ಗಿರೀಶ್ ಕಾರ್ನಾಡ್ ಅವರು ಉತ್ತರ ಕನ್ನಡದ ಶಿರ್ಸಿಯಲ್ಲಿ 1941 ರಿಂದ 1952ರವರೆಗೆ ಇದ್ದರು. ಅವರು ತಮ್ಮ ನಾಟಕಗಳಿಗೆ ಇತಿಹಾಸ ಮತ್ತು ಪುರಾಣಗಳಿಂದ ವಸ್ತು, ವಿಷಯ ಆಯ್ಕೆ ಮಾಡಿಕೊಂಡರೂ ತಮ್ಮ ಸಮಕಾಲೀನ ಪ್ರಜ್ಞೆಯಿಂದ ಅವುಗಳನ್ನು ಒರೆಗೆ ಹಚ್ಚಿದ್ದಾರೆ. ವಸ್ತುವಿನ ಶೋಧಕ್ಕಾಗಿ ಹೀಗೆ ಹಿಂದೆ ಹೋಗುವ ಕಾರಣ ಪ್ರಾಯಶಃ ಅವರು ಶಿರ್ಸಿಯಲ್ಲಿ ಬೆಳೆದಿದ್ದಿರಬಹುದು. ಆ ಕಾಲದಲ್ಲಿ ಅಲ್ಲಿ ವಿದ್ಯುದ್ದೀಪ ಇರಲಿಲ್ಲ. ಆದ್ದರಿಂದ ರಾತ್ರಿ 8 ಗಂಟೆಗೆ ಅಲ್ಲಿ ಎಲ್ಲಾ ವ್ಯಾಪಾರ ಮುಗಿದುಬಿಡುತ್ತಿತ್ತು. ಟೆಲಿವಿಷನ್ ಇಲ್ಲದ ಕಾಲ. ಲಾಟೀನು ಬೆಳಕಿನಲ್ಲಿ ಅವರು ಓದಿದವರು ಮತ್ತು ಬೆಳೆದವರು. ಇಡೀ ವಾತಾವರಣವೇ ಕತೆಗಳ ಸ್ವರೂಪದ್ದು. ಅವರಿಗೆ ಅಡುಗೆ ಮಾಡಿಕೊಡುತ್ತಿದ್ದ ಒಬ್ಬ ಅಜ್ಜಿ ಇದ್ದಳು.
ಮನೆಯಲ್ಲಿಯೇ ಉಳಿದು ಅವಳು ಇವರಿಗೆಲ್ಲಾ ಕಥೆ ಹೇಳುತ್ತಿದ್ದಳು. ಶಾಲೆಯಲ್ಲಿ ಒಬ್ಬರಿಗೊಬ್ಬರು ಕತೆ ಹೇಳಿ ಕೊಳ್ಳುತ್ತಿದ್ದರು. ಈ ಕಾರಣಕ್ಕೆ ಇರಬಹುದು ಅವರಿಗೆ ಪುರಾಣ ಪಾತ್ರಗಳ ಸುತ್ತ ಕತೆ ಹೆಣೆಯುವುದು ಸುಲಭವಾಗಿದೆ. ಯಾಕೆಂದರೆ ಅವರು ಆ ಪಾತ್ರಗಳೊಡನೆ ಬೆಳೆದವರು. ಯಕ್ಷಗಾನ, ಕಂಪನಿ ನಾಟಕ ಇವುಗಳಿಂದೆಲ್ಲ ಕಲಿತಿದ್ದೇವೆ ಎಂದಿದ್ದಾರೆ. ಇಷ್ಟಲ್ಲದೆ “ಶಿರಸಿಯಲ್ಲಿ ಬಾಲ್ಯವೆಂದರೆ ಪ್ರತಿವರ್ಷ ಕಾಲು-ತೋಳು ತುಂಬ ಕಜ್ಜಿ. ಅದಕ್ಕೆ ಬಳಿಯುತ್ತಿರುವ ನೇರಳೆ ಬಣ್ಣದ ದಪ್ಪನ್ನ ‘ಜೆನ್ಶ್ನ್ ವಾಯಲೆಟ್’ ಎಂಬ ಮದ್ದು, ಹೊಟ್ಟೆ ‘ಸಾಫ್’ ಮಾಡಲಿಕ್ಕೆ ಔಡಲೆಣ್ಣೆ. ಮಲೇರಿಯಾ ಎದುರಿಸಲಿಕ್ಕೆ ಎಷ್ಟು ನಾಲಿಗೆ ತೊಳೆದರೂ ಮಾಯವಾಗದಂಥ ಕಹಿ ರುಚಿಯ ಕ್ವಿನಾಯಿನ್.” ಇಂತಹ ಪರಿಸರದಲ್ಲಿ ಬದುಕನ್ನು ಕಟ್ಟಿಕೊಳ್ಳುವುದು ತುಂಬಾ ಕ್ಲಿಷ್ಟ ಅನ್ನಿಸಬಹುದು. ಆದರೆ ಸೂಕ್ಷ್ಮಮತಿಯ ಗಿರೀಶ್ ಕಾರ್ನಾಡರಿಗೆ ಆ ಪರಿಸರವೇ ಮುಂದಿನ ಪ್ರಗತಿಯ ಸೂಚಕವು ಆಗಿ ಮಾರ್ಪಟ್ಟಿತು. ಗಿರೀಶ್ ಕಾರ್ನಾಡರ ಕಾಲೇಜು ಶಿಕ್ಷಣ ಧಾರವಾಡದ ಪ್ರಸಿದ್ದ ಕರ್ನಾಟಕ ಕಾಲೇಜಿನಲ್ಲಿ ಆರಂಭವಾಯಿತು. ಆ ಕಾಲದಲ್ಲಿ ಇದು ಅತ್ಯಂತ ಗಿರೀಶ್ ಕಾರ್ನಾಡರು ಮತ್ತು ಅವರ ಸಾಹಿತ್ಯ ಹೆಸರಾಂತ ಉಚ್ಚ ಶಿಕ್ಷಣದ ದೇವಾಲಯವಾಗಿತ್ತು. ವಿ. ಕೃ. ಗೋಕಾಕ್ರಂತಹ ಮೇಧಾವಿ ಸೃಜನಶೀಲ ಪ್ರಾಂಶುಪಾಲರು, ಖ್ಯಾತ ವಿದ್ವಾಂಸ ಪ್ರೊಫೆಸರುಗಳ ಒಂದು ದೊಡ್ಡ ತಂಡ ಇತ್ತು. ಅವರೆಲ್ಲಾ ಹಿರಿಯ ಮಾರ್ಗದರ್ಶಕರಾಗಿ, ಮುಖ್ಯಸ್ಥರಾಗಿ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ ಕಾಲೇಜು ಅದಾಗಿತ್ತು. ಇಂತಹ ಆದರ್ಶಮಯ ಉನ್ನತ ಶೈಕ್ಷಣಿಕ ವಾತಾವರಣವು ಗಿರೀಶ್ ಕಾರ್ನಾಡರಿಗೆ ಅದೃಷ್ಟವೆಂಬಂತೆ ಒದಗಿತ್ತು. ಕರ್ನಾಟಕದಿಂದ ಯಶಸ್ವಿಯಾಗಿ ಹೊರಟ ಪ್ರತಿಭಾವಂತ ಎಂದು ಅನ್ನಿಸಿಕೊಳ್ಳಲಿಕ್ಕೆ ಇದೊಂದು ಅಡಿಪಾಯವಿಟ್ಟ ಕಾಲೇಜು ಮತ್ತು ಶೈಕ್ಷಣಿಕ ವಾತಾವರಣ ಎಂದರೆ ಅತಿಶಯೋಕ್ತಿ`ಯಲ್ಲ. “ನನ್ನ ಕುಟುಂಬ ಶಿರಸಿ ಬಿಟ್ಟು ಧಾರವಾಡಕ್ಕೆ ಹೋದದ್ದು 1952ರಲ್ಲಿ. ಮುಂದೆ ನಾನು ಎಂ.ಎ. ಮಾಡಲಿಕ್ಕೆಂದು ಅಲ್ಲಿಂದ ಮುಂಬಯಿಗೆ ಹೋದದ್ದು 1958ರಲ್ಲಿ. ಆರು ವರ್ಷಗಳಲ್ಲಿ ಮೊದಲನೆಯ ಎರಡು ವರ್ಷ ನಾನು ಬಾಸೆಲ್ ಮಿಶನ್ ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದೆ. ಆಮೇಲಿನ ನಾಲ್ಕು ವರ್ಷ ಕರ್ನಾಟಕ ಕಾಲೇಜಿನಲ್ಲಿದ್ದೆ. ಆದರೂ ಧಾರವಾಡದಲ್ಲಿ ಹೆಜ್ಜೆಯಿಟ್ಟ ಗಳಿಗೆಯಿಂದ ಕರ್ನಾಟಕ ಕಾಲೇಜು ನನ್ನ ಜಾಗೃತ ಜೀವನವನ್ನೇ ಆವರಿಸಿರುವ ಕೇಂದ್ರ ಸಂಸ್ಥೆಯಾಗಿತ್ತು. ಶಾಲೆಯಲ್ಲಿದ್ದಾಗಲೂ ನಾವು ಹುಡುಗರು ಅದನ್ನೇ ಧೇನಿಸುತ್ತಿದ್ದೆವು. ಇದರಿಂದ ಸದಾ ಚಿಂತನಶೀಲರಾದ ಕಾರ್ನಾಡರಿಗೆ ಹೊಸ ಹೊಸಪ್ರಯೋಗಗಳಿಗೆ ಉತ್ತಮ ವೇದಿಕೆಗಳು ಲಭ್ಯವಾಗುತ್ತಾ ಬಂದವು. ಸದಾ ಅಧ್ಯಯನ, ಕನ್ನಡ ಸಾಹಿತ್ಯದೊಡನೆ ಧಾರವಾಡ ಮನೋಹರ ಗ್ರಂಥ ಭಂಡಾರದ ಸಾಹಿತ್ಯ ಕೂಟದ ಮಿತ್ರರೊಡನೆ ಒಡನಾಟ ಎಲ್ಲವೂ ಅವರ ಸಾಹಿತ್ಯ ವ್ಯಕ್ತಿತ್ವಕ್ಕೆ ಹೊಸ ಆಯಾಮ ಸೃಷ್ಠಿಸುತ್ತಾ ಹೋದವು. ಎ.ಕೆ. ರಾಮನುಜರಂತೆ ಸಾಹಿತಿ ಮಿತ್ರರ ಪ್ರಭಾವವು ಆಯಿತು ಎಂದು ಅವರೇ ಒಂದು ಕಡೆ ಒಪ್ಪಿಕೊಂಡಿದ್ದಾರೆ. ಯಾರ ಪ್ರಭಾವ ಏನೇ ಆದರೂ ನಾಟಕ ರಚನೆಯಲ್ಲಿ ತಮ್ಮದೇ ಆದ ಸ್ವಂತಿಕೆಯ ದಾರಿ ಕ್ರಮಿಸಿ ಅಂತಾರಾಷ್ಟ್ರೀಯ ಖ್ಯಾತಿಯ ನಾಟಕಕಾರರಾಗಿ ಬೆಳೆದುಬಂದಿದ್ದಾರೆ ಎಂಬುದು ಅಪ್ಪಟ ಸತ್ಯ. “ ಕನ್ನಡದಲ್ಲಿ ನಾಟಕಕಾರನಾಗದಿದ್ದರೆ ಇಂಗ್ಲೀಷಿನಲ್ಲಿ ಕಾವ್ಯ ಬರೆಯುತ್ತಿದ್ದೆ” ಎಂದು ಅವರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಅಂತೆಯೇ ಅವರು ಆರಂಭಕ್ಕೆ ಕವಿಯಾಗಲು ಹೊರಟು ಕೆಲವು ಕವನಗಳನ್ನು ಇಂಗ್ಲೀಷ್ ಮತ್ತು ಕನ್ನಡದಲ್ಲಿ ಬರೆದಿದ್ದರೆಂದು ತಿಳಿಯಲಾಗಿದೆ. ಆರಡಿ ಎತ್ತರದ ಆರೋಗ್ಯ ಧೃಡಕಾಯ ಶರೀರ ಕಾರ್ನಾಡರದ್ದು. ಹಲವಾರು ಅತ್ಯುನ್ನತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದರೂ ಅವರೆಂದೂ ಅಹಂನಿಂದ ಬೀಗಿಲ್ಲ. ಸಾಮಾನ್ಯರೂ ಅವರೊಂದಿಗೆ ಮಾತನಾಡಬಹುದು, ಚರ್ಚಿಸಬಹುದು. ಭಿನ್ನಾಭಿಪ್ರಾಯವನ್ನು ತಳೆದು ಅವರೊಂದಿಗೆ ಖುಷಿಯಿಂದ ಮಾತಾನಾಡಬಹುದು. ಕನ್ನಡ ಸಾಹಿತ್ಯ ಕ್ಷೇತ್ರದ ಜಾತಿ ಮತ್ತು ಪಂಥದ ಗಂಡಾಂತರಗಳಿಗೆ ಎಂದೂ ಸಿಕ್ಕಿಹಾಕಿಕೊಳ್ಳದೆ ಜಾಣತನದಿಂದ ಈಜಿದವರು. ಎಡ, ಬಲ ರಾಜಕೀಯ ಸಿದ್ದಾಂತಗಳಿಗೆ ತಮ್ಮನ್ನು ಕಟ್ಟಿಹಾಕಿಕೊಳ್ಳದಿದ್ದರೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ ಜಾತ್ಯಾತೀತವಾದ ಮತಸಹಿಷ್ಣುತೆಯ ಮನೋಧರ್ಮವನ್ನು ಬೆಂಬಲಿಸಿದರು. ಕಾರ್ನಾಡರದ್ದು ಅತ್ಯಂತ ಪ್ರತಿಭಾಶೀಲ ಮತ್ತು ಸೃಜನಶೀಲ ಬಹುಮುಖ ವ್ಯಕ್ತಿತ್ವ. ಅವರು ಬೆಳೆದು ಬಂದ ಬಗೆಯನ್ನು ಗುರುತಿಸಿದಾಗ ಅವರ ಪ್ರತಿಭೆ ಸದಾ ಹೊಸ ದಾರಿ ಹೊಸ ಪ್ರಯೋಗಗಳ ಶೋಧನೆಯಲ್ಲಿ ನಡೆಯುತ್ತಿರುವುದು ಕಾಣುತ್ತದೆ. ಕನ್ನಡದಲ್ಲಿ ಇಂತಹ ಪಾರಿಜಾತದಂತಹ ಪ್ರತಿಭಾಶಾಲಿ ವ್ಯಕ್ತಿತ್ವದ, ಅಂತಾರಾಷ್ಟ್ರೀಯ ಸ್ತರಗಳಲ್ಲಿ ಹೆಸರು ಮಾಡಿದ ಕೆಲವೇ ಬೆರಳೆಣೆಕೆಯ ವ್ಯಕ್ತಿಗಳಲ್ಲಿ ಅವರೊಬ್ಬರು. ಆಧುನಿಕ ಕನ್ನಡ ನಾಟಕ ರಂಗಭೂಮಿಯಲ್ಲಿ ಅಗ್ರಗಣ್ಯ ಹೆಸರು ಕಾರ್ನಾಡರದು. ಇತಿಹಾಸ ಪುರಾಣ, ಜಾನಪದ ಕ್ಷೇತ್ರಗಳ ವಸ್ತುಗಳನ್ನು, ವಿಷಯಗಳನ್ನು ಕೇವಲ ಚೌಕಟ್ಟಿಗಾಗಿ ಉಪಯೋಗಿಸಿಕೊಂಡು ಸಮಾಕಾಲೀನ ಕಾಳಜಿಗಳನ್ನು, ಆತಂಕಗಳನ್ನು, ಮೂಲಭೂತ ಸಮಸ್ಯೆಗಳನ್ನು, ಸಂಬಂಧಗಳನ್ನು ಸ್ವಂತಿಕೆಯ ಸ್ತರದಲ್ಲಿ ಶೋಧಿಸುವುದು ಅವರ ನಾಟಕ ರಚನೆಯ ಪ್ರಕ್ರಿಯೆ ಅಪರೂಪದ್ದು. ಕಾರ್ನಾಡರು ಪರಂಪರೆಯ ಎಲ್ಲ ಪ್ರೌಢ, ನುರಿತ, ಫಲಪ್ರದವಾದ ವಸ್ತು- ತಂತ್ರಗಳ ಹೊಸ ಪ್ರಯೋಗಾತ್ಮಕ ಸಾಧ್ಯತೆಗಳನ್ನು ಹುಟ್ಟು ಹಾಕಿದ್ದಾರೆ. ಪಾಶ್ಚಿಮಾತ್ಯರ ಪ್ರಯೋಗಗಳೂ ಅವರ ಸೃಜನಾತ್ಮಕ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ತಮ್ಮದೇ ಆದ ಸ್ಥಾನ ಪಡೆದಿವೆ. ಆದರೆ ಸಮಾಕಾಲೀನತೆ ಅವರ ವೈಶಿಷ್ಟ್ಯ. ಹಾಗೆ ಅವರು ಆಯ್ಕೆ ಮಾಡಿದ ವಸ್ತುಗಳ ಮೇಲೆ ಹಲವರು ಮೊದಲೇ ಬರೆದವುಗಳಿವೆ. ಆದರೆ ಸಮಾಕಾಲೀನ ಪ್ರಜ್ಞೆಯ ಬೆಳಕಿನಲ್ಲಿ ಮೌಲ್ಯಗಳ ಪೃಥಕ್ಕರಣದಲ್ಲಿ, ಜೀವನ ಕ್ರಮದಲ್ಲಿ, ಮನುಷ್ಯ ಸಂಬಂಧಗಳಲ್ಲಿ ಭಿನ್ನತೆಗಳಿವೆ. ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಬೆಳವಣಿಗೆಯಲ್ಲಿ, ವೈಯುಕ್ತಿಕ ಜ್ಞಾನ ಮತ್ತು ಅನುಭವಗಳ ಸತ್ಯಶೋಧನೆಯಲ್ಲಿ ಅವರ ಕೃತಿಗಳು ಒಂದು ವೈಚಾರಿಕ ವಿಶ್ಲೇಷಣೆಯನ್ನು ಪ್ರಸ್ತುತಪಡಿಸುತ್ತದೆ ಅನ್ನುವುದು ಗಮನಾರ್ಹ ಹಾಗೂ ಚರ್ಚಿತ ವಿಷಯ. ಗಿರೀಶ್ ಕಾರ್ನಾಡರು ನಾಟಕಕಾರರಾಗಿ, ನಟ-ನಿರ್ದೇಶಕರಾಗಿ, ಜವಾಬ್ದಾರಿಯುತ ಪ್ರಜೆಯಾಗಿ, ‘ಬುದ್ಧಿಜೀವಿ’ಯ ಎಲ್ಲಾ ಗುಣಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ. ಪೂರ್ಣ ಪ್ರಮಾಣದ ‘ಆ್ಯಕ್ಟಿವಿಸ್ಟ್’ ಅಲ್ಲದಿದ್ದರೂ ಅನ್ಯಾಯ, ಶೋಷಣೆಗಳ ವಿರುದ್ದ ದನಿಯೆತ್ತಿದ್ದಾರೆ. ಸಾಮೂಹಿಕ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾರೆ. ಬುದ್ಧಿ ಜೀವಿಗಳ ಅಥವಾ ವಿಚಾರವಾದಿಗಳ ಎಲ್ಲಾ ವಿಚಾರ- ಕಾರ್ಯಗಳನ್ನು ಎಲ್ಲರೂ ಒಪ್ಪಬೇಕೆಂದಿಲ್ಲ. ಅವರೂ ಕೆಲ ಸಂದರ್ಭಗಳಲ್ಲಿ ದಾರಿ ತಪ್ಪಬಹುದು. ಆದರೆ ಅದರಿಂದ ನಿರೀಕ್ಷಿಸುವುದು ಪ್ರಾಮಾಣಿಕತೆ, ಧರ್ಮ ನಿರಪೇಕ್ಷತೆ ಮತ್ತು ತಮ್ಮ ಜವಾಬ್ದಾರಿಯ ಬಗೆಗಿನ ಬದ್ಧತೆ. ಈ ಅರ್ಥದಲ್ಲಿ ಗಿರೀಶ್ ಕಾರ್ನಾಡರು ಎಂದಿನಿಂದಲೂ ಬುದ್ಧಿ ಜೀವಿಯೇ ಆಗಿ ತಮ್ಮ ವ್ಯಕ್ತಿತ್ವ ಬೆಳೆಸಿಕೊಂಡವರು.
|
No Comment! Be the first one.