ವೀರ ಚಂದ್ರಹಾಸ : ಬೆಳ್ಳಿತೆರೆಗೆ ಒಗ್ಗೀತೇ ಈ ಹೊಸ ಸಾಹಸ..?

Picture of Cinibuzz

Cinibuzz

Bureau Report

ಯಕ್ಷಗಾನದ ವೇಷಭೂಷಣಗಳು, ಯಕ್ಷಗಾನದ ಸನ್ನಿವೇಶಗಳೆಲ್ಲಾ ಕನ್ನಡದ ಸಿನಿಮಾಗೆ ಹೊಸತೇನೂ ಅಲ್ಲ. ಆದರೆ ಯಕ್ಷಗಾನವನ್ನೇ ಪೂರ್ಣಪ್ರಮಾಣದಲ್ಲಿ ಸಿನೆಮಾ ಮಾಧ್ಯಮಕ್ಕೆ ರೂಪಾಂತರಿಸಿರುವ ವಿಶೇಷ ಪ್ರಯತ್ನವೇ “ವೀರ ಚಂದ್ರಹಾಸ”.

ಸಾಮಾನ್ಯವಾಗಿ ಒಂದು ಪ್ರಾಕಾರದ ಕಲೆಯನ್ನು ಇನ್ನೊಂದು ಪ್ರಾಕಾರಕ್ಕೆ ಅಳವಡಿಸಿ, ಪ್ರಸ್ತುತ ಪಡಿಸುವುದು ಸುಲಭದ ಮಾತಲ್ಲ. ಈ ಹಿಂದೆ ಹಲವಾರು ರಂಗ ಪ್ರಯೋಗಗಳು ಮಾತ್ರವಲ್ಲದೆ, ಕೆ.ಎಸ್ ನರಸಿಂಹ ಸ್ವಾಮಿಯವರ “ಮೈಸೂರು ಮಲ್ಲಿಗೆ” ಕವನವನ್ನೂ ಕೂಡ ಚಿತ್ರಕತೆಗೆ ಅಳವಡಿಸಿಕೊಂಡು ಯಶಸ್ವಿಯಾದ ಉದಾಹರಣೆ ಇದೆ.

ಹಾಗೆ ನೋಡಿದರೆ, ಯಕ್ಷಗಾನದ ವೇಷಭೂಷಣಗಳು, ಯಕ್ಷಗಾನದ ಸನ್ನಿವೇಶಗಳೆಲ್ಲಾ ಕನ್ನಡದ ಸಿನಿಮಾಗೆ ಹೊಸತೇನೂ ಅಲ್ಲ. ಆದರೆ ಯಕ್ಷಗಾನವನ್ನೇ ಪೂರ್ಣಪ್ರಮಾಣದಲ್ಲಿ ಸಿನೆಮಾ ಮಾಧ್ಯಮಕ್ಕೆ ರೂಪಾಂತರಿಸಿರುವ ವಿಶೇಷ ಪ್ರಯತ್ನವೇ “ವೀರ ಚಂದ್ರಹಾಸ”.

