ನಾಗಮಂಡಲ ಗಿರೀಶ್ ಕಾರ್ನಾಡರ ನಾಗಮಂಡಲ ನಾಟಕ 1989ರ ಸುಮಾರಿಗೆ ಪ್ರಕಟವಾಗಿದೆ. ಜಾನಪದ ಶೈಲಿಯನ್ನು ಒಳಗೊಂಡ ಈ ನಾಟಕ ಕಾರ್ನಾಡರ ಕ್ರಿಯಾತ್ಮಕ ಪ್ರತಿಭೆಗೆ ಉತ್ತಮ ಉದಾಹರಣೆ ಎನ್ನಬಹುದು. ಇದು ನಾಟಕ ಹಾಗೂ ಸಿನಿಮಾ ಎರಡು ಪ್ರಕಾರಗಳಲ್ಲಿಯೂ ಯಶಸ್ವಿಯಾದ ಕೃತಿ. ಜಾನಪದ ಕಥೆಯೊಂದರ ಮೇಲೆ ಆಧಾರಿತವಾಗಿರುವ ಈ ನಾಟಕವು ಸಾಂಪ್ರದಾಯಿಕ ಸಮಾಜದಲ್ಲಿ ಗಂಡು-ಹೆಣ್ಣಿನ ಸಂಬಂಧವನ್ನು ಶೋಧಿಸುತ್ತದೆ, ಹಾಗೂ ವ್ಯಾಖ್ಯಾನಿಸುತ್ತದೆ. ಪುರುಷ ಪ್ರಧಾನ ಸಮಾಜ ಹೆಣ್ಣಿನ ಮೇಲೆ ಗಂಡಿನ ಅಪರಿಮಿತವಾದ ಅಧಿಕಾರವನ್ನು ನೀಡುತ್ತದೆ. ಹಾಗೆಯೇ ಹೆಣ್ಣು ಆ ಅಧಿಕಾರವನ್ನು ಪ್ರಶ್ನಿಸದೆ ಒಪ್ಪಿಕೊಳ್ಳುವಂತೆ ಮಾಡುತ್ತದೆ. ಈ ಅಧಿಕಾರ ನಾಟಕ ನಿದರ್ಶಿಸುವಂತೆ ದರ್ಪ ದಬ್ಬಾಳಿಕೆಯೂ ಆಗಬಹುದು. ಆದರೆ ಇದು ಗಂಡು-ಹೆಣ್ಣಿನ ಸಹಜ ಸಂಬಂಧಗಳು ಅರಳುವುದಕ್ಕೆ ಅಡ್ಡಿಯಾಗುತ್ತದೆ. ಪರಸ್ಪರ ಅನುಮಾನಿಸುವುದಕ್ಕೆ ಅಪನಂಬಿಕೆಗಳಿಗೆ ದಾರಿಯಾಗುತ್ತದೆ. ಇದನ್ನೆಲ್ಲ ನಾಟಕದಲ್ಲಿ ಕಾರ್ನಾಡರು ಹೇಳಿರುವ ರೀತಿ, ತಂದಿರುವ ನಾಟಕೀಯತೆ ಅಸಾಧಾರಣವಾದದ್ದು. ನಾಟಕದಲ್ಲಿ ರಾಣಿಯನ್ನು ಮದುವೆಯಾದ ಅಪ್ಪಣ್ಣ ರಾತ್ರಿ ಮನೆಗೇ ಬರುವುದಿಲ್ಲ. ಮನೆ ಬಿಡುವಾಗ ತನ್ನ ಹೆಂಡತಿಯನ್ನು ಮನೆಯಲ್ಲಿ ಕೂಡಿ ಗಿರೀಶ್ ಕಾರ್ನಾಡರು ಮತ್ತು ಅವರ ಸಾಹಿತ್ಯ ಹಾಕಿ ಹೊರಹೋಗುತ್ತಾನೆ. ರಾಣಿಯ ಭಾವನೆಗಳಿಗೆ ಸ್ಥಳವೇ ಇಲ್ಲ. ರಾಣಿ ಪ್ರೀತಿಗಾಗಿ ಹಂಬಲಿಸುತ್ತಾಳೆ. ರಾಣಿಗೆ ಆ ಪ್ರೀತಿ ಸಿಗುವುದು ತನ್ನ ಗಂಡನ ರೂಪ ಧರಿಸಿ ರಾತ್ರಿ ಬರುವ ನಾಗರ ಹಾವಿನಿಂದ. ರಾತ್ರಿಯಲ್ಲಿ ಪ್ರೀತಿ ತೋರುವ ಗಂಡನು ಹಗಲಲ್ಲಿ ತನ್ನನ್ನು ಮುಟ್ಟದೆ ಹೆದರಿಸಿ, ಬೆದರಿಸಿ ಕೂಡಿ ಹಾಕಿ ಏಕೆ ಹೋಗುತ್ತಾನೆಂದು ರಾಣಿ ಚಡಪಡಿಸುತ್ತಾಳೆ. ರಾಣಿಗೆ ಯಾವುದು ವಾಸ್ತವ, ಯಾವುದು ಸ್ವಪ್ನ ಎರಡು ಅರ್ಥವಾಗುವುದಿಲ್ಲ. ರಾತ್ರಿ-ಹಗಲಿನ ಒಂದು ಆಟದಂತೆ ಸಾಗುವ ನಾಟಕದ ನಾಟಕೀಯತೆ ಲೇಖಕರ ರಚನಾ ಕೌಶಲ್ಯವನ್ನು ಮತ್ತೊಮ್ಮೆ ಸಾರುತ್ತದೆ. ನಾಗಮಂಡಲ ಸಾಂಪ್ರದಾಯಿಕ ಸಮಾಜದಲ್ಲಿ ಹೆಣ್ಣಿನ ಅವಸ್ಥೆಯನ್ನು ಚಿತ್ರಿಸುವುದಲ್ಲದೆ, ಅವಳ ಅಭಿವ್ಯಕ್ತಿಗಳಿಗೆ ಅವಕಾಶ ಮಾಡಿಕೊಡುತ್ತದೆ. ಹಾಗೆ ಆ ಅಭಿವ್ಯಕ್ತಿಗಳಿಗೆ ಅವಕಾಶವೇ ಇಲ್ಲದಂತೆ ಮಾಡಿರುವ ಪುರುಷ ಪ್ರಧಾನ ಸಮಾಜದ ಟೀಕೆಯೂ ಆಗಿದೆ. ಒಟ್ಟಿನಲ್ಲಿ ನಾಟಕ ವಾಸ್ತವ, ಸಾಂಕೇತಿಕ, ನೈತಿಕ ನೆಲೆಗಳಲ್ಲಿ ಚಿತ್ರಿತವಾಗುತ್ತದೆ.ಮೌಲ್ಯಗಳ ಘರ್ಷಣೆ ನಡದೇ ಇದೆ. ಜಾನಪದ ಕಲೆ ಕೊನೆಯಿರದ ಮಾನವನ ಮನಸ್ಸಿನ ಪ್ರಕ್ರಿಯೆಯ ಅನಂತತೆಯನ್ನು ಸೂಚಿಸುತ್ತದೆ.
|
No Comment! Be the first one.