ಕನ್ನಡ ಸಿನಿಮಾ ರಂಗದಲ್ಲಿ ಕವಿರತ್ನ ಅಂತಲೇ ಹೆಸರುವಾಸಿಯಾಗಿರುವ ಡಾ. ವಿ. ನಾಗೇಂದ್ರ ಪ್ರಸಾದ್ ಅವರ ಅಕ್ಷರಗಳ ಟಂಕಸಾಲೆಯಲ್ಲಿ ಮಾತ್ರ ಇಂಥಾ ಸಾಲುಗಳು ಜನ್ಮತಳೆಯಲು ಸಾಧ್ಯವಾ? ಅದೆಲ್ಲಿಂದ ಪದಗಳನ್ನು ಹುಡುಕೀ ಹುಡುಕಿ ಇಷ್ಟು ಚೆಂದದ ಸಾಹಿತ್ಯ ರಚಿಸುತ್ತಾರೋ?
ಭುವನ ಗಾತ್ರ, ಜ್ವಲನ ನೇತ್ರ, ಗಹನ ಪಾತ್ರ, ಘನವನ ಧೀರ…ದಹನ ಗೋಲ, ದಮನ ಕಾಲ, ಧರಣಿ ಲೀಲ, ಜಯ ಜಯ ಶೂರ…. ಓಂಕಾರ, ಕ್ರೀಂಕಾರ, ಬೀಜಾಕ್ಷರಾಯ, ನೀ ಬಂದರೆ, ಕಂಟಕ ಮಂಗಮಾಯ…. ಭಜರಂಗಿ-೨ ಚಿತ್ರಕ್ಕಾಗಿ ನಾಗೇಂದ್ರ ಪ್ರಸಾದ್ ಬರೆದಿರುವ ಹಾಡಿನ ಆರಂಭದ ಸಾಲುಗಳಿವು. ಇಂಥ ಪವರ್ ಫುಲ್ ಸಾಹಿತ್ಯಕ್ಕೆ ಅರ್ಜುನ್ ಜನ್ಯಾ ನೀಡಿರುವ ಟ್ಯೂನು ಸೇರಿಕೊಂಡು ಕೇಳಿದವರ ನರನಾಡಿಗಳಲ್ಲಿ ಮಿಂಚಿನ ಸಂಚಾರವಾಗಿ, ಅಕ್ಷರಶಃ ರೋಮಾಂಚನದ ಅನುಭವ ನೀಡುತ್ತಿದೆ.

ತಿಂಗಳ ಮುಂಚೆಯಷ್ಟೇ ಭಜರಂಗಿ-೨ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತು. ಜಯಣ್ಣ ಫಿಲಂಸ್ ನಲ್ಲಿ ಜಯಣ್ಣ ಮತ್ತು ಭೋಗೇಂದ್ರ ಸೇರಿ ನಿರ್ಮಿಸಿರುವ ಈ ಚಿತ್ರ 2021ರಲ್ಲಿ ಅಗಾಧವಾದ ಸೌಂಡು ಮಾಡುವ ಸೂಚನೆಯನ್ನು ಈ ಮೋಷನ್ ಪೋಸ್ಟರ್ ನೀಡಿತ್ತು. ನಿರ್ದೇಶಕ ಎ. ಹರ್ಷ ಈವರೆಗೆ ರೂಪಿಸಿರುವ ಎಲ್ಲ ಸಿನಿಮಾಗಳೂ, ತಾಂತ್ರಿಕತೆಯಲ್ಲಿ ಮತ್ತು ಕಂಟೆಂಟ್ ವಿಚಾರದಲ್ಲಿ ಸ್ಟ್ರಾಂಗ್ ಆಗೇ ಮೂಡಿಬಂದಿದೆ. ಈ ಸಲ ಹಾಲಿವುಡ್ ರೇಂಜಿಗೆ ಚಿತ್ರ ತಯಾರಾಗಿದೆ ಅನ್ನೋದನ್ನು ಸ್ವತಃ ಮೋಷನ್ ಪೋಸ್ಟರ್ ಮತ್ತು ಈಗ ಬಿಡುಗಡೆಯಾಗಿರುವ ಹಾಡು ಎತ್ತಿ ಹಿಡಿಯುತ್ತಿದೆ. ಕೆಲ ತಿಂಗಳ ಹಿಂದೆ ಶಿವಣ್ಣ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ ಟೀಸರ್ ಕೂಡಾ ದೊಡ್ಡ ಮಟ್ಟದಲ್ಲಿ ಜನರನ್ನು ಸೆಳೆದಿತ್ತು. ಈ ಹಾಡಿನ ಲಿರಿಕಲ್ ವಿಡಿಯೋ ನೋಡಿದವರೆಲ್ಲಾ ನಿಜಕ್ಕೂ ದಂಗಾಗಿದ್ದಾರೆ.

ರವಿ ಸಂತೇಹಕ್ಲು ಕಲಾ ನಿರ್ದೇಶನ, ಸ್ವಾಮಿ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಸಂಗೀತ, ದೀಪು ಎಸ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ. ಈ ಹಿಂದೆ ತೆರೆಗೆ ಬಂದಿದ್ದ ಭಜರಂಗಿ ಚಿತ್ರ ಸೂಪರ್ ಹಿಟ್ ಆಗಿತ್ತು. ನಟ ಲೋಕಿಗೆ ವಿಲನ್ ಆಗಿ ಬ್ರೇಕ್ ನೀಡಿತ್ತು. ಈ ಸಲ ಭಜರಂಗಿ -೨ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರ ಲುಕ್ಕು, ಖದರ್ರೇ ಬೇರೆ ಇದೆಯಂತೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಭಜರಂಗಿ-೨ ಮುಖ್ಯವಾಗಿದ್ದು ಇಷ್ಟರಲ್ಲೇ ತೆರೆಗೆ ಬರಲಿದೆ..!











