ಕರ್ನಾಟಕದ ಕರಾವಳಿಯ ಯಕ್ಷಗಾನ ಪ್ರಸಂಗಗಳ ನಡುವೆ ಚಂದ್ರಹಾಸನ ಕತೆ ಅತ್ಯಂತ ಜನಪ್ರಿಯವಾದುದು. ʻಕುಂತಳ ದೇಶದ ಮಂತ್ರಿಯ ದುಷ್ಟಬುದ್ದಿಯ ಕಾರಣಕ್ಕೆ ಮುಂದೊಂದು ದಿನ ಅನಾಥ ಬಾಲಕನೊಬ್ಬ ಅದೇ ಕುಂತಳ ದೇಶದ ರಾಜನಾಗುತ್ತಾನೆʼ ಎಂಬ ಭವಿಷ್ಯವಾಣಿಯನ್ನು ಬ್ರಾಹ್ಮಣನೊಬ್ಬ ನುಡಿಯುತ್ತಾನೆ. ಹಾಗಾದಲ್ಲಿ, ಇದು ತನ್ನ ಮಗನನ್ನು ರಾಜನನ್ನಾಗಿ ಮಾಡುವ ಕನಸಿಗೆ ತಡೆಯಾಗುವುದೆಂದು ಎಣಿಸುವ ದುಷ್ಟಬುದ್ದಿಯು, ಆ ಬಾಲಕನನ್ನು ಸಾಯಿಸುವಂತೆ ಕಟುಕರಿಗೆ ಆದೇಶಿಸುತ್ತಾನೆ. ಆದರೆ ಆ ಬಾಲಕನು ಸಾಯದೇ ಮುಂದೆ ಬೆಳೆದು ದೊಡ್ಡವನಾಗಿ ಚಂದ್ರಹಾಸನೆಂಬ ಹೆಸರಿನಲ್ಲಿ ಕುಂತಲದ ಸಾಮಂತ ರಾಜ ಕುಳಿಂದನ ಸಾಕು ಮಗನಾಗಿ ಬೆಳೆಯುತ್ತಾನೆ. ಇದನ್ನು ಅರಿತ ದುಷ್ಟಬುದ್ದಿ ಚಂದ್ರಹಾಸನನ್ನು ಮುಗಿಸುವ ಪ್ರಯತ್ನದಲ್ಲಿ ತೊಡುಗುತ್ತಾನೆ. ಇದರಲ್ಲಿ ಆತ ಯಶಸ್ವಿಯಾಗುತಾನೋ ಇಲ್ಲವೋ, ಎಂಬುದೇ ಕತೆಯ ಮೂಲ ಧಾತು. ಆತನ ಮಗಳು ವಿಷಯೆ ಹಾಗೂ ಮಗ ಮದನ ಕತೆಯ ಮುಖ್ಯ ತಿರುವಿಗೆ ಹೇಗೆ ಕಾರಣರಾಗುತ್ತಾರೆ ಎಂಬುದು ಕೂಡ ಕುತೂಹಲ ಮೂಡಿಸುವ ಅಂಶವಾಗಿದೆ.

ಈ ಕತೆ ಈಗಾಗಾಲೇ ಭಾರತೀಯ ಚಲನಚಿತ್ರರಂಗದಲ್ಲಿ ಹಲವಾರು ಭಾಷೆಗಳಲ್ಲಿ ಚಿತ್ರವಾಗಿ ಮೂಡಿಬಂದಿರುವುದಷ್ಟೇ ಅಲ್ಲ, 1965ರಲ್ಲೇ ಡಾ.ರಾಜ್ಕುಮಾರ್ ಹಾಗೂ ಲೀಲಾವತಿಯವರ ಅಭಿನಯದಲ್ಲಿ ತೆರೆಕಂಡಿದೆ. ಆದರೆ, ರವಿ ಬಸ್ರೂರ್ ಅವರ “ವೀರ ಚಂದ್ರಹಾಸ”ನ ವಿಶೇಷತೆ ಎಂದರೆ, ಯಕ್ಷಗಾನ ಕಲೆಗೆ ಇರುವ ಮಿತಿಯನ್ನು ಅತಿಯಾಗಿ ಮೀರದೆ ಚಿತ್ರಕತೆಗೆ ಅಳವಡಿಸಿಕೊಂಡು ಚಿತ್ರೀಕರಿಸಿರುವುದು. ಅಲ್ಲಲ್ಲಿ ಕಮರ್ಷಿಯಲ್ ದೃಷ್ಟಿಕೋನದಿಂದ ಮಾಡಿಕೊಂಡ ಒಂದಷ್ಟು ಬದಲಾವಣೆಗಳು ಅತಿರೇಕವೆನ್ನಿಸುವುದಿಲ್ಲ. ಆ ಮಟ್ಟಕ್ಕೆ ರವಿ ಬಸ್ರೂರ್ ಮತ್ತವರ ತಂಡ ಪ್ರಶಂಸೆಗೆ ಅರ್ಹ. ತಾರಾಗಣದಲ್ಲಿ ನುರಿತ ಯಕ್ಷಗಾನ ಕಲಾವಿದರ ದಂಡೇ ಇದೇ. ಚಂದ್ರಹಾಸನ ಪಾತ್ರದಲ್ಲಿ ಶಿಥಿಲ್ ಶೆಟ್ಟಿ, ಮದನನಾಗಿ ಉದಯ್ ಕಡಬಾಲ್, ವಿಷಯೆಯಾಗಿ ನಾಗಶ್ರೀ ಪಾತ್ರವೇ ತಾವಾಗಿ ಜೀವಿಸಿದ್ದಾರೆ. ದುಷ್ಟಬುದ್ದಿಯಾಗಿ ಪ್ರಸನ್ನ ಶೆಟ್ಟಿಗಾರ್ ಅವರು ವಿಶೇಷವಾಗಿ ಗಮನ ಸೆಳೆಯುತ್ತಾರೆ. ಇವೆಲ್ಲದರ ನಡುವೆ, ತಾನೇನೂ ಕಡಿಮೆ ಇಲ್ಲ ಎಂಬಂತೆ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್, ಶಿವಪುಟ್ಟಸ್ವಾಮಿ ಎಂಬ ಪಾತ್ರದಲ್ಲಿ ಪ್ರತ್ಯಕ್ಷವಾಗಿ ಒಂದಷ್ಟು ನಿಮಿಷಗಳ ಕಾಲ ಮಿಂಚಿ, ತಾನು ಯಾವ ಪಾತ್ರವನ್ನಾದರೂ ನಿಭಾಯಿಸಬಲ್ಲೆ ಎಂಬದನ್ನು ಮತ್ತೊಮ್ಮೆ ನಿರೂಪಿಸುತ್ತಾರೆ. ಯಕ್ಷಗಾನ ಪಾತ್ರದಲ್ಲಿ ಶಿವಣ್ಣನ್ನನ್ನು ನೋಡುವುದೇ ಅಭಿಮಾನಿಗಳ ಪಾಲಿಗೆ ನಿಜಕ್ಕೂ ಹಬ್ಬ.

