ಕನ್ನಡದ ಸಿನಿಮಾಗಳಲ್ಲಿ ನಟಿಸಿ ಇಂದಿಗೂ ಸಿನಿ ರಸಿಕರ ಹೃದಯ ಸಿಂಹಾಸನದಲ್ಲಿ ಉಳಿದಿರುವ ಧಾರವಾಹಿ ಕಮ್ ಸಿನಿಮಾ ನಟರುಗಳ ಪೈಕಿ ಹರೀಶ್ ರಾಜ್ ಪ್ರಮುಖರು. ಫಣಿ ರಾಮಚಂದ್ರ ಅವರ ದಂಡ ಪಿಂಡಗಳು ಧಾರವಾಹಿಯಲ್ಲಿ ನಿರುದ್ಯೋಗಿಯಾಗಿ ಅಭಿನಯಿಸಿದ್ದ ಹರೀಶ್ ರಾಜ್ ಸದ್ಯ ಕಿಲಾಡಿ ಪೊಲೀಸ್ ಆಗಿ ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯ ಹಿನ್ನೆಲೆ ಸಂಗೀತದ ಅಳವಡಿಕೆಯ ಕೆಲಸ ನಡೆಯುತ್ತಿದೆ. ಈ ಹಿಂದೆ ಹರೀಶ್ ರಾಜ್ ಅಭಿನಯಿಸಿದ್ದ ಶ್ರೀ ಸತ್ಯ ನಾರಾಯಣ ಸಿನಿಮಾ ಲಿಮ್ಕಾ ದಾಖಲೆಗೂ ಆಯ್ಕೆಯಾಗಿತ್ತು. ಈ ಸಿನಿಮಾದಲ್ಲಿ 16 ಪಾತ್ರಗಳಲ್ಲಿ ಅಭಿನಯಿಸಿದ್ದರು.

ಇತ್ತೀಚೆಗೆ ಖ್ಯಾತ ನಟ ಮೋಹನ್ಲಾಲ್ ಪುತ್ರ ನಾಯಕನಾಗಿ ನಟಿಸಿರುವ ಲೂಸಿಫರ್ ಚಿತ್ರ ಸೇರಿದಂತೆ ಮಲೆಯಾಳಂನ ಎರಡು ಚಿತ್ರಗಳಲ್ಲಿ ಮುಖ್ಯ ಖಳನಟನ ಪಾತ್ರದಲ್ಲಿ ಹರೀಶ್ ರಾಜ್ ಕಾಣಿಸಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ಆರೆಂಜ್` ಚಿತ್ರದ ನಂತರ `ಕಿಲಾಡಿ ಪೊಲೀಸ್’ ಚಿತ್ರದಲ್ಲಿ ಅಭಿನಯಿಸಿರುವ ಹರೀಶ್ರಾಜ್, ಈ ಚಿತ್ರಕ್ಕೆ ನಿರ್ದೇಶನವನ್ನು ಮಾಡಿದ್ದಾರೆ. ಹೆಚ್.ಆರ್ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ 40 ದಿನಗಳ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಕಿಲಾಡಿ ಪೊಲೀಸ್ ಟೀಸರ್ ಸಹ ಬಿಡುಗಡೆಯಾಗಲಿದೆ. ಇನ್ನು ನಾಯಕನಾಗಿ ಹರೀಶ್ ರಾಜ್ ಅವರಿಗೆ ನಾಯಕಿಯಾಗಿ ಸಾನ್ವಿ ಪೊನ್ನಮ್ಮ ನಟಿಸಿದ್ದಾರೆ. ಉಳಿದಂತೆ ಶ್ರೀನಿವಾಸಮೂರ್ತಿ, ಪದ್ಮಾ ವಾಸಂತಿ, ಸುಚೇಂದ್ರ ಪ್ರಸಾದ್, ಶೋಭರಾಜ್, ಗಿರಿ, ಮುನಿ, ಮೋಹನ್ ಜುನೇಜ, ರಮೇಶ್ ಪಂಡಿತ್ ಮುಂತಾದ ತಾರಾಬಳಗವಿದೆ.











































