ದಯಾಳ್ ಪದ್ಮನಾಭನ್ ನಿರ್ದೇಶನದ ರಂಗನಾಯಕಿ ಸಿನಿಮಾ ಬರಲಿರುವ ನವೆಂಬರ್ ೧ಕ್ಕೆ ಬಿಡುಗಡೆಯಾಗಲಿದೆ. ಇತ್ತೀಚಿಗೆಷ್ಟೆ ಚಿತ್ರತಂಡ ರಂಗನಾಯಕಿ ಚಿತ್ರದ ಆಡಿಯೋ ಬಿಡುಗಡೆಗೊಳಿಸಿದೆ. ಚಿತ್ರತಂಡ ಈಗ ಡಬಲ್ ಒಂದಕ್ಕೆರಡು ಖುಷಿಯಲ್ಲಿದೆ. ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾ ರಿಲೀಸ್ ಆಗುತ್ತಿರುವುದರ ಜೊತೆಗೆ ರಂಗನಾಯಕಿ ಸಿನಿಮಾ ಪನೋರಮಾಗೆ ಆಯ್ಕೆ ಆಗಿದೆ. ಮಹಿಳಾ ಪ್ರಧಾನ ಕಥೆ ಒಳಗೊಂಡ ಈ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ತ್ರಿವಿಕ್ರಮ್ ಕೂಡ ನಟಿಸಿದ್ದಾರೆ.
ಈ ವೇಳೆ ಮಾತನಾಡಿದ ನಿರ್ದೇಶಕ ದಯಾಳ್ ಪದ್ಮನಾಭನ್, “ರಂಗನಾಯಕಿ ಸಿನಿಮಾದ ಹಾಡುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವಾರಕ್ಕೆ ಒಂದೊಂದರಂತೆ ರಿಲೀಸ್ ಮಾಡುತ್ತಿದ್ದೇವೆ. ಈಗಾಗಲೇ ಈ ಸಿನಿಮಾ ಟ್ರೇಲರ್ ಪ್ರೇಕ್ಷಕರ ಗಮನ ಸೆಳೆದಿದೆ. ಈಗಿನ ಟ್ರೆಂಡ್ಗೆ ಸರಿಹೊಂದುವಂತೆ ರೂಪಿಸಿದ್ದೇವೆ. ಸದ್ಯ ಈ ಚಿತ್ರದ ಪೋಸ್ಟ್ ಪೊಡಕ್ಷನ್ ಕೆಲಸ ಮುಗಿದಿದ್ದು, ನವೆಂಬರ್ ೧ಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ನಿರ್ಧಾರ ಮಾಡಿದ್ದೇವೆ. ಇದಕ್ಕೂ ಮೊದಲು ರಂಗನಾಯಕಿ ಈ ಬಾರಿಗೆ ಪನೋರಮಾಗೆ ಆಯ್ಕೆಯಾದ ಏಕೈಕ ಕನ್ನಡ ಸಿನಿಮಾ ಆಗಿದೆ. ಕಳೆದ ನಾಲ್ಕು ಸಿನಿಮಾಗಳಿಂದಲೂ ಟ್ರೈ ಮಾಡುತ್ತಲೇ ಇದೆ. ಅದು ಈಗ ಫಲಿಸಿದೆ ಎಂದು ಖುಷಿ ಹಂಚಿಕೊಂಡರು. ಇನ್ನು ಇಂತಹ ನಿರ್ಮಾಪಕರು ಸಿಕ್ಕಿರುವುದು ನನಗೆ ಹೆಮ್ಮೆ ಅನಿಸಿದೆ. ಯಾವುದೇ ರೀತಿ ಕುಂದು ಕೊರತೆಯಿಲ್ಲದೆ ಬೆಂಬಲ ನೀಡಿದ್ದಾರೆ ಎಂದು ನಿರ್ಮಾಪಕ ಎಸ್.ವಿ. ನಾರಾಯಣ್ ಅವರನ್ನು ಹೊಗಳಿದರು ನಿರ್ದೇಶಕ ದಯಾಳ್. ನವೆಂಬರ್ ೨೪ರಂದು ಗೋವಾದಲ್ಲಿ ಇಂಡಿಯನ್ ಪನೋರಮಾದಲ್ಲಿ ರಂಗನಾಯಕಿ ಶೋ ಆಗುತ್ತದೆ. ಈಗಾಗಲೇ ಅಲ್ಲಿಂದ ನಮಗೆ ಆಹ್ವಾನ ಬಂದಿದೆ ಎಂದ ದಯಾಳ್. ಈ ಚಿತ್ರದಲ್ಲಿ ಅದಿತಿ ಪ್ರಭುದೇವ ತನ್ನ ಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ವಿಶೇಷ ಅಂದರೆ ಮಹಿಳೆಯರಿಗೆ ಶೋ ತೋರಿಸುವುದಕ್ಕೆ ಪ್ಲಾನ್ ಮಾಡುತ್ತಿದ್ದೀವಿ ಎಂದರು.
ನಿರ್ಮಾಪಕ ನಾರಾಯಣ್ ಮಾತನಾಡಿ, ಈ ಸಿನಿಮಾ ಇಂಡಿಯಾನ್ ಪನೋರಮಾಗೆ ಆಯ್ಕೆ ಆಗಿದ್ದು ನಮಗೆಲ್ಲ ಖುಷಿ ತಂದಿದೆ. ದಯಾಳ್ ತುಂಬಾ ಚೆನ್ನಾಗಿ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಯಾವುದೇ ತೊಂದರೆಯಾಗದಂತೆ ದಯಾಳ್ ಕೆಲಸ ಮಾಡಿಕೊಂಡು ಹೋಗಿದ್ದಾರೆ. ಎಸ್.ವಿ. ಎಂಟರ್ಟೈನ್ಮೆಂಟ್ ಬ್ಯಾನರ್ನಿಂದ ಬರುತ್ತಿರುವ ಎರಡನೇ ಸಿನಿಮಾವಿದು. ಈ ಸಿನಿಮಾದ ಮೂಲಕ ಅದಿತಿ ಪ್ರಭುದೇವ ಅವರಿಗೆ ಅವಾರ್ಡ್ ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೀವಿ ಎಂದರು.
No Comment! Be the first one.