ಸಿನೆಮಾದಲ್ಲಿ ಕಾಳಿಂಗ ನಾವಡರ ಭಾಗವತಿಕೆಯಲ್ಲಿರುವ ಪದ್ಯವನ್ನು ಯಥಾವತ್ತಾಗಿ ಬಳಸಿಕೊಂಡಿರುವುದು ಯಕ್ಷಪ್ರೇಮಿಗಳಿಗೆ ಮುದ ನೀಡುತ್ತದೆ. ಆದರೆ ಚಿತ್ರದಲ್ಲಿನ ಅಬ್ಭರದ ಹಿನ್ನಲೆ ಸಂಗೀತದಲ್ಲಿ ಕೆಲವೊಂದೆಡೆ ಯಕ್ಷಗಾನ ಪದ್ಯದ ಧ್ವನಿ ಅಡಗಿಹೋದದ್ದು ಬೇಸರಕ್ಕೆ ಕಾರಣವಾಗುತ್ತದೆ. ಹಾಸ್ಯ ಸನ್ನಿವೇಶಗಳು ಯಕ್ಷಗಾನ ರಂಗದಲ್ಲಿ ಕೊಡುವಷ್ಷು ಪಂಚ್ ಮತ್ತು ಮಜಾ ತೆರೆಯಲ್ಲಿ ನೀಡಲು ವಿಫಲವಾಗಿವೆ. ಬಹುಶಃ, ಈ ಸನ್ನಿವೇಶಗಳೇ ಚಿತ್ರದ ಅವಧಿ ಒಂಚೂರು ಧೀರ್ಘವೆಂದೆನಿಸಲು ಕಾರಣವಾಗಿರುವುದೂ ನಿಜ. ಮೂಲ ಕತೆಯನ್ನು ಒಂದಷ್ಟು ವಿಸ್ತರಿಸಿ, ಈ ಚಿತ್ರದ ಎರಡನೇ ಭಾಗಕ್ಕೆ ಲೀಡ್ ಕೊಡಲಾಗಿದೆ.

ಒಟ್ಟಾರೆಯಾಗಿ ಯಕ್ಷಪ್ರೇಮಿಗಳಷ್ಟೇ ಅಲ್ಲ, ಚಿತ್ರಪ್ರೇಮಿಗಳು, ಇದು ಯಕ್ಷಗಾನದ ಚಿತ್ರರೂಪ ಎಂದು ಅರಿತು ಚಿತ್ರಮಂದಿರಕ್ಕೆ ಬಂದರೆ, ರವಿ ಬಸ್ರೂರ್ ಅವರ ಪ್ರಯತ್ನ ನಿರಾಸೆಯಂತೂ ಮೂಡಿಸದು. ಇಂಥಹ ಸಾಹಸಕ್ಕೆ ಸಾಥ್ ನೀಡಿದ ನಿರ್ಮಾಪಕ ಎನ್.ಎಸ್. ರಾಜ್‌ಕುಮಾರ್ ನಿಜಕ್ಕೂ ಅಭಿನಂದನಾರ್ಹರು.

ಇನ್ನಷ್ಟು ಓದಿರಿ

Scroll to Top