
ಸ್ಯಾಂಡಲ್ವುಡ್ನಲ್ಲೀಗ ಭರಪೂರ ಹೊಸ ಜಾನರ್ ಚಿತ್ರಗಳ ಯುಗ ಪ್ರಾರಂಭವಾಗಿದೆ. ಒಂದು ಕಡೆಯಲ್ಲಿ ಸ್ಟಾರ್ನಟರು ಸ್ಟಾರ್ಡಂ ಇಮೇಜಿನ ಫ್ಯಾನ್ಸ್ ಇಷ್ಟಪಡುವ ಮಸಾಲಾ ಚಿತ್ರಗಳಲ್ಲಿ ತೊಡಗಿಕೊಂಡು ಕನ್ನಡಚಿತ್ರಗಳ ಕಮರ್ಷಿಯಲ್ ಬ್ಯುಸಿನೆಸ್ ವಿಸ್ತರಣೆಯಲ್ಲಿ ತೊಡಗಿಕೊಂಡಿದ್ದರೆ, ಇನ್ನೊಂದು ಕಡೆಯಲ್ಲಿ ಹೊಸ ತಲೆಮಾರಿನ ನಿರ್ದೇಶಕರು ನಟರು ಹೊಸ ಆಲೋಚನೆಗಳು, ಹೊಸ ಆಲೋಚನೆಗಳೊಡನೆ ಸ್ಯಾಂಡಲ್ವುಡ್ ಚಿತ್ರಗಳನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯಲು ಮುನ್ನುಗ್ಗುತ್ತಿದ್ದಾರೆ. ಅಂಥದೊಂದು ಪ್ರಯತ್ನಗಳಲ್ಲಿ ಪ್ರತಿಭಾವಂತ ನಿರ್ದೇಶಕ ಜಯತೀರ್ಥ ನಿರ್ದೇಶನದ ಬೆಲ್ ಬಾಟಂ ಚಿತ್ರ ಇತ್ತೀಚಿನ ದಿನಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ.
ಕನ್ನಡ ಚಿತ್ರರಂಗದಲ್ಲಿ ದಿಢೀರನೆ ಪ್ರತ್ಯಕ್ಷವಾಗಿ ಪ್ರಕಾಶಮಾನವಾಗಿ ಬೆಳೆಯುತ್ತಿರೋರಲ್ಲಿ ನಿರ್ದೇಶಕ ಕಂ ನಟ ರಿಷಬ್ ಶೆಟ್ಟಿ ಕೂಡಾ ಒಬ್ಬರು. ‘ಯಾರೋ ಕರಾವಳಿ ಹಜುಡುಗನಂತೆ. ಒಳ್ಳೇ ಟ್ಯಾಲೆಂಟೆಡ್ ಥರಾ ಕಾಣಿಸ್ತಿದಾರೆ’ ಅನ್ನೋ ಮಾತು ಕೇಳಿಬಂದಿದ್ದು ಉಳಿದವರು ಕಂಡಂತೆ ಮತ್ತು ಇತರೆ ಸಿನಿಮಾಗಳಲ್ಲಿ ರಿಷಬ್ ನಟಿಸಿದಾಗ. ‘ರಿಕ್ಕಿ’ಯ ಮೂಲಕ ನಿರ್ದೇಶನ ಆರಂಭಿಸಿದಾಗ ‘ಪರವಾಗಿಲ್ಲ… ಡೈರೆಕ್ಟರ್ ಆಗಿ ಕೂಡಾ ನೆಲೆ ನಿಲ್ಲೋದು ಗ್ಯಾರೆಂಟಿ’ ಅಂತಾ ಖುದ್ದು ಗಾಂಧೀನಗರ ತೀರ್ಪು ನೀಡಿತ್ತು. ಅದಾಗಿ ‘ಕಿರಿಕ್ ಪಾರ್ಟಿ’ಯ ಮೂಲಕ ಇಡೀ ಯುವ ಸಮೂಹವನ್ನು ತಮ್ಮತ್ತ ಸೆಳೆದುಕೊಂಡರಲ್ಲಾ? ಆಗ ಪಕ್ಕಾ ಆಗಿದ್ದೇನೆಂದರೆ, ರಿಷಬ್ ನಟನೆ ಮತ್ತು ನಿರ್ದೇಶನ ಎರಡರಲ್ಲೂ ಪಳಗಿದ್ದಾರೆ. ಕನ್ನಡ ಸಿನಿಮಾರಂಗಕ್ಕೆ ರಿಷಬ್ ವರವಾಗೋದು ಗ್ಯಾರೆಂಟಿ ಅನ್ನೋದು.
ಸದ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅನ್ನೋ ಸಿನಿಮಾದ ಮೂಲಕ “ಸಿನಿಮಾವೊಂದು ಗೆಲ್ಲೋಕೆ ಸೂಪರ್ ಸ್ಟಾರ್ಗಳೇ ಬೇಕಿಲ್ಲ. ಒಂದೊಳ್ಳೆ ಸಂದೇಶವಿರುವ ಕಥೆಯನ್ನು ಜನಕ್ಕೆ ಬೇಕಾದಂತೆ ರೂಪಿಸಿದರೆ ಸಾಕು” ಅನ್ನೋದನ್ನು ಸಾಕ್ಷೀಕರಿಸಿದರು. ಸದ್ಯ ರಿಷಬ್ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಷ್ಟರ ಮಟ್ಟಿಗೆ ಟಾಕ್ ಕ್ರಿಯೇಟ್ ಆಗಿದೆ. ರಿಷಬ್ ಒಂದು ಸಿನಿಮಾವನ್ನು ನಿರ್ದೇಶನ ಮಾಡಿದರೂ ಸರಿ, ನಟಿಸಿದರೂ ಸರಿ ಅದರಲ್ಲೇನೋ ಇರುತ್ತದೆ ಅನ್ನೋದಂತೂ ಕನ್ಫರ್ಮ್ ಆಗಿದೆ. ಹೀಗಿರುವಾಗ ರಿಷಬ್ ಜಯತೀರ್ಥ ನಿರ್ದೇಶನದಲ್ಲಿ ಬೆಲ್ ಬಾಟಮ್ ತೊಟ್ಟಿರೋದರ ಕುರಿತು ಕ್ಯೂರಿಯಾಸಿಟಿ ಸೃಷ್ಟಿಯಾಗಿದೆ. ಅದು ಯಾವ ಕಾರಣಕ್ಕೆ ಅನ್ನೋದು ಇಷ್ಟರಲ್ಲೇ ತೆರೆಗೆ ಬರೋ ಸಿನಿಮಾದಲ್ಲಿ ಗೊತ್ತಾಗಲಿದೆ.
#











































