ಕಿರುತೆರೆ ಮತ್ತು ಹಿರಿತೆರೆಯ ಖ್ಯಾತ ಕಲಾವಿದ ರವಿ ಭಟ್ ಅವರ ಪುತ್ರಿ ಕೃಷ್ಣಾ. ಸವರ್ಣ ದೀರ್ಘ ಸಂಧಿ ಮೂಲಕ ನಾಯಕನಟಿಯಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕೃಷ್ಣಾ ಆಯ್ಕೆಯಾಗಿದ್ದು ಹೇಗೆ? ಸಿನಿಮಾದ ಅನುಭವ ಹೇಗಿತ್ತು ಅಂತಾ ಸ್ವತಃ ಅವರೇ ವಿವರಿಸಿದ್ದಾರೆ. ಓದಿ..
ಇದು ನನ್ನ ಮೊದಲನೇ ಸಿನಿಮಾ. ಇದರ ಬಗ್ಗೆ ಖುಷಿ ಹಾಗೂ ಹೆಮ್ಮೆ ಇದೆ. ನಾನು ಕ್ರೈಸ್ಟ್ ಕಾಲೇಜಿನಲ್ಲಿ ಹೊಟೆಲ್ ಮ್ಯಾನೆಜ್ಮೆಂಟ್ ಮಾಡಿದ್ದೇನೆ. ಡಿಗ್ರಿ ಮುಗಿಯುವ ತನಕ ನಾನು ನಟಿಸುತ್ತೇನೆ ಎಂದು ಯೋಚಿಸಿಯೇ ಇರಲಿಲ್ಲ. ಡಿಗ್ರಿ ಮುಗಿದ ನಂತರ ಕೆಲಸಕ್ಕೆ ಹೋಗುವ ಆಸೆ ಇರಲಿಲ್ಲ. ಇಡೀ ದಿನ ಕಂಪ್ಯೂಟರ್ ಮುಂದೆ ಕೂತು ಕುಟ್ಟುವ ಆಸೆ ಇರಲಿಲ್ಲ. ಏನು ಮಾಡಬೇಕೆಂದು ಯೋಚಿಸುತ್ತಿರುವಾಗ ನನ್ನ ಸೋದರತ್ತೆ ವಿನಯಾ ಪ್ರಸಾದ್ ಈಗಾಗಲೇ ನೀನು ರ್ಯಾಂಪ್ ವಾಕ್, ಮಾಡೆಲಿಂಗ್ ಎಲ್ಲಾ ಸಾಕಷ್ಟು ಮಾಡ್ತಿದ್ದೀಯ, ಸೀರಿಯಲ್ಗಳಲ್ಲೂ ಕೂಡ ಅವಕಾಶಗಳು ಬರ್ತಿವೆ. ಯಾಕೆ ಆಕ್ಟಿಂಕ್ ಕೋರ್ಸ್ ಮಾಡಿಕೊಂಡು ಸಿನಿಮಾಗೆ ಬರಬಾರದು ಎಂದು ಐಡಿಯಾ ಕೊಟ್ಟರು. ಅದನ್ನ ಸೀರಿಯಸ್ ಆಗಿ ತೆಗೆದುಕೊಂಡು ಉಷಾ ಭಂಡಾರಿಯವರ ಆಕ್ಟಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಆಕ್ಟಿಂಗ್ ಕೋರ್ಸ್ ಮುಗಿಸಿ, ಸಾಕಷ್ಟು ಸೀರಿಯಲ್ ಹಾಗೂ ಸಿನಿಮಾಗಳಿಗೆ ಸುಮಾರು ಒಂದೂವರೆ ವರ್ಷ ಆಡಿಷನ್ ಕೊಡತ್ತಲೇ ಇದ್ದೆ. ಸವರ್ಣದೀರ್ಘ ಸಂಧಿ ಚಿತ್ರದ ನರೇಷನ್ ಕೇಳಿದಾಗ ತುಂಬಾ ಇಷ್ಟ ಆಯ್ತು. ನಮ್ಮವರ ಟೀಮ್ನಲ್ಲಿ ನನ್ನ ಒಂದು ಡೆಬ್ಯೂ ಸಿನಿಮಾ ಬರಬೇಕು ಅನ್ನೋ ಆಸೆ ಯಾವಾಗಲೂ ಇತ್ತು. ನನಗೆ ಮಂಗಳೂರು ಟೀಮ್ ಜೊತೆ ನನ್ನ ಮೊದಲ ಸಿನಿಮಾ ಮಾಡಿರೋದಕ್ಕೆ ತುಂಬಾ ಖುಷಿ ಇದೆ.
