-
ಅನುರಾಗ್ ಗೌಡ ಬಿ. ಆರ್.
69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದ್ದು ಆರ್ಹ ಚಿತ್ರಗಳಿಗೆ ಪ್ರಶಸ್ತಿ ದೊರೆಯಲಿಲ್ಲವೆಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಈ ಮೊದಲು ಮಣಿ ರತ್ನಂ ನಿರ್ದೇಶನದ ತಮಿಳು ಚಿತ್ರ ಪೊನ್ನಿಯನ್ ಸೆಲ್ವನ್ ಮತ್ತು ರಾಜಮೌಳಿ ನಿರ್ದೇಶನದ ತೆಲುಗು ಚಿತ್ರವಾದ RRR ಗಳಲ್ಲಿ ಯಾವುದು ಅತ್ಯುತ್ತಮ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತಮಿಳು ಮತ್ತು ತೆಲುಗು ಸಿನಿ ಪ್ರೇಮಿಗಳು ಪರಸ್ಪರ ಸಮರವನ್ನೇ ಸಾರಿದ್ದರು.
ಈಗ ಈ ಫ್ಯಾನ್ಸ್ ವಾರ್ ಎಂಬ ಜ್ವಾಲೆಗೆ ತುಪ್ಪ ಸುರಿಯುವಂತೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣೆಯಾಗಿದ್ದು, ಸಾಕಷ್ಟು ತಮಿಳು ಸಿನಿ ರಸಿಕರು ತಮ್ಮ ಭಾಷೆಯಲ್ಲಿ ತೆರೆಕಂಡ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡುವ ʻಜೈ ಭೀಮ್’, ʻಕರ್ಣನ್’ ಮತ್ತು ಬಾಕ್ಸಿಂಗ್ ಆಟದ ಕುರಿತಾದ ʻಸರ್ಪಟ್ಟಾ ಪರಂಪರೈ’ ಗೆ ಪ್ರಶಸ್ತಿ ದೊರೆಯದಿರುವುದರ ಕುರಿತು ಕಾಲಿವುಡ್ ಗೆ ಅನ್ಯಾಯವೆಸಗಲಾಗಿದೆ ಎಂದು ಬಹಿರಂಗ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಪಾ. ರಂಜಿತ್ ನಿರ್ದೇಶನದ ತಮಿಳಿನ ʻಸರ್ಪಟ್ಟ ಪರಂಪರೈ’ ಚಿತ್ರದಲ್ಲಿ ಜೀವನ ಶ್ರೇಷ್ಠ ನಟನೆ ಮಾಡಿದ ಆರ್ಯ ಅವರಿಗೆ ಅಥವಾ ʻಜೈ ಭೀಮ್’ ಚಿತ್ರದ ನಟನೆಗಾಗಿ ಸೂರ್ಯ ಅವರಿಗೆ ದೊರೆಯಬೇಕಾಗಿತ್ತು. ಮತ್ತು ಅತ್ಯುತ್ತಮ ಚಲನಚಿತ್ರಗಳು ಕೂಡ ʻಜೈ ಭೀಮ್’ ಅಥವಾ ‘ಕರ್ಣನ್’ ಗೆ ದೊರೆಯಬೇಕಾಗಿತ್ತು ಎನ್ನುತ್ತಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ತೆಲುಗು ಸಿನಿ ರಸಿಕರು ಟಾಲಿವುಡ್ ಗೆ ದೊರೆತ ಪ್ರಶಸ್ತಿಗಳನ್ನು ಸಮರ್ಥಿಸಿಕೊಳ್ಳುತ್ತಾ, ತಮಿಳರು ಹೆಸರಿಸುವ ಚಿತ್ರಗಳ ನ್ಯೂನ್ಯತೆಗಳನ್ನು ಪಟ್ಟಿ ಮಾಡುತ್ತಾ ಟಕ್ಕರ್ ಕೊಡುತ್ತಿದ್ದಾರೆ.
