ತಿಂಗಳ ಹಿಂದಷ್ಟೇ ‘ಕಪಟನಾಟಕ ಪಾತ್ರಧಾರಿ ಚಿತ್ರದ “ಯಾಕೆ ಅಂತಾ ಗೊತ್ತಿಲ್ಲ ಕಣ್ರೀ… ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ.. ಹಾಡನ್ನು ನಟ ರಿಷಿ ರಿಲೀಸ್ ಮಾಡಿದ್ದರು. ಆ ಹಾಡು ಈಗಾಗಲೇ ಹಿಟ್ ಆಗಿದೆ. ಕೇಳಿದವರೆಲ್ಲಾ ಮತ್ತೆ ಮತ್ತೆ ಕೇಳುತ್ತಿದ್ದಾರೆ. ನಿರ್ದೇಶಕ ಕ್ರಿಶ್ ಅವರ ಕನಸಿನ ಕೂಸಾದ ‘ಕಪಟನಾಟಕ ಪಾತ್ರಧಾರಿಯ ಹಾಡಿಗೆ ಆದಿಲ್ ನದಾಫ಼್ ಸಂಗೀತ ಸಂಯೋಜಿಸಿದ್ದಾರೆ. ತೀರಾ ಹೊಸದೆನ್ನುವ ಸಾಲುಗಳು ಮತ್ತು ಅಷ್ಟೇ ಫ್ರೆಷ್ ಆಗಿರುವ ಟ್ಯೂನು ಇರುವ ಕಾರಣಕ್ಕೆ “ಯಾಕೆ ಅಂತಾ ಗೊತ್ತಿಲ್ಲ ಕಣ್ರೀ… ಹಾಡು ಎಲ್ಲರನ್ನೂ ಸೆಳೆದಿತ್ತು. ಈಗ ಸದ್ಯ ಯು ಟ್ಯೂಬ್ನಲ್ಲಿ ಇದರ ವಿಡಿಯೋ ಕೂಡಾ ರಿಲೀಸ್ ಮಾಡಿದ್ದಾರೆ. ತೀರಾ ಸಹಜವಾಗಿ ಚಿತ್ರೀಕರಣಗೊಂಡಿರುವ ಈ ಹಾಡು ಆನ್ಲೈನಿನಲ್ಲಿ ಟ್ರೆಂಡ್ ಸೃಷ್ಟಿಸುವ ಎಲ್ಲ ಸಾಧ್ಯತೆಯನ್ನೂ ತೋರಿದೆ.
ಒಬ್ಬ ಆಟೋ ಚಾಲಕ, ಅವನ ಬದುಕಿನ ರೀತಿ ಜೊತೆಗೊಬ್ಬಳು ಹುಡುಗಿ, ಅವರ ಸುತ್ತ ನಡೆಯುವ ಘಟನೆಗಳನ್ನು ವಿಶಿಷ್ಠವಾದ ಚಿತ್ತಕತೆಯ ಮೂಲಕ ಹೇಳಹೊರಟಿರುವ ಸಿನಿಮಾ ‘ಕಪಟನಾಟಕ ಪಾತ್ರಧಾರಿ. ಈ ಚಿತ್ರದ ನಿರ್ದೇಶಕ ಕ್ರಿಶ್ ಅವರು ಬರೆದಿಟ್ಟುಕೊಂಡಿದ್ದ ಕಥೆಗೆ ಯಾರನ್ನು ಹೀರೋ ಮಾಡುವುದು ಅಂತಾ ಯೋಚಿಸುತ್ತಿದ್ದ ಸಂದರ್ಭದಲ್ಲೇ ಹುಲಿರಾಯ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿತ್ತಂತೆ. ಅದರಲ್ಲಿ ಬಾಲು ಅವರ ದನಿ ಕೇಳಿಯೇ ಕ್ರಿಶ್ ‘ಇವರೇ ನಮ್ಮ ಚಿತ್ರದ ನಾಯಕನಟ ಅಂತಾ ಫಿಕ್ಸ್ ಆಗಿದ್ದರಂತೆ. ಅಂದುಕೊಂಡಂತೇ ಬಾಲು ಅವರಿಗೆ ಕಥೆ ಒಪ್ಪಿಸಿ ಸಿನಿಮಾ ಆರಂಭಿಸಿ ಈಗ ಬಿಡುಗಡೆಯ ಹಂತಕ್ಕೆ ತಂದು ನಿಲ್ಲಿಸಿದ್ದಾರೆ.
‘ಕಪಟನಾಟಕ ಪಾತ್ರಧಾರಿ ಚಿತ್ರದ ಚಿತ್ರೀಕರಣ ಬಹುತೇಕ ಬೆಂಗಳೂರಿನ ಸುತ್ತಮುತ್ತಲೇ ನೆರವೇರಿದೆ. ಕ್ರಿಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ಆದಿಲ್ ನದಾಫ಼್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದು, ಕ್ರಿಶ್, ವೇಣು ಹಸ್ರಾಳಿ, ಚಾಣಕ್ಯ, ಅನಿರುದ್ಧ್ ಶಾಸ್ತ್ರಿ ಹಾಡುಗಳನ್ನು ರಚಿಸಿದ್ದಾರೆ. ಹರಿಚರಣ್, ಸಿದ್ಧಾರ್ಥ್, ಮಾಧುರಿ ಶೇಷಾದ್ರಿ, ಇಶಾ ಸುಚಿ, ಪವನ್ ಪಾರ್ಥ ಹಾಗೂ ಅನಿರುದ್ದ್ ಶಾಸ್ತ್ರಿ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಕಿರಣ್ ಚಂದ್ರ ಹಾಗೂ ವೇಣು ಹಸ್ರಾಳಿ ಸಂಭಾಷಣೆ ಬರೆದಿದ್ದಾರೆ.
ಪರಮೇಶ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶ್ರೀಕಾಂತ್ ಅವರ ಸಂಕಲನವಿದೆ. ಸಂಗೀತ ಭಟ್, ಬಾಲು ನಾಗೇಂದ್ರ, ಕರಿ ಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್ ತುಮ್ಮಿನಾಡು, ಉಗ್ರಂ ಮಂಜು, ಜಯದೇವ್, ನವೀನ್ ವಾಸುದೇವ್, ಸುನೀಲ್ ಕುಲಕರ್ಣಿ ಸೇರಿದಂತೆ ಸಾಕಷ್ಟು ನಡರು ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ.
No Comment! Be the first one.