ನನ್ನ ಕುಟುಂಬದಲ್ಲಿ ಸಾಕಷ್ಟು ಜನ ಕಲಾವಿದರಿದ್ದಾರೆ. ಡಾನ್ಸರ್, ಸಿಂಗರ್ಸ್, ಆಕ್ಟರ್ಸ್ ಹೀಗೆ ಹಲವು ವಿಧಗಳಲ್ಲಿ ತೊಡಗಿಕೊಂಡಿರುವ ಕುಟುಂಬ. ಈ ಚಿತ್ರದಲ್ಲಿ ಗಾಯಕಿಯ ಪಾತ್ರ ನಿರ್ವಹಿಸುತ್ತಿದ್ದೇನೆ. ಇದಕ್ಕಾಗಿ ನನ್ನ ಅತ್ತೆಯ ಬಳಿ ಸಾಕಷ್ಟು ಟಿಪ್ಸ್ಗಳನ್ನು ತೆಗೆದುಕೊಂಡಿದ್ದೇನೆ. ಶೂಟಿಂಗ್, ಮೀಟಿಂಗ್ ಹಾಗೂ ಸ್ಟೇಜ್ ಶೋಗಳಲ್ಲಿ ಅಪ್ಪ ಮತ್ತು ವಿನಯ ಆಂಟಿ ಜೊತೆ ಯಾವಾಗಲೂ ಹೋಗುತ್ತಿದ್ದೆ. ಅವರೊಂದಿಗೆ ನಾನೂ ಕೂಡ ಭಾಗವಹಿಸುತ್ತಿದ್ದೆ. ಅದನ್ನೇ ನೋಡಿ ನೋಡಿ ನನಗೆ ಗೊತ್ತಾಗದೆ ನನ್ನೊಂದಿಗೆ ಬೆಳೆದುಬಂದಿದ್ದ ಕಲೆ ಈಗ ಹೊರಗೆ ಬರುತ್ತಿದೆ. ಈ ಸಿನಿಮಾದಲ್ಲಿ ವಿನಯ ಆಂಟಿ ಅವರ ಸಹಾಯ ತೆಗೆದುಕೊಂಡಿಲ್ಲ. ಉಷಾ ಭಂಡಾರಿ ಯವರ ಇನ್ಸ್ಟಿಟ್ಯೂಟ್ ಮೂಲಕವೇ ಈ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಇದರ ಬಗ್ಗೆ ನನಗೆ ಹೆಮ್ಮೆ ಇದೆ. ಇಡೀ ಸಿನಿಮಾ ಬಗ್ಗೆ ನಿರ್ದೇಶಕರು ಈಗಾಗಲೇ ಹೇಳಿದ್ದಾರೆ. ನಾನು ನನ್ನ ಪಾತ್ರದಲ್ಲಿ ಏನಿಷ್ಟ ಆಯ್ತು ಅನ್ನೋದರ ಬಗ್ಗೆ ಹೇಳ್ತೀನಿ. ಇಂಡಸ್ಟ್ರಿಗೆ ಕಾಲಿಡೋದೇ ಒಂದು ದೊಡ್ಡ ವಿಷಯ. ನಾನು ಮಾಡೋ ಡೆಬ್ಯೂ ಸಿನಿಮಾ ಬೇರೆ ಥರಾನೇ ಇರಬೇಕು ಅನ್ನೋ ಭಾವನೆ ಇತ್ತು. ಅದೇ ಥರ ಈ ಸಿನಿಮಾ ಇದೆ. ಒಬ್ಬ ಹೀರೋಗೆ ಒಬ್ಬಳು ಹೀರೋಯಿನ್ ಅನ್ನೋ ಥರಾ ಅಲ್ದೇ ಹೀರೋಯಿನ್ಗೆ ಮುಖ್ಯ ಪಾತ್ರ ಕೊಟ್ಟು ಡಿಫರೆಂಟ್ ಆಗಿ ಮಾಡಿದ್ದಾರೆ.
ಸವರ್ಣದೀರ್ಘ ಸಂಧಿ ಸಿನಿಮಾ ಸ್ಕ್ರಿಪ್ಟ್ ನರೇಶನ್ಗೆ ನಾನು ನನ್ನ ಅಪ್ಪನನ್ನು ಕರ್ಕೊಂಡು ಹೋಗಿದ್ದೆ. ಈ ಸಿನಿಮಾಗೆ ನೀನೇ ಹೀರೋಯಿನ್ ಆಗ್ಬೇಕು, ನಿನ್ನನ್ನೇ ಆಯ್ಕೆ ಮಾಡ್ಕೋಬೇಕು ಹಾಗೆ ನೀನು ಆಡಿಷನ್ ಕೊಡು ಅಂತ ಅಪ್ಪ ಹೇಳಿದ್ದರು. ಅಪ್ಪ ಹೀಗೆ ಹೇಳಿದ್ದಾರೆ ಅಂದ್ರೆ ಅದರಲ್ಲಿ ಏನೋ ವಿಶೇಷತೆ ಇದೆ ಅಂತಲೇ ಅರ್ಥ. ಹಾಗೇ ಪ್ರಿಪೇರ್ ಆಗಿ ಸೆಲೆಕ್ಟ್ ಆದೆ.
ಸವರ್ಣದೀರ್ಘ ಸಂಧಿ ಶೂಟಿಂಗ್ ಎಲ್ಲಾ ಮುಗಿದ ಮೇಲೆ ಸಿನಿಮಾ ನೋಡಿದ್ದೇನೆ. ನಾನು ಅಂದ್ಕೊಂಡದ್ದಕ್ಕಿಂತ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ೨ ಗಂಟೆಗಳ ಕಾಲ ನಗಾಡ್ಕೊಂಡೇ ನೋಡಬಹುದಾದ ಸಿನಿಮಾ. ಈ ಸಿನಿಮಾದಲ್ಲಿ ನನ್ನ ಪಾತ್ರದ ಹೆಸರು ಅಮೃತವರ್ಷಿಣಿ. ಒಬ್ಬ ಗಾಯಕಿ ಹಾಗೂ ಖ್ಯಾತ ಮ್ಯೂಸಿಕ್ ಡೈರೆಕ್ಟರ್ನ ಮಗಳು. ನನ್ನ ಅಪ್ಪ ರವಿ ಭಟ್ ಅವರೇ ಚಿತ್ರದಲ್ಲೂ ಸಹ ನನ್ನ ಅಪ್ಪನ ಪಾತ್ರದಲ್ಲಿ ನಟಿಸಿದ್ದಾರೆ. ನಿಜವಾದ ಅಪ್ಪ ಮಗಳೇ ಸಿನಿಮಾದಲ್ಲೂ ಅಪ್ಪ ಮಗಳ ಪಾತ್ರದಲ್ಲೇ ಕಾಣಿಸಿಕೊಂಡಿದ್ದೇವೆ. ಬೆಂಗಳೂರಿನ ಹೈ ಫೈ ಹುಡಿಗಿ ಅವಿದ್ಯಾವಂತ ರೌಡಿ ಹೀರೋ ಇಬ್ಬರ ನಡುವೆ ಹೇಗೆ ಸ್ನೇಹ ಪ್ರೀತಿ ಮೂಡುತ್ತದೆ ಅನ್ನೋದು ಕಥೆಯಲ್ಲಿನ ಒಂದು ಎಳೆ…
No Comment! Be the first one.