ಮಾರಣಾಂತಿಕ ಹಲ್ಲೆ ಅಂದರೇನು ಅಹೋರಾತ್ರ?!

Picture of Cinibuzz

Cinibuzz

Bureau Report

ಸಾಮಾಜಿಕ ಕಾರ್ಯಕರ್ತ, ಜ್ಯೋತಿಷಿ, ಆಧ್ಯಾತ್ಮ ಚಿಂತಕ ಎಂಬಿತ್ಯಾದಿಯಾಗಿ ಗುರುತಿಸಿಕೊಂಡಿರುವ ನಟೇಶ ಪೋಲಪಳ್ಳಿ ಅಲಿಯಾಸ್‌ ಅಹೋರಾತ್ರ ಮತ್ತು ಕಿಚ್ಚ ಸುದೀಪ್‌ ಅಭಿಮಾನಿಗಳ ನಡುವಿನ ಮಾತಿನ ಚಕಮಕಿಯ ವಿಚಾರವನ್ನು ಮೊಟ್ಟಮೊದಲಿಗೆ ಸುದ್ದಿ ಮಾಡಿದ್ದು ಸಿನಿಬಜ಼್. ನಾಲ್ಕಾರು ಕೃತಿಗಳನ್ನು ಬರೆದು, ವ್ಯಕ್ತಿತ್ವ ವಿಕಸನದ ಬಗ್ಗೆ ಮಾತಾಡುವ, ಮರಗಳನ್ನು ಉಳಿಸುವ ಕೆಲಸ ಮಾಡುತ್ತಾರೆ ಅನ್ನೋ ಕಾರಣಕ್ಕೆ ಅಹೋರಾತ್ರನ ಬಗ್ಗೆ ಕೆಲವರಿಗೆ ಗೌರವ ಇದ್ದದ್ದು ನಿಜ. ಆದರೆ ನಿನ್ನೆ ರಾತ್ರಿಯಿಂದ ಅಹೋರಾತ್ರ ನಡೆದುಕೊಳ್ಳುತ್ತಿರುವ ರೀತಿ, ಅತಿರೇಕಗಳನ್ನು ನೋಡಿದರೆ, ಈ ಗಿರಾಕಿಯ ಅಸಲೀ ಉದ್ದೇಶವೇ ಬೇರೆ ಇದೆ ಅಂತಾ ಅನ್ನಿಸಲು ಶುರುವಾಗಿದೆ.

ಬೇಕಂತಲೇ ಕಿಚ್ಚನನ್ನು ಕಿಚಾಯಿಸಿ, ಅವರ ಅಭಿಮಾನಿಗಳು ತಮ್ಮ ಮನೆ ಬಾಗಿಲಿಗೆ ಬರಲಿ ಅಂತಾ ಅಹೋರಾತ್ರ ಕಾದು ಕುಳಿತಿದ್ದರಾ ಅನ್ನಿಸುವಷ್ಟರ ಮಟ್ಟಿಗೆ ಇವರ ನಡವಳಿಕೆ ಕೃತಕವಾಗಿದೆ. ನಿನ್ನೆ ಕಿಚ್ಚ ಸುದೀಪ ಅಭಿಮಾನಿಗಳು ತನ್ನ ಮನೆ ಮುಂದೆ ಬಂದಾಗ ಫೇಸ್‌ ಬುಕ್‌ ಲೈವ್‌ ಬಿಟ್ಟು ತಮ್ಮಿಷ್ಟಕ್ಕೆ ಅಹೋರಾತ್ರ ಮತ್ತು ಆತನ ಶಿಷ್ಯ ಪಡೆ ಆರೋಪ ಮಾಡುತ್ತಾ ಬಂತು.  ಸೂಕ್ಷ್ಮವಾಗಿ ಗಮನಿಸಿದರೆ ಅಹೋರಾತ್ರನ ಮನೆ ಮುಂದೆ ಬಂದು ಸಮಾಧಾನವಾಗಿ ವಿನಂತಿ ಮಾಡಲು ಬಂದವರನ್ನು ಆಹೋರಾತ್ರ ಮತ್ತು ಈತನ ಶಿಷ್ಯ ಶ್ರೀ ಚರಣ ಎಂಬಾತ ಬೇಕುಬೇಕಂತಲೇ ಪ್ರಚೋದಿಸಿದ್ದು ಎದ್ದು ಕಾಣುತ್ತದೆ.

