ತಲೆ ಮಾಂಸ-ನೂರು ಕುರಿ ಕೇಳಿದ್ದು ಯಾರು ಅಂತಾ ಹೇಳ್ತೀರಾ ಸ್ವಾಮಿ?

Picture of Cinibuzz

Cinibuzz

Bureau Report

ಜಗ್ಗೇಶ್ ಅದ್ಭುತ ನಟ ಎಂಬುದರ ಬಗ್ಗೆ ಎರಡು ಮಾತಿಲ್ಲ. ಅವರ ಡೈಲಾಗ್ ಡೆಲಿವರಿ ಮತ್ತು ಕಾಮಿಡಿ ಟೈಮಿಂಗ್ ಅನ್ನು ಯಾರಿಂದಲೂ ಅಷ್ಟು ಸುಲಭಕ್ಕೆ ಅನುಕರಿಸಲು ಸಾಧ್ಯವಿಲ್ಲ. ಜಗ್ಗೇಶ್ ಹೇಗೆ ಅಪರೂಪದ ಕಲಾವಿದನೋ ಹಾಗೇ ಆತ ಭಯಂಕರ ಹುಂಬ, ಬಾಯಲ್ಲೇ ಬಾಂಬು ಸಿಡಿಸುವ ಆಸಾಮಿ ಎನ್ನುವುದಕ್ಕೂ ಚಿತ್ರರಂಗದಲ್ಲಿ ಹಲವಾರು ನಿದರ್ಶನಗಳಿವೆ. ದರ್ಶನ್ ಅವರ ಬಗ್ಗೆ ಹೊಗಳಿ ಪಬ್ಲಿಸಿಟಿ ಗಿಟ್ಟಿಸುವ, ಜೈಕಾರ ಹಾಕಿಸಿಕೊಳ್ಳುವ ಜಗ್ಗೇಶ್ ಅವರ ಎರಡು ತಲೆ ಬುದ್ಧಿಯೀಗ ಸಾಕ್ಷಿ ಸಮೇತ ಸಿಕ್ಕಿಬಿದ್ದಿದೆ. ನಿಜವಾದ ಅಭಿಮಾನಕ್ಕೆ ಅರ್ಥ ತಂದುಕೊಟ್ಟಿರುವ ದರ್ಶನ್‌ ಅಭಿಮಾನಿಗಳ ಬಗ್ಗೆಯೇ ಇಲ್ಲಸಲ್ಲದ ಮಾತಾಡಿಬಿಟ್ಟಿದ್ದಾರೆ…!

ವೇದಿಕೆ ಮೇಲೆ ನಿಂತು ಗಂಟೆಗಟ್ಟಲೆ ಪರ್ಸನಾಲಿಟಿ ಡೆವಲಪ್ ಮೆಂಟ್ ಸ್ಪೀಚು ಕೊಡುವ, ತಮ್ಮ ಹಳೇ ಕಷ್ಟದ ದಿನಗಳಿಗೆ ಇನ್ನೊಂದಿಷ್ಟು ಉಪ್ಪು ಹುಳಿ ಖಾರ ಸೇರಿಸಿ ರಸವತ್ತಾಗಿ ಭಾಷಣ ಬಿಗಿಯುವುದರಲ್ಲಿ ನವರಸನಾಯಕ ಜಗ್ಗೇಶ್ ಸಿಕ್ಕಾಪಟ್ಟೆ ಫೇಮಸ್ಸು. ಎಂಥವರೂ ಮರುಳಾಗುವಂತೆ ಮಾತಾಡುವ ಜಗ್ಗೇಶ್ ಗೆ ಅದೇ ಮಾತೆಂಬುದು ಹಲವು ಸಲ ಹಳ್ಳ ತೋಡಿದ್ದಿದೆ. ಜಗ್ಗೇಶ್ ಪಾಲಿಗೆ ಮಾತೆಂಬುದು ಶಕ್ತಿಯೂ ಹೌದು, ಮಹಾ ವೀಕ್ ನೆಸ್ಸೂ ಹೌದು.