ಅಲ್ಲು ಅರ್ಜುನ್ ʻಪುಷ್ಪ’ ಸಿನಿಮಾದಲ್ಲಿ ಅತ್ಯುತ್ತಮವಾಗಿ ನಟಿಸಿರಬಹುದು ಆದರೆ ಸಮಾಜಘಾತುಕತನವನ್ನು ವೈಭವೀಕರಿಸುವ ಪಾತ್ರಕ್ಕೆ ಪ್ರಶಸ್ತಿ ದೊರೆತಿರುವುದು ಪ್ರಶಸ್ತಿಯ ಮೌಲ್ಯವನ್ನು ಕುಗ್ಗಿಸಿದೆ ಎಂದು ತಮಿಳು ಮಾತ್ರವಲ್ಲದೇ ಅನೇಕ ಸಿನಿ ಪ್ರೇಮಿಗಳು ಹೇಳುತ್ತಿದ್ದಾರೆ, ಆದರೆ ಇದನ್ನು ಸಮರ್ಥಿಸುವಂತೆ ಅಲ್ಲು ಅಭಿಮಾನಿಗಳು ಈ ಮೊದಲು ಕೂಡ ಮಲಯಾಳಂನ ʻಕಲಿಯಾಟ್ಟಂ’ ಚಿತ್ರದ ನಟನೆಗಾಗಿ ಸುರೇಶ್ ಗೋಪಿಯವರಿಗೆ ಹಾಗೂ ‘ಅಗ್ನಿಪಥ್’ ಚಿತ್ರದ ನಟನೆಗಾಗಿ ಅಮಿತಾಭ್ ಬಚ್ಚನ್ ಅವರಿಗೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಗಳನ್ನು ನೆಗಟೀವ್ ರೋಲ್ ಗಳಲ್ಲಿ ಅಭಿನಯಿಸಿದರೂ ನೀಡಲಾಗಿತ್ತು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಈ ಎಲ್ಲಾ ಕಾರಣದಿಂದಾಗಿ ಸದಾ ಹೊಗೆಯಾಡುತ್ತಲೇ ಇರುವ ತಮಿಳು ಮತ್ತು ತೆಲುಗು ಚಿತ್ರ ಪ್ರೇಮಿಗಳ ಫ್ಯಾನ್ ವಾರ್ ಮತ್ತೊಂದು ಹಂತಕ್ಕೆ ತಲುಪಿವೆ. ಸಾಮಾಜಿಕ ಜಾಲದಾದ್ಯಂತ ಅಲ್ಲು ಅರ್ಜುನ್ ಗೆ ಅತ್ಯುತ್ತಮ ಪ್ರಶಸ್ತಿ ದೊರೆತಿರುವುದನ್ನು ಲೇವಡಿ ಮಾಡಲಾಗುತ್ತಿದೆ. ತೆಲುಗಿನಲ್ಲಿ ಉತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದ ʻಉಪ್ಪೆನ’ ಚಿತ್ರಕ್ಕಿಂತ ನಮ್ಮಲ್ಲಿ ಅತ್ಯುತ್ತಮವೆನಿಸುವ ಅನೇಕ ಚಿತ್ರಗಳಿದ್ದರೂ, ಪ್ರಶಸ್ತಿಗೆ ಪರಿಗಣಿಸದಿರುವುದರ ಕುರಿತು ಅನೇಕರು ಪ್ರಶಸ್ತಿ ಆಯ್ಕೆ ಮಂಡಳಿಯನ್ನು ಟೀಕಿಸುತ್ತಿದ್ದಾರೆ.
