ಸರ್ವಸ್ವ ಚಿತ್ರದ ಮೂಲಕ ನಾಯಕನಟನಾಗಿದ್ದ ರಘು ಭಟ್ ವೈವಾಹಿಕ ಜೀವನಕ್ಕೆ ಅಡಿಯಿರಿಸಿದ್ದಾರೆ. ಬಹು ಕಾಲದಿಂದ ಪ್ರೀತಿಸಿದ್ದ ಸುಗುಣ ಅವರನ್ನು ಕೈ ಹಿಡಿದಿರುವ ರಘು ಅವರ ಆರತಕ್ಷತೆ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ನೆರವೇರಿದೆ. ಸಿಎಂ ಕುಮಾರಸ್ವಾಮಿ ಸೇರಿದಂತೆ, ಸಿನಿಮಾ, ಧಾರಾವಾಹಿ ಮತ್ತು ಮಾಧ್ಯಮ ತಾರೆಯರ ಸಮ್ಮುಖದಲ್ಲಿ ಆರತಕ್ಷತೆ ಕಾರ್ಯಕ್ರಮವೂ ಅದ್ದೂರಿಯಾಗಿ ನಡೆದಿದೆ.
ನೆಲಮಂಗಲದ ಸುಗುಣ ಬಿ.ಸಿ ಮತ್ತು ರಾಘವೇಂದ್ರ.ಎ ಅವರ ಮೊದಲ ಭೇಟಿ ನಡೆದದ್ದು ಕಾರ್ಯಕ್ರಮವೊಂದರಲ್ಲಿ. ಅಲ್ಲಿಂದ ಪರಿಚಯವಾಗಿ, ಅದು ಪ್ರೀತಿಯಾಗಿ ಇತ್ತೀಚೆಗೆ ಇವರಿಬ್ಬರ ನಿಶ್ಚಿತಾರ್ಥ ಕೂಡಾ ನಡೆದಿತ್ತು. ಕಳೆದ ತಿಂಗಳ ಮೂವತ್ತರಂದು ಮದುವೆಯಾಗಿದ್ದ ರಘು ಭಟ್, ನೆನ್ನೆ ಅರಮನೆ ಮೈದಾನದಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಕೃಷ್ಣಲೀಲೆ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸೋ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದವರು ರಘು ಭಟ್. ಆ ನಂತರದಲ್ಲಿ ಹಲವಾರು ಚಿತ್ರಗಳಲ್ಲಿ ನಾನಾ ಪಾತ್ರಗಳನ್ನು ಮಾಡಿದ್ದ ಅವರು ರಾಮಕೃಷ್ಣ ಗೋವಿಂದ ಚಿತ್ರದ ಮೂಲಕ ನಾಯಕ ನಟನಾಗಿ ಅನಾವರಣಗೊಂಡಿದ್ದರು. ದಾದಾ ಈಸ್ ಬ್ಯಾಕ್, ಅನ್ವೇಷಿ, ಕರ್ವ, ರಘುವೀರ, ಬಕಾಸುರ, ಡ್ರೀಮ್ ಗರ್ಲ್ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಇದೀಗ ನಾಯಕ ನಟನಾಗಿಯೂ ನೆಲೆ ನಿಲ್ಲುತ್ತಿದ್ದಾರೆ.
ಇದರ ಜೊತೆಗೇ ಈಗ ರಘು ಭಟ್ ಪ್ರೀತಿಸಿದ್ದ ಹುಡುಗಿಯ ಜೊತೆಗೇ ದಾಂಪತ್ಯ ಜೀವನಕ್ಕೆ ಅಡಿಯಿರಿಸಿದ್ದಾರೆ. ನಾಯಕ ನಟನಾಗಿ ಹಲವಾರು ಅವಕಾಶಗಳನ್ನೂ ಹೊಂದಿರುವ ರಘು ಭಟ್ ಅವರ ವೈವಾಹಿಕ ಜೀವನಕ್ಕೆ ಶುಭ ಹಾರೈಸೋಣ…
#