25 ನೇ ದಿನದತ್ತ ತಾರಕಾಸುರ ವೈಭವ! ಮೋಡಿ ಮಾಡಿತು ಚಂದ್ರಶೇಖರ ಬಂಡಿಯಪ್ಪ ಬುಡುಬುಡ್ಕೆ!

Picture of Cinibuzz

Cinibuzz

Bureau Report


ಫ್ರೆಶ್ ಆದ ಕಥೆಯನ್ನು, ಆಲೋಚನೆಗಳನ್ನು ಕನ್ನಡದ ಪ್ರೇಕ್ಷಕರು ಕಡೆಗಣಿಸಿದ ಉದಾಹರಣೆಗಳೇ ಇಲ್ಲ. ಅಂಥಾದ್ದರಲ್ಲಿ ಇದುವರೆಗೆ ಯಾರೂ ಮುಟ್ಟದ ಕಥೆಯೊಂದನ್ನು ಹೊಂದಿರುವ ಚೆಂದದ ಚಿತ್ರ ತಾರಕಾಸುರನ ಕೈ ಹಿಡಿಯದಿರುತ್ತಾರಾ? ಚಂದ್ರಶೇಖರ ಬಂಡಿಯಪ್ಪ ನಿರ್ದೇಶನದ ಈ ಚಿತ್ರ ಭರ್ಜರಿ ಓಪನಿಂಗ್ ಪಡೆದು ಇದೀಗ ಯಶಸ್ವಿಯಾಗಿ ಇಪ್ಪತೈದನೇ ದಿನದತ್ತ ದಾಪುಗಾಲಿಟ್ಟಿದೆ!

ತಾರಕಾಸುರನ ಡಿಫರೆಂಟಾದ ಕಥೆಗೆ ಪ್ರೇಕ್ಷಕರು ಮನ ಸೋತಿದ್ದಾರೆ. ಜೊತೆಗೆ ಚಿತ್ರರಂಗದ ಮಂದಿಯೂ ಕೂಡಾ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರ ವೀಕ್ಷಿಸಿದ್ದ ದುನಿಯಾ ವಿಜಯ್ ಅವರಂತೂ ಈ ಚಿತ್ರದ ನಿರ್ದೇಶನ, ಕಥೆ, ವೈಭವ್ ಅವರ ಅಮೋಘ ನಟನೆಯನ್ನೆಲ್ಲ ಕೊಂಡಾಡಿದ್ದಾರೆ. ವಿಜಿ ಮಾತ್ರವಲ್ಲದೇ ಈ ಚಿತ್ರವನ್ನು ನೋಡಿದವರೆಲ್ಲ ಇದೇ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಬುಡುಬುಡ್ಕೆ ಸಮುದಾಯದ ಕಥೆಯನ್ನು ಬೇಸ್ ಆಗಿಸಿಕೊಂಡಿರೋ ತಾರಕಾಸುರ ಪಕ್ಕಾ ಕಮರ್ಶಿಯಲ್ ಚಿತ್ರ. ನಿರ್ದೇಶಕ ಚಂದ್ರ ಶೇಖರ ಬಂಡಿಯಪ್ಪ ಈ ಹಿಂದೆ ರಥಾವರ ಚಿತ್ರದಲ್ಲಿ ಮಾಡಿದ್ದ ಮೋಡಿಯನ್ನೇ ಈ ಬಾರಿಯೂ ಮುಂದುವರೆಸಿದ್ದಾರೆ. ಹೊಸಾ ಹುಡುಗ ವೈಭವ್ ಅವರನ್ನು ಸವಾಲಿನ ಪಾತ್ರದಲ್ಲಿ ಎಲ್ಲರೂ ಮೆಚ್ಚುವಂತೆ ಚಿತ್ರಿಸಿರೋದರಲ್ಲಿಯೇ ಬಂಡಿಯಪ್ಪನವರ ಅಸಲೀ ಕಸುಬುದಾರಿಕೆ ಜಾಹೀರಾಗಿದೆ. ಬಹುಶಃ ಮಾಮೂಲಿ ನೋಟಕ್ಕೆ ಒಂದು ಆರ್ಟ್ ಮೂವಿಯ ವಸ್ತುವಾಗಿಯಷ್ಟೇ ಕಾಣಿಸುವ ಕಥೆಯೊಂದನ್ನು ಕಮರ್ಶಿಯಲ್ ಚೌಕಟ್ಟಿನಲ್ಲಿ ತೆರೆದಿಟ್ಟಿದ್ದೇ ಪ್ರೇಕ್ಷಕರನ್ನು ಸೆಳೆದುಕೊಂಡಿದೆ.
ಇದೀಗ ಭರ್ಜರಿ ಪ್ರದರ್ಶನೊಂದಿಗೇ ತಾರಕಾಸುರ ವೈಭವ ಇಪ್ಪತೈದನೇ ದಿನದತ್ತ ಹೊರಳಿಕೊಂಡಿದೆ

#

ಇನ್ನಷ್ಟು ಓದಿರಿ

Scroll to Top