
ಬಿಗ್ಬಾಸ್ ಶೋ ನಂತರದಲ್ಲಿ ಅನುಪಮಾ ಗೌಡ ಚಿತ್ರರಂಗದಲ್ಲಿ ಶೈನಪ್ ಆಗುತ್ತಿದ್ದಾಳೆ. ಈಕೆ ಬಿಗ್ಬಾಸ್ ಸ್ಪರ್ಧಿಯಾಗಿ ಬಂದ ನಂತರ ದಯಾಳ್ ಪದ್ಮನಾಭನ್ ನಿರ್ದೇಶನದ ಆ ಕರಾಳ ರಾತ್ರಿ ಚಿತ್ರದಲ್ಲಿ ನಟಿಸಿದ್ದಳು. ಇದರಲ್ಲಿನ ನಟನೆಯಿಂದ ಮೆಚ್ಚುಗೆ ಗಳಿಸಿಕೊಂಡಿದ್ದ ಅನುಪಮಾ ಈಗ ತ್ರಯಂಬಕಂ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾಳೆ.
ತ್ರಯಂಬಕಂ ಚಿತ್ರವನ್ನೂ ದಯಾಳ್ ಪದ್ಮನಾಭನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್ ಮತ್ತು ರೋಹಿತ್ ಜೊತೆ ಅನುಪಮಾ ಕೂಡಾ ನಟಿಸುತ್ತಿದ್ದಾಳೆ. ಆ ಕರಾಳ ರಾತ್ರಿ ಚಿತ್ರದಲ್ಲಿ ರೆಟ್ರೋ ಲುಕ್ಕಿನಲ್ಲಿ ಅಮೋಘವಾಗಿ ನಟಿಸಿದ್ದ ಈಕೆಗೆ ಈ ಚಿತ್ರದಲ್ಲಿಯೂ ವಿಶಿಷ್ಟ ಪಾತ್ರವೇ ಸಿಕ್ಕಿದೆಯಂತೆ.
ಸಾಮಾನ್ಯವಾಗಿ ನಾಲ್ಕು ಗೋಡೆಗಳ ಮಧ್ಯದ ಲೊಕೇಶೆನ್ನಿನಲ್ಲಿಯೇ ಚಿತ್ರೀಕರಣ ಮುಗಿಸಿಕೊಳ್ಳೋದು ದಯಾಳ್ ಸ್ಟೈಲು. ಆದರೀಸಲ ಅವರ ಹೊರಾಂಗಣದತ್ತಲೂ ಕಣ್ಣು ನೆಟ್ಟಂತಿದೆ. ಅದರ ಫಲವಾಗಿಯೇ ಅಂತರಗಂಗೆ ಬೆಟ್ಟದ ತಪ್ಪಲಿನಲ್ಲೀಗ ತ್ರಯಂಬಕಂ ಚಿತ್ರೀಕರಣ ನಡೆಯುತ್ತಿದೆ. ಊಈ ಬಗೆಗಿನ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿರುವ ಅನುಪಮಾ, ರಾತ್ರಿ ಹನ್ನೊಂದು ಘಂಟೆಯಾದರೂ ಚಿತ್ರೀಕರಣ ಚಾಲ್ತಿಯಲ್ಲಿದೆ ಅಂತ ಬರೆದುಕೊಂಡಿದ್ದಾಳೆ.
ದಯಾಳ್ ಪದ್ಮನಾಭನ್ ವಿಶಿಷ್ಟವಾದ ಕಥೆಗಳನ್ನೇ ಈವರೆಗೂ ಆರಿಸಿಕೊಂಡು ಬಂದಿದ್ದಾರೆ. ತ್ರಯಂಬಕಂ ಕೂಡಾ ಅಂಥಾದ್ದೇ ಕಥೆ ಹೊಂದಿದೆಯಂತೆ. ತುಂಬಾ ವರ್ಷಗಳ ನಂತರ ರಾ ಘವೇಂದ್ರ ರಾಜ್ ಕುಮಾರ್ ಈ ಚಿತ್ರದ ಮೂಲಕವೇ ಮತ್ತೆ ನಟನೆಯತ್ತ ಮರಳಿದ್ದಾರೆ. ಇದೂ ಸೇರಿದಂತೆ ತ್ರಯಂಬಕಂ ಪ್ರೇಕ್ಷಕರ ದೃಷ್ಟಿಯನ್ನು ತನ್ನತ್ತ ಕೀಲಿಸಿಕೊಂಡಿದೆ.
#












































