ನೀರ್ ದೋಸೆ ಯಶಸ್ಸಿನ ಬಳಿಕ ಜಗ್ಗೇಶ್ ಹಾಗೂ ವಿಜಯ ಪ್ರಸಾದ್ ಜೋಡಿ ‘ತೋತಾಪುರಿ’ ಮೂಲಕ ಕಮಾಲ್ ಮಾಡಲು ಸಜ್ಜಾಗಿದೆ. ಈ ವರ್ಷದ ನಿರೀಕ್ಷಿತ ಸಿನಿಮಾ ಇದಾಗಿದ್ದು, ಕಾಮಿಡಿ ಜತೆಗೆ ಭರಪೂರ ಮನರಂಜನೆ ಒದಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದನ್ನು ಟ್ರೇಲರ್ ಮೂಲಕ ಝಲಕ್ ತೋರಿಸಿದ್ದಾರೆ. ಇದಕ್ಕೆ ದೇಶಾದ್ಯಂತ ಸಖತ್ ರೆಸ್ಪಾನ್ಸ್ ಪಡೆದುಕೊಂಡ ಖುಷಿ ಚಿತ್ರತಂಡಕ್ಕಿದೆ.
ಇದೇ ಮೊದಲ ಬಾರಿಗೆ ಕಾಮಿಡಿ ಸಿನಿಮಾವೊಂದು ಎರಡೂ ಭಾಗದ ಚಿತ್ರೀಕರಣವನ್ನೂ ಮೊದಲೇ ಮಾಡಿಕೊಂಡು ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಚಾಪ್ಟರ್ 1 ಹಾಗೂ ಚಾಪ್ಟರ್ 2 ರೂಪದಲ್ಲಿ ರಿಲೀಸ್ ಆಗಲಿರುವ ‘ತೋತಾಪುರಿ’, ಮೊದಲಿಗೆ ಸೆಪ್ಟೆಂಬರ್ 30ರಂದು ಚಾಪ್ಟರ್ 1 ವಿಶ್ವಾದ್ಯಂತ ತೆರೆಕಾಣಲಿದೆ. ಪ್ರಾರಂಭದಿಂದಲೂ ಸಿಕ್ಕಾಪಟ್ಟೆ ಕುತೂಹಲ ಹುಟ್ಟು ಹಾಕಿರುವ ಈ ಸಿನಿಮಾದ ಟ್ರೇಲರ್ ಹಾಗೂ ಹಾಡಿಗೆ ದೇಶ-ವಿದೇಶ ಗಳಿಂದ ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ ಚಿತ್ರತಂಡ.
200 ಮಿಲಿಯನ್ ಮಹೋತ್ಸವ
ತೋತಾಪುರಿ ಸಿನಿಮಾದ ‘ಬಾಗ್ಲು ತೆಗಿ ಮೇರಿ ಜಾನ್…’ ಹಾಡು ವಿಶ್ವದಾದ್ಯಂತ ಸದ್ದು ಮಾಡಿದ್ದು ಗೊತ್ತೇ ಇದೆ. ದೊಡ್ಡವರಿಂದ ಚಿಕ್ಕವರವರೆಗೂ, ದೇಶ-ವಿದೇಶದವರೂ ಈ ಹಾಡಿಗೆ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಿಂದ ಹಿಡಿದು ಯಾವುದೇ ಸಮಾರಂಭ, ಮನೆ, ಕಾರು, ಕಚೇರಿ ಮೊದಲಾದ ಕಡೆಯೂ ತೋತಾಪುರಿ ಹಾಡಿನದ್ದೇ ಕಲರವ. ಹಾಡನ್ನು ರೀ ಕ್ರಿಯೇಟ್ ಮಾಡಿದವರೆಷ್ಟೋ, ರೀಲ್ಸ್, ಡಾನ್ಸ್ ಮಾಡಿದವರು ಸಾವಿರಾರು ಮಂದಿ. ಇವೆಲ್ಲದರ ಜತೆಗೆ ‘ಬಾಗ್ಲು ತೆಗಿ ಮೇರಿ ಜಾನ್’ 200 ಮಿಲಿಯನ್ ಹಿಟ್ಸ್ ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ವಿಜಯ ಪ್ರಸಾದ್ ಸಾಹಿತ್ಯ ರಚಿಸಿದ್ದು, ವ್ಯಾಸರಾಜ್ ಸೋಸಲೆ ಹಾಗೂ ಅನನ್ಯ ಭಟ್ ದನಿಗೂಡಿಸಿದ್ದಾರೆ. ಕಲರ್’ಫುಲ್ ಸೆಟ್’ನಲ್ಲಿ ನೂರಾರು ಡಾನ್ಸರ್’ಗಳೊಂದಿಗೆ ಶೂಟ್ ಮಾಡಿರುವ ಈ ಹಾಡು ಮೋನಿಫ್ಲಿಕ್ಸ್ ಆಡಿಯೋಸ್ ಯೂಟ್ಯೂಬ್ ಚಾನಲ್’ನಲ್ಲಿ ರಿಲೀಸ್ ಆಗಿದೆ.
