ಮಂಡ್ಯ ಲೋಕಸಭಾ ಚುನಾವಣಾ ಕಣ ಕ್ಷಣ ಕ್ಷಣವೂ ರಂಗೇರುತ್ತಿದೆ. ಅತ್ತ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದ ಸಿಎಂ ಪುತ್ರ ನಿಖಿಲ್, ಇತ್ತ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್… ನೋಡ ನೋಡುತ್ತಲೇ ಈ ಪ್ರಜಾಸತ್ತಾತ್ಮಕ ಕದನ ದ್ವೇಷ ರಾಜಕಾರಣವಾಗಿ ಚಹರೆ ಬದಲಿಸಿಕೊಳ್ಳುತ್ತಿದೆ. ಇದೆಲ್ಲದರ ಪರಿಣಾಮವೆಂಬಂತೆ ಸುಮಲತಾ ಪರವಾಗಿ ಪ್ರಚಾರ ನಡೆಸುತ್ತಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಯಶ್ ಕೂಡಾ ವಿರೋಧಿ ಪಾಳೆಯದ ಕೆಂಗಣ್ಣಿಗೆ ಗುರಿಯಾಗಿ ಬಿಟ್ಟಿದ್ದಾರೆ.
ಖುದ್ದು ಸಿಎಂ ಕುಮಾರಸ್ವಾಮಿಯವರೇ ದರ್ಶನ್ರನ್ನು ವ್ಯಂಗ್ಯ ಮಾಡಿ ಮಾತಾಡೋ ಮೂಲಕ ಕಾರ್ಯಕರ್ತರಿಗೂ ಉತ್ತೇಜನ ಸಿಗುವಂತೆ ಮಾಡಿದ್ದಾರೆಂಬ ಆರೋಪಗಳೂ ಇವೆ. ಈ ನಡುವೆ ದರ್ಶನ್ ಮನೆ ಮೇಲೆ ಕಲ್ಲು ತೂರಾಟದಂಥಾ ಘಟನಾವಳಿಗಳೂ ನಡೆದು ಹೋಗಿವೆ. ಹೀಗಿರುವಾಗಲೇ ಬಿಜೆಪಿ ಅಧಿಕೃತವಾಗಿಯೇ ಅಖಾಡಕ್ಕಿಳಿದಂತಿದೆ!
ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ನಟರಾದ ದರ್ಶನ್ ಮತ್ತು ಯಶ್ ಗೆ ಸಿಆರ್ ಪಿಎಫ್ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ. ಇದರೊಂದಿಗೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿರೋ ಒಟ್ಟಾರೆ ಚಿತ್ರಣವನ್ನೂ ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ದರ್ಶನ್ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದ ಘಟನೆಯೂ ಸೇರಿದಂತೆ, ಸುಮಲತಾರ ಸುತ್ತಾ ಅನುಮಾನಾಸ್ಪದ ವ್ಯಕ್ತಿಗಳು ಗಸ್ತು ತಿರುಗುತ್ತಿರೋದನ್ನೂ ಲಿಂಬಾವಳಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ವಿದ್ಯಮಾನ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಮತ್ತಷ್ಟು ರಂಗೇರಿಸೋ ಲಕ್ಷಣಗಳೇ ದಟ್ಟವಾಗಿವೆ!