ಸದ್ಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣೆಯು ಕೇವಲ ತಮಿಳು ಮತ್ತು ತೆಲುಗು ಚಲನಚಿತ್ರ ಪ್ರೇಮಿಗಳ ಹೋರಾಟಕ್ಕೆ ಮಾತ್ರ ಅಖಾಡವಾಗಿರದೇ ಚಲನಚಿತ್ರ ವಿಮರ್ಶಕರನ್ನು ಚಿಂತನೆಗೆ ದೂಡಿದೆ. ಸತ್ಯ ಘಟನೆಗಳನ್ನು ಆಧರಿಸಿದ ಚಿತ್ರವಾಗಿದ್ದರೂ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ‘ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ಚಿತ್ರ ಎಂದು ಪರಿಗಣಿಸಲು ಅನುಸರಿಸಿದ ಮಾನದಂಡಗಳೇನು ಎಂಬ ಪ್ರಶ್ನೆಗಳ ಜೊತೆಗೆ ವಿವಾದಗಳನ್ನೂ ಹುಟ್ಟು ಹಾಕಿದೆ.
ಒಟ್ಟಿನಲ್ಲಿ 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣೆಯು ಚಿತ್ರ ಪ್ರೇಮಿಗಳಲ್ಲಿ ಸಂತಸ ತರುವ ಬದಲು ವಿವಾದಗಳ ಗೂಡಾಗಿ ಪರಿಣಮಿಸಿದೆ. ಒಂದೆಡೆ ಪ್ರಶಸ್ತಿ ಲಭಿಸುವುದೆಂಬ ಅನೇಕರ ನಿರೀಕ್ಷೆ ಹುಸಿಯಾಗಿರಿಸಿದ್ದರೆ, ಇನ್ನೊಂದೆಡೆ ಇದರೆಲ್ಲರ ಪರಿಣಾಮವೆನ್ನುವಂತೆ ಭಾಷೆಯಾಧಾರಿತ ಕಲಹಗಳಿಗೆ ಮತ್ತು ಸ್ಟಾರ್ ವಾರ್ ಗಳಿಗೆ ಕಾರಣವಾಗಿದೆ.
ಇನ್ನು ಕೆಲವರು ಸಾವಿರ ಕೋಟಿ ಬಾಚಿದ ಕನ್ನಡ ಚಲನಚಿತ್ರ ‘ಕೆಜಿಎಫ್ ಚಾಪ್ಟರ್ 2’ ಮತ್ತು ಅನಿರೀಕ್ಷಿತ ಯಶಸ್ಸು ಕಂಡ ‘ಕಾಂತಾರ’ ಚಿತ್ರಗಳಿಗೆ ಯಾವುದೇ ವಿಭಾಗಗಳಲ್ಲಿ ಪ್ರಶಸ್ತಿ ದೊರೆಯದಿರುವುದಕ್ಕೆ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ಪ್ರಶಸ್ತಿ ಮಾನದಂಡಗಳ ಪ್ರಕಾರ ಜನವರಿ 01, 2021 ರಿಂದ ಡಿಸೆಂಬರ್ 31, 2021 ರ ಒಳಗೆ ಸೆನ್ಸಾರ್ ಆದ ಚಲನಚಿತ್ರಗಳನ್ನು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ 2021 ರ ಸಾಲಿನಲ್ಲಿ ಸೆನ್ಸಾರ್ ಪ್ರಮಾಣ ಪತ್ರ ಪಡೆದು 2022 ರಲ್ಲಿ ತೆರೆಕಂಡ ‘ಚಾರ್ಲಿ 777’ ಚಿತ್ರವನ್ನು ಪರಿಗಣಿಸಲಾಗಿದೆ. ಆದ್ದರಿಂದ ‘ಕೆಜಿಎಫ್ ಚಾಪ್ಟರ್ 2’ ಮತ್ತು ‘ಕಾಂತಾರ’ ಸೇರಿದಂತೆ 2022 ರ ಸಾಲಿನಲ್ಲಿ ಸೆನ್ಸಾರ್ ಆದ ಉಳಿದ ಚಿತ್ರಗಳು 70 ನೆಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಗಾಗಿ ಸ್ಫರ್ಧಿಸಲಿವೆ.
No Comment! Be the first one.