ತೋತಾಪುರಿ ತಾರಾಗಣದ ದಾಖಲೆ
ತೋತಾಪುರಿ ಎರಡು ಭಾಗಗಳಲ್ಲಿ ತಯಾರಾಗಿದ್ದು, ನೂರಾರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕಾಮಿಡಿ ಸಿನಿಮಾವೊಂದಕ್ಕೆ ಈ ಪರಿ ಶೂಟಿಂಗ್ ಮಾಡಿರುವುದು ಒಂದೆಡೆಯಾದರೆ, ಜಗ್ಗೇಶ್ ನಟಿಸಿರುವ ಸಿನಿಮಾಗಳ ಪೈಕಿ ತೋತಾಪುರಿ ಬಿಗ್ ಬಜೆಟ್ ಸಿನಿಮಾ ಎಂಬುದು ಗಮನಾರ್ಹ. ಹಾಗೆಯೇ ಚಿತ್ರದಲ್ಲಿ ಸಾಕಷ್ಟು ತಾರಾಸಮೂಹವೇ ಇದೆ ಎಂಬುದು ಮತ್ತೊಂದು ಗಮನಾರ್ಹ ವಿಷಯ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ವೀಣಾ ಸುಂದರ್, ದತ್ತಣ್ಣ, ಹೇಮಾದತ್ ಸೇರಿದಂತೆ ಅನೇಕ ಕಲಾವಿದರು ತೋತಾಪುರಿ ತಾರಾಗಣದಲ್ಲಿದ್ದಾರೆ.
ದಸರಾ ನಂಟು-ತೋತಾಪುರಿ ಅಂಟು
ಜಗ್ಗೇಶ್ ಹಾಗೂ ವಿಜಯಪ್ರಸಾದ್ ಜೋಡಿ ಈಗಾಗಲೇ ನೀರ್ ದೋಸೆ ಸಿನಿಮಾ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದೆ ಎಂಬುದಕ್ಕೆ ಆ ಚಿತ್ರಕ್ಕೆ ಸಿಕ್ಕಿರುವ ಅಭೂತಪೂರ್ವ ಗೆಲುವೇ ಸಾಕ್ಷಿ. ಮುಖ್ಯವಾಗಿ ಮಹಿಳೆಯರು ಹಾಗೂ ಕುಟುಂಬವರ್ಗ ವೀಕ್ಷಿಸಿದ ನೀರ್ ದೋಸೆ ಬಾಕ್ಸಾಫೀಸ್’ನಲ್ಲೂ ದೊಡ್ಡ ಮಟ್ಟದಲ್ಲಿ ದಾಖಲೆ ಮಾಡಿದೆ. ಇನ್ನು ನೀರ್ ದೋಸೆ ಹಾಗೂ ತೋತಾಪುರಿ ಇವರಿಬ್ಬರ ಕಾಂಬಿನೇಷನ್ ಎಂಬುದು ಒಂದೆಡೆಯಾದರೆ, ನೀರ್ ದೋಸೆ ರಿಲೀಸ್ ಆಗಿದ್ದು ದಸರಾ ವೇಳೆಯಲ್ಲಿ. ಈಗ ತೋತಾಪುರಿ ಸಹ ದಸರಾ ವೇಳೆಗೆ ಕಂಗೊಳಿಸಲು ಸಜ್ಜಾಗಿದೆ. ಸೆಪ್ಟೆಂಬರ್ 2ರಂದು ನೀರ್ ದೋಸೆ ಬಿಡುಗಡೆಯಾಗಿ ರಾಜ್ಯಾದ್ಯಂತ ಸಖತ್ ಕಮಾಲ್ ಮಾಡಿತ್ತು. ಇದೀಗ ಸೆಪ್ಟೆಂಬರ್ 30ರಂದು ತೋತಾಪುರಿ ವಿಶ್ವದಾದ್ಯಂತ ರಂಗೇರಲು ತಯಾರಿ ನಡೆಸಿದೆ ಚಿತ್ರತಂಡ.
ಸೂಪರ್ ಹಿಟ್ ನಿರ್ಮಾಪಕರ ಮತ್ತೊಂದು ಸಿನಿಮಾ
ಸ್ಯಾಂಡಲ್’ವುಡ್’ನಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನಿರ್ಮಿಸಿ ಸದಭಿರುಚಿಯ ನಿರ್ಮಾಪಕ ಎಂದೇ ಖ್ಯಾತರಾಗಿರುವ ಕೆ.ಎ.ಸುರೇಶ್ ನಿರ್ಮಿಸಿರುವ ಮತ್ತೊಂದು ಮಹಾನ್ ಸಿನಿಮಾ-ತೋತಾಪುರಿ.
ಎರಡನೇ ಮದುವೆ, ಗೋವಿಂದಾಯ ನಮಃ, ಶ್ರಾವಣಿ ಸುಬ್ರಮಣ್ಯ, ಆರ್ ಎಕ್ಸ್ ಸೂರಿ, ಶಿವಲಿಂಗ, ರಾಜು ಕನ್ನಡ ಮೀಡಿಯಂ ಎಂಬ ಬೃಹತ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆ.ಎ.ಸುರೇಶ್, ತೋತಾಪುರಿ ಸಿನಿಮಾವನ್ನು ಮೋನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
No Comment! Be the first one.