ಹಿಂದೊಮ್ಮೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ʻಇಂಡಿಯಾದವರೆಲ್ಲಾ ಒಟ್ಟಾಗಿ ನಿಂತು ಉಚ್ಚೆ ಹೊಯ್ದರೆ ಪಾಕಿಸ್ತಾನವನ್ನು ಮುಳುಗಿಸಿಬಿಡಬಹುದುʼ ಎಂಬ ಹೇಳಿಕೆ ನೀಡಿ ವಿವಾದಕ್ಕೆ ತುತ್ತಾಗಿದ್ದರು. ರಾಜಕೀಯ ಮತ್ತು ಸಿನಿಮಾ ವಲಯದಲ್ಲಿ ಜಗ್ಗೇಶ್ ಇಂಥ ಯಡವಟ್ಟು ಮಾತುಗಳನ್ನು ಆಡುತ್ತಿರುತ್ತಾರೆ. ಈಗ ರಿಲೀಸಾಗಿರುವ ಆಡಿಯೋವೊಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳನ್ನು ಕೆರಳಿಸುವಂತಿದೆ. ಇನ್ಸ್ ಪೆಕ್ಟರ್ ವಿಕ್ರಂ ಚಿತ್ರದ ನಿರ್ಮಾಪಕ ವಿಖ್ಯಾತ್ ಜೊತೆಗೆ ಫೋನಿನಲ್ಲಿ ನಡೆಸಿರುವ ಸಂಭಾಷಣೆಯದು.

ʻʻಹೊಸದಿಗಂತ ಪಕ್ಕಾ ಆರೆಸ್ಸೆಸ್ ಪತ್ರಿಕೆ. ಕನ್ನಡಪ್ರಭ, ಪ್ರಜಾವಾಣಿ ಇವರೆಲ್ಲರಿಗಿಂತ ಹೆಚ್ಚಿನ ರೀತಿಯಲ್ಲಿ ಜನ ನೋಡುವಂಥ ಮತ್ತು ನಂಬುವಂಥ ಪತ್ರಿಕೆ ಅದು. ಇದರಲ್ಲಿ ಒಂದೇ ಒಂದು ಅಪಭ್ರಂಶ ಪದ ಇರೋದಿಲ್ಲ. ತುಂಬಾ ಡೀಸೆಂಟು. ನಮ್ಮನೆಯವರು ಈ ಪವರ್ ಫುಲ್ ಪತ್ರಿಕೆಗೆ ಹೆಲ್ತ್ ಬಗ್ಗೆ ಬರೀತಾರೆ. ಈ ಪತ್ರಿಕೆಗೆ ಜಾಹೀರಾತು ಕೊಡೋದನ್ನು ಮಿಸ್ ಮಾಡಬೇಡ. ಅದನ್ನ ಅವಾಯ್ಡ್ ಮಾಡಕ್ಕೆ ಅವರು ಚೂತ್ಯಾ ಥರ ಮಾತಾಡಿದಾರೆ. ಇನ್ನೊಬ್ಬ ನಮ್ಮ ಕಡೆ ಹುಡುಗ ಇದಾನೆ ಆನ್ ಲೈನ್ ಹುಡುಗ. ಮದುವೆ ಆಗಿ ಸಪರೇಟು ಸಂಸಾರ ಮಾಡ್ತಿದಾನೆ. ಒಳ್ಳೇ ಹಾರ್ಡ್ ವರ್ಕರು. ನಮ್ಮತ್ರ ಇರೋರೆಲ್ಲಾ ಅಂತೋರೇನೆ. ಬಟ್…  ದರ್ಶನ್ ಥರ ಅವುರ್ ಥರಾ ಇದಾರಲ್ಲಾ? ಅವನಮ್ಮುನ್ ತಲೆ ಮಾಂಸ ಕಳಿಸಿ ಅಣ್ಣಾ…. ನೂರ್ ಕುರಿ ಕಳಿಸಿ ಅಂತಣ್ಣಾ ಅನ್ನೋರೆಲ್ಲಾ ಇಲ್ಲ….ʼʼ ಅಂತಾ ಯದ್ವಾ ತದ್ವಾ ಮಾತಾಡಿಬಿಟ್ಟಿದ್ದಾರೆ.

ಸ್ವಾಮಿ ಜಗ್ಗೇಶು… ನೀವು ಸಿನಿಮಾ ಮಂದಿಗಾಗಲಿ, ನಿಮ್ಮನ್ನು ನಂಬಿ ಮತ ಹಾಕಿದ ಕ್ಷೇತ್ರದ ಜನತೆಗಾಗಲಿ ಏನು ಮಾಡಿದ್ದೀರ ಅಂತಾ ಜಗತ್ತಿಗೇ ಗೊತ್ತು. ಪ್ರತಿಯೊಂದರಲ್ಲೂ ಲಾಭವನ್ನೇ ಉದ್ದೇಶವನ್ನಾಗಿಸಿಕೊಂಡಿರುವ ನೀವು ಕೊರೋನಾ ಸಂದರ್ಭದಲ್ಲಿ ಎಷ್ಟು ಜನಕ್ಕೆ ಅನ್ನಾಹಾರ ನೀಡಿದಿರಿ? ಕಷ್ಟದಲ್ಲಿರುವ ಕಲಾವಿದರಿಗೆ ಯಾವ ಬಗೆಯಲ್ಲಿ ಸಹಕರಿಸಿದ್ದೀರಿ. ನೀವು ಒಳ್ಳೇ ನಟ ಅನ್ನೋ ಕಾರಣಕ್ಕಷ್ಟೇ ಜನ ನಿಮ್ಮನ್ನು ಪ್ರೀತಿಸೋದು, ಗೌರವ ನೀಡೋದು. ದರ್ಶನ್ ಅವರ ಅಭಿಮಾನಿಗಳ ಬಗ್ಗೆ ನೀವೆಷ್ಟು ತಿಳಿದುಕೊಂಡಿದ್ದೀರ? ಡಿ ಕಂಪೆನಿ ಬಗ್ಗೆ ನೀವು ಕೇಳಿಲ್ಲವಾ? ದರ್ಶನ್ ಮತ್ತು ದಿನಕರ್ ಅವರ ಅಭಿಮಾನಿಗಳೆಲ್ಲಾ ಸೇರಿ ನಡೆಸುತ್ತಿರುವ ನೋಂದಾಯಿತ ಸಂಘ ‘ಡಿ ಕಂಪೆನಿ’. ಕರ್ನಾಟಕದ ಇಪ್ಪತ್ತು ಜಿಲ್ಲೆಗಳಲ್ಲಿ ಸದ್ಯ ‘ಡಿ ಕಂಪೆನಿ’ ಕಾರ್ಯ ನಿರ್ವಹಿಸುತ್ತಿದೆ.

ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಾ, ಜನಪರ ಕಾರ್ಯಗಳಲ್ಲಿ ತೊಡಗಿಕೊಂಡಿರುವ ‘ಡಿ ಕಂಪೆನಿ’ ಹಲವಾರು ಸಾಮಾಜಿಕ ಜವಾಬ್ದಾರಿಯ ಕೆಲಸಗಳನ್ನು ನಡೆಸುತ್ತಲೇ ಬಂದಿದೆ. ಶಾಲೆಗಳನ್ನು ದತ್ತು ತೆಗೆದುಕೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.  ವಿದ್ಯಾವಂತ ಹುಡುಗರ ಪಡೆ ದರ್ಶನ್ ಅವರ ಮೇಲಿನ ಪ್ರೀತಿಗಾಗಿ ಎಷ್ಟೆಲ್ಲಾ ಶ್ರಮಿಸುತ್ತಿದ್ದಾರೆ. ಯಾವ ಪ್ರಚಾರವನ್ನೂ ಪಡೆಯದೆ ದುಡಿಯುತ್ತಿದ್ದಾರೆ ಅಂತಾ ನಿಮ್ಮಂತಾ ಬರುಡೆ ಆಸಾಮಿಗಳಿಗೆ ಹೇಗೆ ತಾನೆ ಗೊತ್ತಾಗಲು ಸಾಧ್ಯ? ನಿಮ್ಮ ಹತ್ತಿರ ಬಂದು ತಲೆ ಮಾಂಸ, ಕುರಿ, ಮೇಕೆ ಕೇಳಿದ್ದು ಯಾರು ಅಂತಾ ನೀವು ಹೇಳಬಲ್ಲಿರಾ? ಅಥವಾ ಸುಖಾಸುಮ್ಮನೆ ಗೂಬೆ ಕೂರಿಸುವ ಉದ್ದೇಶದಿಂದಷ್ಟೇ ಹೀಗೆ ಅಪಪ್ರಚಾರ ಮಾಡುತ್ತಿದ್ದೀರಾ?

