ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧ್ಯಕ್ಷ ಶ್ರೀನಿವಾಸಪ್ಪ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಅನ್ನೋ ಸುದ್ದಿ ಕೇಳಿಬಂದಿದೆ. ಕಳೆದ ವಾರ ಸ್ವಿಡ್ಜರ್ಲೆಂಡಿಗೆ ಫ್ಯಾಮಿಲಿ ಟೂರು ಅಂತಾ ಹೇಳಿ ಹೋದ ಶ್ರೀನಿವಾಸಪ್ಪನವರು ಈವರೆಗೂ ಪತ್ತೆಯೇ ಇಲ್ಲ. ಅಪಘಾತಕ್ಕೊಳಗಾಗಿ ಕಾಲಿಗೆ ಪೆಟ್ಟಾಗಿದೆ. ಇನ್ನೂ ಹತ್ತು ಹದಿನೈದು ದಿನಗಳ ಕಾಲ ಅವರು ಕಛೇರಿಗೆ ಹಾಜರಾಗೋದು ಡೌಟು ಅನ್ನೋ ವರ್ತಮಾನ ಬಂದಿದ್ದು, ಈ ವಿಚಾರದಿಂದ ಕೋಟಿಗಟ್ಟಲೆ ಹಣ ಹೂಡಿ, ಬಿಡುಗಡೆಗೆ ತಯಾರಿ ಮಾಡಿಕೊಂಡಿರುವ ನಿರ್ಮಾಪಕ, ನಿರ್ದೇಶಕರ ಎದೆ ಧಸಕ್ ಅಂದಿದೆ.
ಒಂದು ವೇಳೆ ಶ್ರೀನಿವಾಸಪ್ಪನವರು ಸ್ವಿಡ್ಜರ್ಲೆಂಡಿನಲ್ಲಿ ಏಟು ಮಾಡಿಕೊಂಡು ಬಂದು ಮಲಗಿದ್ದರೆ, ಎದ್ದುಬಂದು ಸಿನಿಮಾ ನೋಡಿ, ಸರ್ಟಿಫಿಕೇಟು ಕೊಡಿ ಅಂತಾ ಕೇಳೋದು ಮಾನವೀಯತೆ ಅಲ್ಲ. ಹಾಗಂತ ಅವರು ಚೇತರಿಸಿಕೊಂಡು ಬರುವ ತನಕ ಕಾದು ಕುಳಿತರೆ ನಿರ್ಮಾಪಕರ ಪಾಡೇನಾಗಬೇಡ. ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಸ್ಟಾರ್ ನಟರ ಸಿನಿಮಾ ಬರಲಿದೆ ಅಂತಾ ಸಾಕಷ್ಟು ಜನ ಸಣ್ಣ ಪುಟ್ಟ ಸಿನಿಮಾಗಳನ್ನು ನಿರ್ಮಿಸಿರುವವರು, ಎರಡನೇ ಸಾಲಿನ ಹೀರೋಗಳ ಸಿನಿಮಾಗಳೆಲ್ಲಾ ಬಿಡುಗಡೆಗೆ ತಯಾರಾಗಿವೆ. ಐಪಿಎಲ್ ಮತ್ತು ಸೂಪರ್ ಸ್ಟಾರ್ ಸಿನಿಮಾಗಳು ಬರುವುದರ ನಡುವಿನ ಗ್ಯಾಪಲ್ಲಿ ತಮ್ಮ ಸಿನಿಮಾ ರಿಲೀಸು ಮಾಡಿಕೊಂಡು ಸೇಫಾಗಬೇಕು ಅಂದುಕೊಂಡವರಿಗೆ ಈಗ ಚಳಿ ಜ್ವರ ಬಂದಂತೆ ಆಗಿದೆ.
ಶ್ರೀನಿವಾಸಪ್ಪನವರ ಅಧಿಕೃತವಾಗಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡು, ರಜೆ ಪಡೆದರೆ, ಸರ್ಕಾರ ಅವರ ಬದಲಿಗೆ ಬೇರೆ ವ್ಯವಸ್ಥೆಯನ್ನಾದರೂ ಮಾಡಬಹುದು. ಶ್ರೀನಿವಾಸಪ್ಪನವರು ಸಣ್ಣ ನಿರ್ಮಾಪಕರಿಗೆ ಕೊಡಬಾರದ ತೊಂದರೆ ಕೊಡುತ್ತಾರೆ. ತಮಗೆ ವಿಧೇಯರಿಗೆ ಮಾತ್ರ ಸಿನಿಮಾ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತಾರೆ ಎಂಬಿತ್ಯಾದಿ ಆರೋಪಗಳಿವೆ. ಈಗ ಫಾರಿನ್ ಟೂರು ಅಂತಾ ವಾರಗಟ್ಟಲೆ ಸಿನಿಮಾ ನಿರ್ಮಾಪಕರನ್ನು ಕಾಯಿಸಿದ್ದಾರೆ. ಮತ್ತೆ ಚಿಕಿತ್ಸೆಯ ನೆಪ ಹೇಳಿ ಕಛೇರಿಗೆ ಬರದೇ ಹೋದರೆ ಕೋಟ್ಯಂತರ ರುಪಾಯಿ ಹಣ ಖರ್ಚುಮಾಡಿ, ಎಲ್ಲೆಲ್ಲೋ ದುಡ್ಡು ಹೊಂಚಿತಂದು ಸಿನಿಮಾ ನಿರ್ಮಿಸಿದವರ ಕತೆ, ಅದರಲ್ಲಿ ಕೆಲಸ ಮಾಡಿರುವ ತಂತ್ರಜ್ಞರು, ಕಲಾವಿದರ ಪರಿಸ್ಥಿರಿ ಏನಾಗಬೇಡ?
ಈ ಕೂಡಲೇ ಶ್ರೀನಿವಾಸಪ್ಪನವರು ಅಧಿಕೃತವಾಗಿ ರಜೆ ಪಡೆದು, ತಮ್ಮ ಆರೋಗ್ಯದ ಕಡೆ ಗಮನ ಕೊಡುವುದರ ಜೊತೆಗೆ ಕನ್ನಡ ಚಲನಚಿತ್ರ ನಿರ್ಮಾಪಕ ಹಿತ ಕಾಯಬೇಕಿರುವ ತುರ್ತಿದೆ!
No Comment! Be the first one.