ಸುಮಾರು ನಾಲ್ಕೂವರೆ ದಶಕದ ಹಿಂದೆ ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಬಿಡುಗಡೆಯಾಗಿ, ಚಿತ್ರರಸಿಕರೆಲ್ಲರ ಮನರಂಜಿಸುವಲ್ಲಿ ಯಶಸ್ವಿಯಾಗಿತ್ತು.
ಆದರೆ, ತಮ್ಮ ಕಥೆಯನ್ನು ‘ಕೇರೆ ಹಾವು’ ಮಾಡಿದ್ದಾರೆಂದು, ಕಾದಂಬರಿಕಾರ ತರಾಸು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ಅದೇನೇ ಇರಲಿ ಚಿತ್ರವಂತೂ ಅತ್ಯಂತ ಯಶಸ್ವಿಯಾಗಿದ್ದು ಗುಟ್ಟಿಲ್ಲದ ಸಂಗತಿ. ಆ ಚಿತ್ರದಿಂದ ಕನ್ನಡ ಚಿತ್ರ ಜಗತ್ತಿಗೆ ಇಬ್ಬರು ಅಪರೂಪದ ಕಲಾವಿದರು ದೊರೆತದ್ದು ಮಾತ್ರ ಮರೆಯಲಾಗದ ಸಂಗತಿ. ಒಬ್ಬರು ಡಾಕ್ಟರ್ ವಿಷ್ಣುವರ್ಧನ್. ಮತ್ತೊಬ್ಬರು ರೆಬಲ್ ಸ್ಟಾರ್ ಅಂಬರೀಶ್. ಈಗ ಅದೇ ಕಾದಂಬರಿಯ ಕೆಲವೊಂದು ದೃಶ್ಯಗಳನ್ನು ‘ಮಾಂಗಲ್ಯಂ ತಂತುನಾನೇನ’ ಧಾರಾವಾಹಿಯಲ್ಲಿ, ಅಧ್ಯಾಯಗಳಾಗಿ ಬಳಸಿಕೊಳ್ಳಲು ‘ಕಲರ್ಸ್ ಸೂಪರ್’ ವಾಹಿನಿ ಪ್ರಯತ್ನ ನಡೆಸಿದೆ.
ನಾಗರಹಾವು ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರಾಗಿ ಕೆ ಎಸ್ ಅಶ್ವಥ್ ಎಂಬ ಕಲಾವಿದ ಪ್ರಭುದ್ಧವಾದ ಅಭಿನಯವನ್ನು ನೀಡಿ, ಎಲ್ಲರನ್ನೂ ಪುಳಕಿತರನ್ನಾಗಿಸಿದ್ದರು. ಈಗ ಅದೇ ಪಾತ್ರವನ್ನು ಧಾರಾವಾಹಿಯಲ್ಲಿ, ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಒಂದಂತೂ ಸತ್ಯ, ಕಿರುತೆರೆಗೆ ಈ ಅಧ್ಯಾಯಗಳನ್ನು ಬಳಸಿಕೊಂಡು ಅದನ್ನು ಸಮರ್ಥವಾಗಿ ನಿರ್ದೇಶಿಸುವ ಸಾಮರ್ಥ್ಯ ಈಗಿನ ಧಾರಾವಾಹಿಯ ನಿರ್ದೇಶಕರಿಗೆ ಖಂಡಿತ ಇಲ್ಲ. ಆ ಕಾದಂಬರಿಗೆ ‘ನಾಗರಹಾವಿ’ನ ರೂಪ ಕೊಡುವುದಿರಲಿ ಅದಕ್ಕೆ ಕೇರೆಹಾವಿನ ರೂಪ ಕೊಡಲೂ ಸಾಧ್ಯವಿಲ್ಲ. ಬದಲಿಗೆ ಮಣ್ಣುಹುಳವಾಗಿಸಿ ಎಲ್ಲರಿಂದ ಮಂಗಳಾರತಿ ಮಾಡಿಸಿಕೊಳ್ಳುವುದಂತೂ ಸತ್ಯದ ಸಂಗತಿ.
ಇದಕ್ಕಿಂತ ಮೊದಲು ಒಳ್ಳೆಯ ಧಾರಾವಾಹಿಗಳನ್ನು ಕೊಟ್ಟು ‘ಕಲರ್ಸ್’ ವಾಹಿನಿ ‘ಸೂಪರ್ ‘ ಎನಿಸಿಕೊಳ್ಳಲಿ. ನಂತರ ಇಂತಹ ಕಾದಂಬರಿಗಳತ್ತ ಗಮನಹರಿಸಲಿ. ‘ಛೇ ! ಪುಟ್ಟಣ್ಣ ಕಣಗಾಲರ ಕೈಯಲ್ಲಿಯೇ ಆಗದ ಕೆಲಸವನ್ನು ಇವರು ಮಾಡಿಯಾರೇ’ ಎಂದು ತರಾಸು ಅವರ ಆತ್ಮ ಕೊರಗದಿರಲಿ.