ಜೀವಕ್ಕಿಂತಾ ಹೆಚ್ಚು ಪ್ರೀತಿಸುವ ಕಲಾವಿದನನ್ನು ಇವರಿಬ್ಬರೂ ಪದೇ ಪದೆ ಷಂಡ ಎಂದು ಸಂಬೋಧಿಸುತ್ತಾರೆ. ಯಾವ ಅಭಿಮಾನಿಯಾದರೂ ಅಂತಾ ಸಂದರ್ಭದಲ್ಲಿ ಪ್ರಚೋದನೆಗೆ ಒಳಪಟ್ಟು ಆವೇಶಕ್ಕೊಳಗಾಗುವುದು ಸಹಜ. ದೇಶಾದ್ಯಂತ ಅಗಣಿತ ಅಭಿಮಾನಿಗಳನ್ನು ಹೊಂದಿರುವ, ಕರ್ನಾಟಕದ ಮನೆಮನಗಳಲ್ಲಿ ಪ್ರೀತಿ ಪಡೆದಿರುವ ಸುದೀಪ್ ರಂಥಾ ನಟನ ಬಗ್ಗೆ ಅಹೋರಾತ್ರನ ಪಿಳ್ಳೆ ಶಿಷ್ಯ ಹಾಗೆ ಅವಾಚ್ಯ ಮಾತಾಡುವುದು ಸರಿಯಾ? ಇವತ್ತು ಅಹೋರಾತ್ರ ಸುದೀಪ್‌ ಅಭಿಮಾನಿಗಳನ್ನು ಬಂಧಿಸಬೇಕು ಅಂತಾ ಹಠ ಹಿಡಿದು ಕುಳಿತಿದ್ದಾರೆ. ಪೊಲೀಸರು ಕಿಚ್ಚನ ಅಭಿಮಾನಿಗಳನ್ನು ಬಂಧಿಸುವುದೇ ಆದರೆ ಅವರ ನೆಚ್ಚಿನ ನಟನನ್ನು ವಾಚಾಮಗೋಚರವಾಗಿ ನಿಂದಿಸಿ, ಅಭಿಮಾನಿಗಳನ್ನು ಪ್ರಚೋದಿಸಿ, ಪರಿಸ್ಥಿತಿಯನ್ನು ಹದಗೆಡಿಸಿದ ಶಿಷ್ಯ ಶ್ರೀ ಚರಣ ಮತ್ತು ನಟೇಶನನ್ನೂ ಬಂಧಿಸಬೇಕಲ್ಲವಾ?

ಇಷ್ಟಕ್ಕೂ ಮತ್ತೊಂದು ವಿಡಿಯೋದಲ್ಲಿ ಕಿಚ್ಚ ಸುದೀಪ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ನವೀನ್‌ ಕುಮಾರ್‌ ಗೌಡ ʻಯಾರೂ ಕೂಗಾಡಬೇಡಿ. ನಾನು ಸಮಾಧಾನದಿಂದ ಮಾತಾಡುತ್ತೇನೆ. ನಾವು ಬಂದಿರುವುದು ಮಾತನಾಡಿ, ವಿನಿಂತಿಸಿ ಹೋಗಲಿಕ್ಕೆ. ಗಲಾಟೆ ಮಾಡಲು ಅಲ್ಲʼ ಎಂಬ ರೀತಿಯಲ್ಲಿ ತಮ್ಮ ಹಿಂಬಾಲಕರಲ್ಲಿ ಮನವಿ ಮಾಡುವುದು ಎದ್ದು ಕಾಣುತ್ತದೆ. ಇಷ್ಟಾಗಿಯೂ  ಅಹೋರಾತ್ರನ ಪಡೆಯೇ ನ್ಯೂಸೆನ್ಸ್‌ ಕ್ರಿಯೇಟ್‌ ಮಾಡಿತಾ ಎನ್ನುವ ಅನುಮಾನ ಗೋಚರಿಸುತ್ತದೆ.

ʻತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಯಿತು… ಕೊಲೆ ಮಾಡಲು ಬಂದರುʼ ಅಂತೆಲ್ಲಾ ಅಹೋರಾತ್ರ ಬಡಬಡಿಸುತ್ತಿದ್ದಾರೆ. ಮನೆಯಲ್ಲಿದ್ದ ಮೆಣಸಿನ ಪುಡಿ ಪ್ಯಾಕೇಟು ತೋರಿಸಿ ಇದನ್ನು ಸುದೀಪ್ ಅಭಿಮಾನಿಗಳು ತಂದಿದ್ದರು, ಕೈಲಿ ಚಾಕು ಹಿಡಿದು ಬಂದಿದ್ದರು ಅಂತೆಲ್ಲಾ ಸುಳ್ಳು ಹೇಳುವುದು ಸರೀನಾ ಅಹೋರಾತ್ರಿ? ಕಾನೂನು, ಪೊಲೀಸ್‌ ವ್ಯವಸ್ಥೆ ತಾವು ಹೇಳಿದ್ದನ್ನೆಲ್ಲಾ ನಂಬುವುದಿಲ್ಲ ಅನ್ನೋ ಕನಿಷ್ಟ ಪ್ರಜ್ಞೆ ಇವರಿಗೆ ಇದ್ದಂತಿಲ್ಲ.

ʻಷಂಡ ಷಂಡʼ ಅಂತಾ ಯಾವಾಗ ಚರಣ ಮತ್ತು ಅಹೋರಾತ್ರ ಕೂಗಾಡಲು ಶುರು ಮಾಡಿದರೋ ಆಗ ವ್ಯಘ್ರಗೊಂಡ ಹುಡುಗನೊಬ್ಬ ಗಾಜು ಪುಡಿ ಮಾಡುತ್ತಾನೆ ಅನ್ನೋದು ನಿಜ. ಅದು ಬಿಟ್ಟರೆ  ಇವರು ಬಡಬಡಿಸುತ್ತಿರುವ ರೀತಿಯಲ್ಲಿ ʻಮಾರಣಾಂತಿಕ ಹಲ್ಲೆʼ ಆಗಿದ್ದಕ್ಕೆ ಅಹೋರಾತ್ರನ ಬಳಿ ಸಾಕ್ಷಿಗಳಿವೆಯಾ? ಅಸಲಿಗೆ ಕಿಚ್ಚನ ಬಗ್ಗೆ ಪೂರ್ವಾಗ್ರಹ ಹೊಂದಿದವರಂತೆ ʻಸುದೀಪ ಇವರನ್ನೆಲ್ಲಾ ಕಳಿಸಿರೋದುʼ ಅಂತಾ ಹೇಳುತ್ತಿದ್ದೀರಲ್ಲಾ? ತಮ್ಮ ಹುಡುಗರನ್ನು ಕಳಿಸುವುದಾಗಿ ಸುದೀಪ್‌ ನಿಮಗೆ ಮೊದಲೇ ತಿಳಿಸಿದ್ದರಾ? ಅಥವಾ ಅವರೇ ನಿಮ್ಮ ಮನೆ ಮುಂದೆ ಬಂದು ನಿಂತಿದ್ದರಾ? ಸ್ಕಿಲ್ ಗೇಮ್‌ ವಿಚಾರ ಮುಗಿದ ನಂತರವೂ ಬಿಗ್‌ ಬಾಸ್‌ ಕಾರ್ಯಕ್ರಮ ಮತ್ತು ಕೋಟಿಗೊಬ್ಬ ಚಿತ್ರದ ಬಗ್ಗೆ ಯಾಕೆ ಪೋಸ್ಟ್‌ ಹಾಕಿದ್ದಿರಿ? ಕಳೆದೊಂದು ವರ್ಷದಿಂದ ಸುದೀಪ್‌ ಅವರನ್ನು ವಿರೋಧಿಸುತ್ತಲೇ ಅದನ್ನು ತಮ್ಮ ಜನಪ್ರಿಯತೆಗೆ ಬಳಸಿಕೊಳ್ಳಲು ಮಂದಾಗಿದ್ದು ಸರಿಯಾ ಅಂತೆಲ್ಲಾ ಸುದೀಪ್‌ ಅಭಿಮಾನಿಗಳು ಅಹೋರಾತ್ರನನ್ನು ಪ್ರಶ್ನಿಸುತ್ತಿದ್ದಾರೆ.

