ಅವಕಾಶಗಳ ನಿರೀಕ್ಷೆಯಲ್ಲಿ ಬಾಲಪ್ರತಿಭ..
ಚಿತ್ರರಂಗದಲ್ಲಿ ಪ್ರತಿಭೆ ಇದ್ದರೂ ಅವಕಾಶ ಸಿಗುವುದು ಕಷ್ಟ. ಜತೆಗೆ ಅದೃಷ್ಟವೂ ಇರಬೇಕು. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದ ಬಾಲಪ್ರತಿಭೆ ಛಾಯಾದೇವಿ 11ನೇ ವಯಸಿನಲ್ಲೇ ನಟನೆಯ ಅವಕಾಶ ಗಿಟ್ಟಿಸಿಕೊಂಡು, ಈಗಾಗಲೇ ಮೂರ್ನಾಲ್ಕು ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ತನ್ನಿಷ್ಟದ ಸಿನಿಮಾ ರಂಗದಲ್ಲೇ ಗಟ್ಟಿಯಾಗಿ ನೆಲೆ ನಿಲ್ಲಬೇಕೆಂಬ ಆಸೆ ಇಟ್ಟುಕೊಂಡಿರುವ ಈ ಬಾಲಪ್ರತಿಭೆ, ಭಾಗ್ಯಲಕ್ಷ್ಮಿ ಮತ್ತು ಗೋವಿಂದರಾಜು ಅವರ ಒಬ್ಬಳೇ ಮಗಳು.

ಎಂಥ ಕಠಿಣ ಪಾತ್ರವಾದರೂ ಸರಿ ಮಾಡುತ್ತೇನೆ ಎಂದು ಹೇಳುವ ಛಾಯಾದೇವಿ ಅಪ್ಪಟ ಬೆಂಗಳೂರಿನ ಪ್ರತಿಭೆಯಾಗಿದ್ದು, ಸದ್ಯ ಹತ್ತನೇ ತರಗತಿ ಓದುತ್ತಿದ್ದಾಳೆ. ಓದಿನಲ್ಲೂ ಸಹ ಮುಂದಿರುವ ಈಕೆಗೆ, ವಿದ್ಯಾಭ್ಯಾಸದೊಂದಿಗೆ ನಟನೆಯನ್ನೂ ಮುಂದುವರೆಸಿಕೊಂಡು ಹೊಗಬೇಕೆಂಬ ಆಸೆಯಿದೆ. ಈಕೆಯ ಮೊದಲ ಚಿತ್ರ ಕಸ್ತೂರಿ. ಟಿಜಿ ಗಣೇಶ್ ನಿರ್ದೇಶನದ, ಕರೋನಾ ಹಿನ್ನೆಲೆಯ ಕಥೆ ಇರುವ ಚಿತ್ರ ಇದಾಗಿದ್ದು, ಇದರಲ್ಲಿ ಛಾಯಾದೇವಿ ಒಬ್ಬ ಬಡ ಹುಡುಗಿಯ ಪಾತ್ರ ನಿರ್ವಹಿಸಿದ್ದಾರೆ. ಕಾರಣಾಂತರದಿಂದ ಈ ಚಿತ್ರ ತೆರೆಗೆ ಬರಲು ಸಾಧ್ಯವಾಗಿಲ್ಲ. ಇದಲ್ಲದೆ ಸಾಯಿಲೋಕೇಶ್ ಅವರ ನಿರ್ದೇಶನದ ಕಲರ್ಸ್ ಆಫ್ ಟೊಮಟೋ ಚಿತ್ರದಲ್ಲಿ ಈಕೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಹಾಗೂ ಬಿ. ಸುರೇಶ್ ಅವರ ಮೊಮ್ಮಗಳಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಕೋಲಾರ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಇದಲ್ಲದೆ ಕಾಳಿಪ್ರಸಾದ್ ಅವರ ನಿರ್ದೇಶನದ ‘ದೇವಿ’ ಎಂಬ ಚಿತ್ರದಲ್ಲಿ ಛಾಯಾದೇವಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದು, ಆ ಚಿತ್ರವೀಗ ಬಿಡುಗಡೆಯ ಹಂತದಲ್ಲಿದೆ. ಈ ಚಿತ್ರದಲ್ಲಿ ಈಕೆಯ ತಾಯಿಗೆ ಮಗಳು ನಟಿಯಾಗಬೇಕೆಂಬ ಆಸೆ.

ಮಗಳು ಸ್ಲಿಮ್ಮಾಗಿರಬೇಕು ಎಂದು ಆಕೆ ಏನೆಲ್ಲಾ ಪ್ರಯತ್ನ ಮಾಡುತ್ತಾಳೆ, ಇದರಿಂದಾಗಿ ಆ ಹುಡುಗಿ ಮೆಂಟಲ್ಲಿ ಹೇಗೆ ಸ್ಟೇಬಲ್ ಆಗ್ತಾಳೆ, ಹಾರ್ಮೋನ್ ಇನ್ ಬ್ಯಾಲೆನ್ಸ್ ಆಗಿ ಆ ಹುಡುಗಿಯಲ್ಲಿ ಕೋಪ, ದ್ವೇಷ ಮನೆ ಮಾಡುತ್ತದೆ. ಅದು ಮುಂದೆ ಹೇಗೆ ದೇವಿಯ ರೂಪದಲ್ಲಿ ಬದಲಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಇದರಜತೆ ನಾಲ್ಕನೇ ಚಿತ್ರವೇ ಹೋಲಿ ಡೇ. ಇದೊಂದು ಇಂಗ್ಲೀಷ್ ಚಿತ್ರವಾಗಿದ್ದು, ಇದರಲ್ಲಿ ಚಿಕ್ಕ ಪಾತ್ರ ಮಾಡಿದ್ದಾರೆ. ಸದ್ಯ ಛಾಯಾದೇವಿ ಈಗ ದೇವಿ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದು, ತನ್ನ ಪ್ರತಿಭೆಗೆ ತಕ್ಕ ಅವಕಾಶಗಳು ಸಿಗುವ ನೀರೀಕ್ಷೆಯಲ್ಲಿದ್ದಾರೆ.












































