ ಆಧಾರದಂತಿದ್ದರು. ಸಿನಿಮಾಗಾಗಿ ಜೀವ ಬಿಟ್ಟ ಈ ಮೂವರೂ ಕುಟುಂಬಗಳಿಗೆ ಲೈಕಾ ಪ್ರೊಡಕ್ಷನ್ ಸಹಾಯ ಮಾಡಲಿದೆಯಾ? ಶಂಕರ್, ಕಮಲ್ ಹಾಸನ್ ನೆರವು ನೀಡುತ್ತಾರಾ? ಯಾರು ಏನೇ ಮಾಡಿದರೂ ಹೋದ ಜೀವಗಳು ಬರುತ್ತವಾ? ಇನ್ನೊಂದಿಷ್ಟು ಮುಂಜಾಗ್ರತೆ ವಹಿಸಿದ್ದರೂ ಈ ಅಪಘಾತವನ್ನು ತಪ್ಪಿಸಬಹುದಿತ್ತೇನೋ? ಭಾರತೀಯ ಚಿತ್ರರಂಗದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸಿ ಹೆಚ್ಚಿನ ಪಾಲು ಕಾರ್ಮಿಕರೇ ಜೀವ ಬಿಡುವಂತಾಗಿರುವುದು ಅಸಲೀ ದುರಂತ!
No Comment! Be the first one.