ನಿಮಗೆ ಆರೆಸ್ಸೆಸ್ ಅಥವಾ ಮತ್ಯಾವುದೋ ಸಂಘಟನೆ, ಪಕ್ಷದ ಮೇಲೆ ಅಭಿಮಾನವಿರಲಿ. ಅದನ್ನು ಯಾರೂ ಬೇಡ ಅನ್ನುತ್ತಿಲ್ಲ. ಒಬ್ಬರನ್ನು ಹೊಗಳುವ ಭರದಲ್ಲಿ ದೊಡ್ಡ ಸಮೂಹದ ಮನಸ್ಸಿನ ಮೇಲೆ ಕಲ್ಲೆಸೆಯಬೇಡಿ ಸ್ವಾಮಿ…

ಬಹುಶಃ ಎಣ್ಣೆ ಏಟಿನಲ್ಲಿ ಓತಪ್ರೋತವಾಗಿ ಮಾತಾಡಿ ಪೇಚಿಗೆ ಸಿಲುಕಿರುವ ಜಗ್ಗೇಶ್,  ಈಗ ಆಡಿಯೋ ಲೀಕ್ ಆಗಿರುವ ವಿಚಾರ ತಿಳಿದು ಕಕ್ಕಾಬಿಕ್ಕಿಯಾಗಿದ್ದಾರೆ. ತೋತಾಪುರಿ ಚಿತ್ರದ ಶೂಟಿಂಗಲ್ಲಿ ಭಾಗವಹಿಸಿದ್ದ ಮಿಸ್ಟರ್ ನವರಸ, ಮುಖಕ್ಕೆ ಹಚ್ಚಿದ್ದ ಮೇಕಪ್ಪನ್ನು ಎಡಗೈಲಿ ಒರೆಸಿಕೊಂಡು ದಢಾರಂತಾ ಬೆಂಗಳೂರಿಗೆ ಓಡಿ ಬಂದಿದ್ದಾರೆ. ಮೊದಲೇ ದರ್ಶನ್ ಅವರ ಬಳಿ ಅಪಾಲಜಿ ಕೇಳಲು ಮೇಲಿಂದ ಮೇಲೆ ಕರೆ ಮಾಡಿದರೂ ದಾಸ ಫೋನು ತೆಗೆಯುವ ಮನಸ್ಸು ಮಾಡಿಲ್ಲ. ಯಾಕೆಂದರೆ, ಅದಾಗಲೇ ಅವರಿಗೂ ಈ ಆಡಿಯೋ ತಲುಪಿಯಾಗಿದೆ.. ಜಗ್ಗೇಶ್‌ ಎಂಥಾ ಡಬಲ್‌ ಗೇಮ್‌ ಗಿರಾಕಿ ಅನ್ನೋದು ದರ್ಶನ್‌ ಅವರಿಗೆ ಅಗ್ರಜ ಸಂದರ್ಭದಲ್ಲೇ ಕರಾರುವಕ್ಕಾಗಿ ತಿಳಿದಿದೆ. ಸದ್ಯ ತಿರುಪತಿ ದರ್ಶನ ಮುಗಿಸಿ ವಾಪಾಸು ಬರುತ್ತಿರುವ ದಚ್ಚು ನಾಳೆ ಏನು ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ!!

ಜಗ್ಗಣ್ಣನ ಚೀಪ್‌ ಮೆಂಟಾಲಿಟಿಯನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದೇ ದರ್ಶನ್‌ ಅಭಿಮಾನಿಗಳು ಮನ್ನಿಸಿ ಸುಮ್ಮನಾಗಲಿ ಅನ್ನೋದು ನಮ್ಮ ಬಯಕೆ…

ಇನ್ನಷ್ಟು ಓದಿರಿ

Scroll to Top