ನಿನ್ನೆ ಆಹೋರಾತ್ರ ಮತ್ತು ಸುದೀಪ್‌ ಅಭಿಮಾನಿಗಳ ವಿಚಾರವನ್ನು ಪ್ರಕಟಿಸಿದಾಗ ಸುದೀಪ್‌ ಅಭಿಮಾನಿ ಬಸವರಾಜ ನಾಯಕ್‌ ಸೇರಿದಂತೆ ಹಲವರು ಕೇಳಿದ ಪ್ರಶ್ನೆಗಳನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ. ಇದಕ್ಕೆ ಅಹೋರಾತ್ರ ಉತ್ತರಿಸುತ್ತಾರಾ?

  1. ನೀನು ಮಾಡಿದ ಹೋರಾಟ ರಮ್ಮಿ ವಿರುದ್ಧನಾ ಅಥವ ಸುದೀಪ್ ವಿರುದ್ಧನಾ??
  2. ರಮ್ಮಿ ಜಾಹೀರಾತಲ್ಲಿ ಅಷ್ಟು ಜನ ನಟರು ಇದ್ದರೂ ಕೂಡ ನೀನು ಸುದೀಪ್ ಅವರನ್ನೇ ಯಾಕೆ ಟಾರ್ಗೆಟ್ ಮಾಡಿದೆ???
  3. ರಮ್ಮಿ ವಿರುದ್ಧ ಹೋರಾಟ ಮಾಡೋ ನೀನು ಕೊಟಿಗೊಬ್ಭ ಫಿಲ್ಮ್, ಬಿಗ್ ಬಾಸ್ ನಾ ವಿರುದ್ಧ ಯಾಕೆ ಪೋಸ್ಟ್ ಮಾಡಿದೆ???
  4. ರಮ್ಮಿ ವಿರುದ್ದ ಹೋರಾಟದ ಹೆಸರಲ್ಲಿ ದರ್ಶನ್ ಅವರ ಫ್ಯಾನ್ಸ್ ಗು, ಸುದೀಪ್ ಫ್ಯಾನ್ಸ್ ಗು ಯಾಕೇ ಜಗಳ ತಂದು ಇಟ್ಟೆ??
  5. ಪ್ರತಿ ದಿನಾ ಸುದೀಪ್ ಅವರ ವಿರುದ್ಧವೇ ಯಾಕೆ ಪೋಸ್ಟ್ ಹಾಕಿದ???
  6. ರಮ್ಮಿ ಹೋರಾಟದ ಹೆಸರಲ್ಲಿ ಪ್ರಚಾರ ಬಿಟ್ಟು ಬೇರೆ ಯಾವುದಾದರೂ ಬ್ಯಾನ್ ಮಾಡಿಸೋಕೆ ಕೆಲಸ ಮಾಡಿದ್ದೀಯಾ??
  7. ಸುದೀಪ್ ಅವರ ವಿರುದ್ಧ ಹಿಂದಿಯಲ್ಲಿ ನಿನ್ನ ಮಗಳ ಕೈಯ್ಯಲ್ಲಿ ಯಾಕೆ ಮಾತಾಡಿಸಿದ್ದೆ???
  8. ಕನ್ನಡ ಹೀರೋ ಜೊತೆ ಕನ್ನಡ ಹೀರೋ ಬಗ್ಗೆನೇ ಫಿಟಿಂಗ್ ಯಾಕೆ ಇಟ್ಟೆ???
  9. ಯಾರೋ ಒಬ್ಬ ಅಭಿಮಾನಿ ಕೆಟ್ಟದಾಗಿ ಪೋಸ್ಟ್ ಹಾಕಿದ್ದಕ್ಕೆ ಇಡೀ ಅಭಿಮಾನಿಗಳನ್ನ ಯಾಕೆ ಬೈತಾ ಇದ್ದೆ???
  10. ರಮ್ಮಿಯಲ್ಲಿ ಸುದೀಪ್ ಅವರು ಬಿಟ್ಟರೆ ಬೇರೆ ಯಾವ ಆ್ಯಕ್ಟರ್ ನಿನ್ನ ಕಣ್ಣಿಗೆ ಬೀಳಲಿಲ್ಲ ಯಾಕೆ???
  11. ಪ್ರತಿ 24 ಗಂಟೆನೂ ಸುದೀಪ್ ಅವರ ವಿರುದ್ಧ ಪೋಸ್ಟ್ ಹಾಕಿದ್ದರ ಕಾರಣ ಏನು???

ಇನ್ನಷ್ಟು ಓದಿರಿ

Scroll to Top